ಯಡಿಯೂರಪ್ಪ ವಿರುದ್ಧ ಮತ್ತೆ ತೊಡೆತಟ್ಟಿದ ಬೇಳೂರು
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅನೇಕ ಭ್ರಷ್ಟಾಚಾರಗಳನ್ನು ಮಾಡಿಯೂ ಮುಖ್ಯಮಂತ್ರಿ ತಮ್ಮ ಅಧಿಕಾರವನ್ನು ಇಟ್ಟುಕೊಂಡು ಕುಟುಂಬದ ರಕ್ಷಣೆ ಮಾಡುತ್ತಿದ್ದಾರೆ. ಆದರೆ, ಯಾವುದೇ ತಪ್ಪು ಮಾಡದ ನಮ್ಮನ್ನು ಪಕ್ಷದಿಂದ ಅನರ್ಹಗೊಳಿಸಿದ್ದಾರೆ. ಹೀಗಾಗಿ, 17 ಜನ ಅನರ್ಹ ಶಾಸಕರಿಗೂ ಸರ್ಕಾರದ ವಿರುದ್ಧ ನೋವಿದ್ದು, ಮುಂಬರುವ ಜಿ.ಪಂ ಹಾಗೂ ತಾ.ಪಂ.ಚುನಾವಣೆಯಲ್ಲಿ ಬೇರೆ ಪಕ್ಷಗಳಿಗೆ ಬೆಂಬಲ ನೀಡಿ ಆ ಪಕ್ಷವನ್ನು ಗೆಲ್ಲಿಸುತ್ತೇವೆ. ಇದೇ ನಮ್ಮ ಉದ್ದೇಶವಾಗಿದೆ ಎಂದರು.
ಅನರ್ಹತೆಯ ವಿಚಾರ ಸುಪ್ರೀಂಕೋರ್ಟ್ನಲ್ಲಿದ್ದು, ತೀರ್ಪಿನ ನಂತರ ಅನರ್ಹವಾಗುತ್ತೇವೆಯೋ, ಬಿಡುತ್ತೇವೆಯೋ ಎಂಬುದು ಗೊತ್ತಾಗುತ್ತದೆ. ಸದ್ಯಕ್ಕೆ ನಮ್ಮನ್ನು ಬಿಜೆಪಿಯಿಂದ ಹೊರಹಾಕಿಲ್ಲ ಎಂದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಈಶ್ವರಪ್ಪರಿಗೆ ತಾಕತ್ತಿದ್ದರೆ, ಗಂಡಸುತನವಿದ್ದರೆ ಹೊರಗೆ ಹಾಕಲಿ ಎಂದು ಸವಾಲು ಹಾಕಿದರು.
ಭ್ರಷ್ಟಾಚಾರದಿಂದ ಗಳಿಸಿರುವ ಹಣವನ್ನು ಚುನಾವಣೆಯಲ್ಲಿ ಸುರಿದು ಗೆಲ್ಲುತ್ತೇವೆ ಎಂದು ಮುಖ್ಯಮಂತ್ರಿಗಳು ಭಾವಿಸಿದ್ದಾರೆ. ಈ ಹಿಂದೆ ಸಂಸದ ಹಾಗೂ ಮುಖ್ಯಮಂತ್ರಿಗಳ ಪುತ್ರ ಬಿ.ವೈ.ರಾಘವೇಂದ್ರರ ಹೆಸರಿನಲ್ಲಿ ನಿವೇಶನವಿದ್ದರೂ ಸುಳ್ಳು ದಾಖಲೆ ನೀಡಿ, ಬಿಡಿಎ ನಿವೇಶನವನ್ನು ಪಡೆದಿದ್ದರು. ನಂತರ ಬಿಡಿಎ ನಿವೇಶನ ಪಡೆದಿರುವುದು ತಪ್ಪಾಯಿತು ಎಂದು ವಾಪಸ್ ನೀಡಿದ್ದಾರೆ. ಇಷ್ಟು ನೀಚಮಟ್ಟಕ್ಕೆ ತಂದೆ-ಮಕ್ಕಳು ಇಳಿದಿರುವುದರಿಂದ ರಾಜ್ಯದ ಜನತೆ ತಲೆತಗ್ಗಿಸುವಂತಾಗಿದೆ ಎಂದು ಹರಿಹಾಯ್ದರು.
ಕಾನೂನು ಎಲ್ಲರಿಗೂ ಒಂದೇ ಆಗಿದ್ದು, ಭ್ರಷ್ಟಾಚಾರದ ಆರೋಪ ಇನ್ನೂ ಸಾಬೀತಾಗದಿದ್ದರೂ ಕಟ್ಟಾಸುಬ್ರಹ್ಮಣ್ಯ ನಾಯ್ಡು, ರಾಮಚಂದ್ರೇಗೌಡ, ಕೃಷ್ಣಯ್ಯ ಶೆಟ್ಟಿ ಹಾಗೂ ಕರ್ಮಕಾಂಡದಲ್ಲಿ ಸಿಕ್ಕಿಬಿದ್ದ ಹರತಾಳು ಹಾಲಪ್ಪ ರಾಜೀನಾಮೆ ಕೊಟ್ಟರು. ಆದರೆ, ಸಾಕಷ್ಟು ಭ್ರಷ್ಟಾಚಾರವನ್ನು ನಡೆಸಿ ಸಿಕ್ಕಿಬಿದ್ದರೂ ಮುಖ್ಯಮಂತ್ರಿ ಮಾತ್ರ ಅಧಿಕಾರಕ್ಕೆ ಅಂಟಿಕೊಂಡಿದ್ದಾರೆ ಎಂದು ಯಡಿಯೂರಪ್ಪ ಮೇಲೆ ಕಿಡಿಕಾರಿದರು.
ಬಿವೈಆರ್ ಮೇಲೆ ಆಕ್ರೋಶ : ಸಂಸದ ಬಿ.ವೈ.ರಾಘವೇಂದ್ರರ ಬಗ್ಗೆ ಹರಿಹಾಯ್ದ ಅವರು, ಸಂಸದರಾದ ಮೇಲೆ ಅನೇಕ ಭ್ರಷ್ಟಾಚಾರವನ್ನು ನಡೆಸಿ, ಕಂಡಕಂಡಲ್ಲಿ ಆಸ್ತಿ ಮಾಡುತ್ತಿದ್ದಾರೆ. ಸಾಗರದಲ್ಲಿಯೂ ಎಸ್.ಆರ್.ಮಿಲ್, ಕೃಷ್ಣಾ ಟಾಕೀಸ್, ಹೆಗ್ಡೆ ಫಾರಂ ಸೇರಿದಂತೆ ಅನೇಕ ಆಸ್ತಿಗಳನ್ನು ಕೊಂಡುಕೊಳ್ಳಲು ಮುಂದಾಗಿದ್ದರು. ಆದರೆ, ಅದೇನಾಯಿತೋ ಗೊತ್ತಿಲ್ಲ, ತಕ್ಷಣವೇ ಅದರಿಂದ ಹಿಂದೆಸರಿದಿದ್ದಾರೆ ಎಂದರು.