ನೀರಾ ರಾಡಿಯಾ ಎಂಬ ಅನಂತ ಶಕ್ತಿಯ ರತುನ

ನೀರಾ ಬೆಳೆದಿದ್ದು ಕೀನ್ಯಾದಲ್ಲಿ, ಆಕೆ ಬಳಿ ಇರುವುದು ಬ್ರಿಟಿಷ್ ಪಾಸ್ ಪೋರ್ಟ್, ವರಿಸಿದ್ದು ಉದ್ಯಮಿ ಲಂಡನ್ ಮೂಲದ ಆರ್ಥಿಕ ಸಲಹೆಗಾರ ಜನಕ್ ರಾಡಿಯಾರನ್ನು. 50 ಪ್ಲಸ್ ವಯಸ್ಸಿನ ಈಕೆಗೆ ಮೂವರು ಮಕ್ಕಳಿದ್ದಾರೆ. ಭಾರತಕ್ಕೆ ಕಾಲಿಟ್ಟಿದ್ದು 1995ರ ಸುಮಾರಿಗೆ. ಮೊದಲಿಗೆ ಕೆಲಸಕ್ಕೆ ಸೇರಿದ್ದು ಸಹಾರಾ ಇಂಡಿಯಾ ಏರ್ ಲೈನ್ಸ್. ಸಿಂಗಪುರ ಏರ್ ಲೈನ್ ಅನ್ನು ಭಾರತಕ್ಕೆ ತರಲು ಯತ್ನಿಸುತ್ತಿದ್ದಂತೆ ಬರೀ ಕನ್ಸಲ್ಟೆಂಟ್ ಆಗಿದ್ದ ಈಕೆ ಲಾಬಿಕೋರಳಾಗಿ ಬೆಳೆಯಲು ತೊಡಗಿದ್ದಳು.
ರಾಡಿಯಾ-ಅನಂತ್ ಸಖ್ಯ:ಈ ಯೋಜನೆ ಕಾರ್ಯಗತವಾಗದಿದ್ದರೂ ಆಕೆಗೆ ಈ ಯೋಜನೆ ಮೂಲಕ ಇಬ್ಬರು ಪ್ರಭಾವಿ ವ್ಯಕ್ತಿಗಳ ಸಂಪರ್ಕ ಸಾಧ್ಯವಾಯಿತು. ಆ ಕಾಲದಲ್ಲಿ ಕೇಂದ್ರದ ನಾಗರೀಕ ವಿಮಾನಯಾನ ಸಚಿವರಾಗಿದ್ದ ಅನಂತ್ ಕುಮಾರ್ ಹಾಗೂ ಟಾಟಾ ಸಮೂಹದ ಮುಖ್ಯಸ್ಥ ರತನ್ ಟಾಟಾ. ಸಿಂಗಪುರ ಏರ್ ಲೈನ್ಸ್ ಜೊತೆಗೆ ಟಾಟಾ ಪಾರ್ಟ್ನರ್ ಆಗುವ ಸನಿಹದಲ್ಲಿ ಎಡವಿತ್ತು. ಯೋಜನೆ ಅಲ್ಲಿಗೆ ನಿಂತಿತ್ತು.
ಆದರೆ, ಆಕೆಗೆ ಏವಿಯೇಷನ್ ಇಂಡಸ್ಟ್ರಿಯ ಒಳ ಹೊರಗೂ ತಿಳಿದು ಹೋಗಿತ್ತು. ಅನಂತ್ ಅವರ ಸಾಮೀಪ್ಯ ಎಲ್ಲವನ್ನು ಕಲಿಸಿತ್ತು. 2000 ಇಸವಿಯಲ್ಲಿ ಇಡೀ ವಿಮಾನಯಾನ ಉದ್ಯಮವೇ ಆಕೆಯತ್ತ ಬೆರಗು ನೋಟದಿಂದ ನೋಡುವಂತಾಯಿತು. ಕೇವಲ 1 ಲಕ್ಷ ಬಂಡವಾಳದೊಂದಿಗೆ ಖಾಸಗಿ ಏರ್ ಲೈನ್ ಆರಂಭಿಸುವುದಾಗಿ ಘೋಷಿಸಿದ ನೀರಾ, NOC ಪಡೆದು ಕ್ರೌನ್ ಎಕ್ಸ್ ಪ್ರೆಸ್ ಎಂಬ ಹೆಸರಿನಲ್ಲಿ ದೇಶಿ ಖಾಸಗಿ ವಿಮಾನಯಾನ ಪರ್ವ ಆರಂಭಿಸುವ ಕನಸು ಕಾಣತೊಡಗಿದ್ದಳು. ಯೋಜನೆಗೆ ಅನಂತ್ ರಿಂದ ಅಷ್ಟು ಸಮ್ಮತಿ ಸಿಗದೆ, ಕನಸು ನನಸಾಗದಿದ್ದರೂ, ಕ್ರೌನ್ ಇಂಟರ್ ನ್ಯಾಷನಲ್ ಸಮೂಹಕ್ಕೆ ಸುಮಾರು 100 ಕೋಟಿ ರು. ನಷ್ಟು ವಿದೇಶಿ ಬಂಡವಾಳ ಹೂಡಿಕೆ ಹೇಗೊ ಅನುಮತಿ ಸಿಕ್ಕಿಬಿಟ್ಟಿತು.
ಇಲ್ಲಿಂದ ಮುಂದೆ ಆಕೆ ಅನಂತಾನಂತ ಯೋಚನೆಗಳೊಂದಿಗೆ ಉದ್ಯಮಿಯಾಗುವತ್ತ ದಾಪುಗಾಲಿರಿಸಿದಳು. ಈ ಯೋಜನೆ ಸ್ವಲ್ಪ ಗೊಂದಲಮಯವಾಗಿದ್ದರಿಂದ ಅನಂತ್ ಹಾಗೂ ನೀರಾ ಮೇಲೆ ಹೈಕಮಾಂಡ್ ಗೆ ಕಣ್ಣು ಬಿದ್ದಿದ್ದರಿಂದಲೋ ಏನೋ ಅನಂತ್ ಕೂಡಾ ವಿಮಾನಯಾನ ಖಾತೆ ತೊರೆಯಬೇಕಾಯಿತು.
ಟಾಟಾ ಜೊತೆ ಬೆಳವಣಿಗೆ:ಆದರೆ, ಇಲ್ಲಿಂದ ಮುಂದೆ ನೀರಾ ಬಂದು ನಿಂತಿದ್ದು, ರತನ್ ಟಾಟಾ ಮುಂದೆ. ಆಕೆಯ ಮಾತಿನ ವೈಖರಿಗೆ ಮರುಳಾದ ಜನಾನುರಾಗಿ ಟಾಟಾ, ಆಕೆಯನ್ನು ಟಾಟಾ ಸಮೂಹದ ಕಾರ್ಪೊರೇಟ್ ಕಮ್ಯೂನಿಕೇಷನ್ ವಿಭಾಗದ ನಿರ್ವಹಣೆಗೆ ನೇಮಿಸಿಕೊಂಡರು. ಇದರ ಫಲವಾಗಿ 2001ರಲ್ಲಿ ಹುಟ್ಟಿದ್ದೇ ವೈಷ್ಣವಿ ಕಾರ್ಪೊರೇಟ್ ಕಮ್ಯೂನಿಕೇಷನ್. ಮುಂದೆ ಹಲವಾರು ವರ್ಷ ಟಾಟಾ ಸಮೂಹದ ಪಿಆರ್ ಸಂಬಂಧಿತ ವ್ಯವಹಾರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ನೀರಾ ಹಾಗೂ ಆಕೆ ಕಂಪೆನಿ, ಟಾಟಾ ಸಮೂಹದ ಅಂಗವೆಂಬಂತೆ ಎಲ್ಲರಿಗೂ ಅನ್ನಿಸುವಷ್ಟರ ಮಟ್ಟಿಗೆ ಬೆಳೆಯಿತು.
ಆನಂತರ ನಿಧಾನವಾಗಿ ಒಂದೊಂದೇ ಕಂಪೆನಿಗಳನ್ನು ತನ್ನತ್ತ ಸೆಳೆದುಕೊಂಡ ಈಕೆಯ ಕಂಪೆನಿ ಸರಿ ಸುಮಾರು 50ಕ್ಕೂ ಹೆಚ್ಚು ಪ್ರಭಾವಿ ಕಂಪೆನಿಗಳನ್ನು ತನ್ನ ಗ್ರಾಹಕರ ಪಟ್ಟಿಗೆ ಸೇರಿಸಿಕೊಂಡುಬಿಟ್ಟಿತು. ಮಾಧ್ಯಮ ನಿರ್ವಹಣೆ ಸಹಾಯ ಬಯಸಿ ಬಂದಿದ್ದ ಉದ್ಯಮಿ ಮುಖೇಶ್ ಅಂಬಾನಿ ಕೂಡಾ ಈಕೆಯ ಕ್ಲೈಂಟ್ ಪಟ್ಟಿಗೆ ಸೇರಿಬಿಟ್ಟರು. ಈಕೆ ಹಾಗೂ ಈಕೆಯ ಕಂಪೆನಿ ತ್ವರಿತ ಬೆಳವಣಿಗೆ ಸ್ವತಃ ಟಾಟಾರಿಗೆ ಅಚ್ಚರಿ ಮೂಡಿಸಿತು.
ಹತ್ತು ಹಲವು ಕಾರ್ಯಗಳನ್ನು ಒಮ್ಮೆಗೆ ನಿರ್ವಹಿಸುವ ಛಾತಿಯುಳ್ಳ ಈಕೆಯ ವಿವಿಧ ಕಂಪೆನಿಗಳ ಒಟ್ಟು ಆದಾಯ ಒಂದು ಅಂದಾಜಿನ ಪ್ರಕಾರ 120 ಕೋಟಿ ರು.ಗೂ ಮೀರುತ್ತದೆ. ಉದ್ಯಮಿಯಾಗಿ ದಶಕ ಕಾಲ ಯಶಸ್ಸು ಕಂಡ ಈಕೆ ಟೆಲಿಕಾಂ ಜಗತ್ತಿನ ಅಭೂತಪೂರ್ವ ಹಗರಣದಲ್ಲಿ ಸದ್ದಿಲ್ಲದೇ ತನ್ನ ಹೆಸರನ್ನು ಕೆತ್ತಿಬಿಟ್ಟಿದ್ದಾಳೆ. 2G ತರಂಗಾಂತರ ಹರಾಜು ಹಗರಣದಲ್ಲಿ ನೀರಾ ಹೆಸರು ಕೇಳಿಬಂದ ನಂತರ ಹತ್ತು ಹಲವು ಗಣ್ಯರೊಡನೆ ಆಕೆ ನಡೆಸಿದ ಲಾಬಿಯ ಧ್ವನಿಮುದ್ರಿಕೆಗಳು ಹೊರ ಬಿದ್ದವು.
ಇದರಲ್ಲಿ ಕೇಂದ್ರ ದೂರಸಂಪರ್ಕ ಖಾತೆ ಸಚಿವರಾಗಿದ್ದ ಎ ರಾಜಾ ಸೇರಿದಂತೆ ಟ್ರಾಯ್ ಮುಖ್ಯಸ್ಥ ಪ್ರದೀಪ್ ಬೈಜಾಲ್, ಆರ್ಥಿಕ ವ್ಯವಹಾರಗಳ ಮಾಜಿ ಕಾರ್ಯದರ್ಶಿ ಸಿಎಂ ವಾಸುದೇವ್, ಡಿಐಪಿಪಿ ಮಾಜಿ ಕಾರ್ಯದರ್ಶಿ ಅಜಯ್ ದುವಾ ಹಾಗೂ ಟ್ರಾಯ್ ಮಾಜಿ ಸದಸ್ಯ ಡಿಪಿಎಸ್ ಸೇಥ್ ಹೆಸರು ಪ್ರಮುಖವಾಗಿ ಕಾಣಿಸಿಕೊಂಡಿದೆ. ತನ್ನ ಗ್ರಾಹಕ ಟಾಟಾ ಟೆಲಿ ಸರ್ವಿಸ್ ಪರ ಲಾಬಿ ನಡೆಸಿದ ನೀರಾ ನಡೆಸಿದ ಮಾತುಕತೆ ಖಾಸಗಿಯಾಗಿದ್ದು, ನ್ಯಾಯಯುತವಾಗಿ ವಂಚಿಸುವ ಕ್ರಮ ಎಂದು ವಿಶ್ಲೇಷಿಸಬಹುದು.
ರಾಡಿಯಾ ಟೆಲಿಕಾಂ ರಾಡಿ: ರಾಡಿಯಾ ಟೇಪ್ಸ್ ನಿಂದ ಆಂತರಿಕ ವಿಷಯಗಳು ಹೊರ ಬರಬಹುದು ಅದು ಸಾರ್ವಜನಿಕವಾಗಿ ಬಿತ್ತರಿಸುವುದು ತರವಲ್ಲ ಎಂದು ರತನ್ ಟಾಟಾ ಸುಪ್ರೀಂಕೋರ್ಟ್ ಮೆಟ್ಟಿಲೇರಿದರು. ಕೊನೆಗೂ ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಡಿಎಂಕೆ ನಾಯಕ ಎ.ರಾಜಾ ಅವರ ರಾಜೀನಾಮೆ ಪಡೆಯುವಲ್ಲಿ ಯಶಸ್ವಿಯಾಯಿತು. 1.76 ಲಕ್ಷ ಕೋಟಿ ರು ಹಗರಣದ ರುವಾರಿಯಾದ ರಾಜಾರಿಗೆ ಹಗರಣದಲ್ಲಿ ಬಳಕೆಯಾದ ಮೊತ್ತಕ್ಕೆ ಎಷ್ಟು ಸೊನ್ನೆಯೊಂಬುದು ಇನ್ನು ತಿಳಿದಿಲ್ಲ. ಅದೆಲ್ಲಾ ಕಾಲ್ಪನಿಕ ಸಂಖ್ಯೆ ಎಂದು ಹೇಳಿಕೆ ಸಹಾ ನೀಡಿದ್ದಾರೆ.
ವೈಷ್ಣವಿ ತೆಕ್ಕೆಗೆ ಬಿದ್ದ ಇನ್ನಿತರ ಸಂಸ್ಥೆಗಳು: ಯೂನಿಟೆಕ್, ಸ್ಟಾರ್ ಗ್ರೂಪ್ ಆಫ್ ಚಾನೆಲ್ಸ್, ವೇದಾಂತ ಹಾಗೂ ಎಚ್ ಸಿಎಲ್ ಇನ್ಫೋ ಸಿಸ್ಟಮ್ಸ್. ಮುಖೇಶ್ ಅಂಬಾನಿ ಅವರಿಂದ ಬಂದ ಆಫರ್ ನೋಡಿದ ತಕ್ಷಣ ಜಾಗೃತಳಾದ ನೀರಾ ನ್ಯೂಕಾಮ್ ಕನ್ಸಲ್ಟಿಂಗ್ ಎಂಬ ಸಂಸ್ಥೆಯನ್ನು 2008ರಲ್ಲಿ ಹುಟ್ಟು ಹಾಕಿದರು. ಮಾಧ್ಯಮ ಸಂಬಂಧಿ ವ್ಯವಹಾರಗಳನ್ನು ನೋಡಿಕೊಳ್ಳುವ ಈ ಕಂಪೆನಿಯಲ್ಲಿ ನಿವೃತ್ತಿ ಅಧಿಕಾರಿಗಳನ್ನು ಕೂಡಿಸಿರುವ ನೀರಾ ಎಲ್ಲವನ್ನು ತಾನೆ ನಿಯಂತ್ರಿಸುತ್ತಿದ್ದಾಳೆ.
ಟೆಲಿಕಾಂ, ಏವಿಯೇಷನ್, ಪವರ್ ಹಾಗೂ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವ ಆಕೆಯ ಸಂಸ್ಥೆ ಕಾಲಿಟ್ಟ ಪರಿಸರದಲ್ಲಿ ಹಣದ ಹೊಳೆ ಹರಿದಾಡುತ್ತಿರುತ್ತದೆ. ರಾಜಕಾರಣಿಗಳು, ಪತ್ರಕರ್ತರು, ಉದ್ಯಮಿಗಳು, ಅಧಿಕಾರಿಗಳು ಎಲ್ಲರೂ ಆಕೆಯ ಮಾತಿಗೆ ಮರುಳಾದವರೆ.
ನೀರಾ ಅವನತಿ ಆರಂಭ?: ಸಿಂಗೂರು ಭೂ ಹಗರಣದಲ್ಲಿ ಟಾಟಾಗೆ ದೊಡ್ಡ ಹೊಡೆತ ಬಿದ್ದರು. ಎಡರಂಗದ ಅನೇಕಾನೇಕ ಮಿತ್ರರನ್ನು ಸಂಪಾದಿಸಿದ ಈಕೆ ನ್ಯಾನೋ ಘಟಕ ಬೆಂಗಾಲದಿಂದ ಗುಜರಾತ್ ನೆಡೆಗೆ ಓಡುವಂತೆ ಮಾಡಿಬಿಟ್ಟಳು. ನ್ಯಾನೊ ಕಾರು ತಯಾರಿಸಲು ಸರಿಯಾದ ಮೂಲ ಸೌಕರ್ಯ ಸಿಗದೇ ಟಾಟಾ ಪರಿತಪಿಸುತ್ತಿದ್ದಾಗ ನೆರವಾದಳು ಇದೇ ನೀರಾ. ಸಿಂಗೂರು ಕೈ ತಪ್ಪಿದರೂ ನೀರಾ ಕೈ ಬಿಡಲಿಲ್ಲ. ಆದರೆ, 2008ರಲ್ಲಿ 2ಜಿ ತರಂಗಾಂತರ ಹಂಚಿಕೆ ಸಮಯದಲ್ಲಿ ಎ.ರಾಜಾ ಮೇಲೆ ತನ್ನ ಪ್ರಭಾವ ಬೀರತೊಡಗಿದ ನೀರಾ, ಭಾರಿ ಮೊತ್ತ ಈ ಮೊಬೈಲ್ ಫೋನ್ ವ್ಯವಹಾರ ಕುದುರಿಸಲು ತೊಡಗಿದಳು. ಈ ವ್ಯವಹಾರದಲ್ಲಿ ಲಾಭ ಪಡೆದವರೆಲ್ಲಾ ನೀರಾ ಲಾಬಿಗೆ ಒಳಗಾಗಿರುವ ಕ್ಲೈಂಟ್ ಗಳೇ ಎಂಬ ಸತ್ಯ ಬೆಳಕಿಗೆ ಬಂದಿದ್ದು ಆಕೆಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ರಾಡಿಯಾ ಟೇಪ್ಸ್ ಕಥೆ : ಗೃಹ ಇಲಾಖೆಯ ನಿರ್ದೇಶನದ ಮೇರೆಗೆ ಆದಾಯ ತೆರಿಗೆ ಇಲಾಖೆ ಸುಮಾರು 300ದಿನಗಳ ಕಾಲ ರಾಡಿಯಾ ಅವರ ಫೋನ್ ಟ್ಯಾಪ್ ಮಾಡಿತು. ಆಕೆಯ ಕಂಪೆನಿ ಮೇಲೆ ತೆರಿಗೆ ವಂಚನೆ, ಅಕ್ರಮ ವ್ಯವಹಾರದ ಆರೋಪ ಹೊರೆಸಿ Bhadas4media ಎಂಬ ಹಿಂದಿ ಪೋರ್ಟಲ್ 2010ರ ಮೇ ತಿಂಗಳಲ್ಲಿ ವರದಿ ಮಾಡಿತ್ತು. ನವೆಂಬರ್ ನಲ್ಲಿ ಓಪನ್ ಮ್ಯಾಗಜೀನ್ ರಾಡಿಯಾ ಟೇಪ್ಸ್ ಬಗ್ಗೆ ವಿಸ್ತೃತ ವರದಿ ನೀಡಿತು. ನಂತರ ಔಟ್ ಲುಕ್, ಡಿಎನ್ ಎ ಕಣಕ್ಕಿಳಿದವು. 2ಜಿ ಹಗರಣಕ್ಕೆ ಸಂಬಂಧಿಸಿದಂತೆ ರಾಜಕಾರಣಿಗಳು, ಪತ್ರಕರ್ತರು, ಅಧಿಕಾರಿಗಳು ಸೇರಿದಂತೆ ಹತ್ತು ಹಲವು ಜನರೊಡನೆ ನೀರಾ ನಡೆಸುವ ಮಾತುಕತೆಯ 5,851 ಧ್ವನಿಮುದ್ರಿಕೆಗಳನ್ನು ಸಂಗ್ರಹಿಸಿರುವುದಾಗಿ ಸಿಬಿಐ ಘೋಷಿಸಿತು.
ಇದರಲ್ಲಿ ಬರ್ಕಾ ದತ್ ಬಳಸಿ ಎ ರಾಜಾರನ್ನು ಟೆಲಿಕಾಂ ಸಚಿವರನ್ನಾಗಿಸಲು ಕಾಂಗ್ರೆಸ್ ಮೇಲೆ ಒತ್ತಡ ಹೇರಿದ್ದರಿಂದ ಹಿಡಿದು 2ಜಿ ತರಂಗಗುಚ್ಛದ ತನಕ ಕಥೆ ಬೆಳೆಯಿತು. ವಿದೇಶಿ ಮಾಧ್ಯಮಗಳು ಭಾರತೀಯ ಪತ್ರಕರ್ತರು ಹಗರಣದಲ್ಲಿ ಪಾಲ್ಗೊಂಡಿರುವ ಬಗ್ಗೆ ವರದಿ ಮಾಡಿದವು. ಹಗರಣದಲ್ಲಿರುವ ಜನರ ಪಟ್ಟಿ ಬೆಳೆಯುತ್ತಲೇ ಇದೆ. ಜೆಪಿಸಿ ತನಿಖೆಗೆ ಪ್ರತಿಪಕ್ಷಗಳ ಆಗ್ರಹಿಸಿದ್ದು ಎರಡು ವಾರಗಳ ಸಂಸತ್ತಿನ ಕಲಾಪ ನುಂಗಿದ್ದು ಆಯ್ತು. ಸದ್ಯಕ್ಕೆ ಸಿಬಿಐ 5,851 ಧ್ವನಿಮುದ್ರಿಕೆಗಳು ಹಾಗೂ 82,665 ಪುಟಗಳಷ್ಟು ಮಾಹಿತಿಗಳೊಂದಿಗೆ ರಾಡಿಯಾ ವಿರುದ್ಧ ತನಿಖೆ ನಡೆಸುತ್ತಿದೆ. ನಿರ್ಭೀತಿ, ನಿರಾಳತೆಯ ಪ್ರತಿರೂಪದಂತೆ ನೀರಾ ತನಿಖೆಗೆ ಸಹಕಾರಿಸುತ್ತಿದ್ದಾರೆ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications