ಉಗ್ರ ನಜೀರ್ ವಾಸ್ತವ್ಯ ಹೂಡಿದ್ದ ಲಕ್ಕೆರೆ ಈಗ ಸುದ್ದಿಯ ಕೇಂದ್ರ!
ಕೇರಳದಿಂದ ಶುಂಠಿ ಕೃಷಿ ಮಾಡುವ ನೆಪದಲ್ಲಿ ಬಂದ ನಜೀರ್ ಲಕ್ಕೆರೆಯ ಫಾತಿಮಾ ಎಂಬುವರ 3 ಎಕರೆ ಜಮೀನನ್ನು 18 ಸಾವಿರ ರೂಪಾಯಿಗೆ ಗುತ್ತಿಗೆ ಪಡೆದಿದ್ದನು. ಶುಂಠಿ ಕೃಷಿಯನ್ನು ನೆಪ ಮಾತ್ರಕ್ಕೆ ಮಾಡಿದ್ದನಾದರೂ ಅಲ್ಲಿ ಶೆಡ್ ನಿರ್ಮಿಸಿ ತನ್ನ ಉಗ್ರಗಾಮಿ ಚಟುವಟಿಕೆಗಳಿಗೆ ಅದನ್ನು ಬಳಸಿಕೊಂಡಿದ್ದನು.
ಕೊಡಗಿನಲ್ಲಿ ಕೇರಳದವರು ಶುಂಠಿ ಕೃಷಿ ಮಾಡುವುದು ಸಾಮಾನ್ಯವಾದುದರಿಂದ ಆ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿರಲಿಲ್ಲ. ಹಗಲೆಲ್ಲಾ ಮೌನವಾಗಿರುತ್ತಿದ್ದ ಈ ಶೆಡ್ ರಾತ್ರಿಯಾಗುತ್ತಿದ್ದಂತೆಯೇ ಗಿಜಿಗುಟ್ಟುತ್ತಿತ್ತು. ಕಾರಿನಲ್ಲಿ ಈ ಶೆಡ್ಗೆ ಜನ ಬರುತ್ತಿದ್ದರು. ಹೀಗೆ ಬರುತ್ತಿದ್ದವರಲ್ಲಿ ಕೇರಳದ ಪಿಡಿಪಿ ಮುಖಂಡ ಅಬ್ದುಲ್ ನಾಸಿರ್ ಮದನಿ ಕೂಡ ಒಬ್ಬನಾಗಿದ್ದನು. ಬೆಂಗಳೂರಿನ ಸ್ಪೋಟಕ್ಕೆ ಸಂಬಂಧಿಸಿದ ಎಲ್ಲಾ ಸ್ಕೆಚ್ ಇಲ್ಲಿಯೇ ತಯಾರಾಗಿತ್ತಾದರೂ ಸ್ಥಳೀಯರಿಗೆ ಈ ಬಗ್ಗೆ ಯಾವುದೇ ವಿಚಾರ ಗೊತ್ತಾಗದಂತೆ ಗೌಪ್ಯತೆ ಕಾಪಾಡಲಾಗಿತ್ತು. ಜೊತೆಗೆ ಕೊಡಗಿನ ಕೆಲವು ಹುಡುಗರಿಗೆ ಉಪದೇಶ ಮಾಡಿ ತನ್ನ ಸಂಘಟನೆಯತ್ತ ಸೆಳೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದ ಎನ್ನಲಾಗಿದೆ. ಇಷ್ಟಲ್ಲಾ ನಡೆಯುತ್ತಿದ್ದರೂ ಉಗ್ರನೊಬ್ಬ ಕೊಡಗಿನಲ್ಲಿಯೇ ಇದ್ದಾನೆ ಎಂಬುವುದು ಪೊಲೀಸರು ಸೇರಿದಂತೆ ಸ್ಥಳೀಯ ಗ್ರಾಮಸ್ಥರಿಗೂ ಗೊತ್ತಾಗಿರಲಿಲ್ಲ.
ಬಾಂಗ್ಲಾ ನುಸುಳುವ ಸಂದರ್ಭ ಗಡಿಯಲ್ಲಿ ನಜೀರ್ ಪೊಲೀಸರಿಗೆ ಸಿಕ್ಕಿ ಬಿದ್ದು ವಿಚಾರಣೆಯಲ್ಲಿ ನಾನು ಕೊಡಗಿನ ಹೊಸತೋಟದ ಲಕ್ಕೆರೆ ಪೈಸಾರಿಯಲ್ಲಿದ್ದೆ ಎಂಬ ರಹಸ್ಯವನ್ನು ಬಿಚ್ಚಿಟ್ಟಿದ್ದ. ಆಗ ಎಚ್ಚೆತ್ತುಕೊಂಡ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ಆತ ತಂಗಿದ್ದ ಎಂಬುವುದಕ್ಕೆ ಪುರಾವೆಗಳು ಲಭಿಸಿದವು. ಆ ನಂತರ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮದನಿಯನ್ನು ಬಂಧಿಸಿ ವಿಚಾರಣೆಗೆ ಲಕ್ಕೆರೆಗೆ ಕರೆತರಲಾಗಿತ್ತು. ಇದಿಷ್ಟು ಹಳೆಯ ಕಥೆ. ಆದರೆ ಇದೀಗ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಮದನಿ ಲಕ್ಕೆರೆಗೆ ಬಂದು ಹೋದ ಬಳಿಕ ಮಾಧ್ಯಮದ ಸೋಗಿನಲ್ಲಿ ಬಂದ ತಂಡ ಸ್ಥಳೀಯರನ್ನು ಮಾತನಾಡಿಸಿ ಕೆಲವು ಸಾಕ್ಷಿಗಳನ್ನು ಪಡೆದುಕೊಂಡು ಹೋಗಿದೆ. ಈ ಬಗ್ಗೆ ತನಿಖೆಯಾಗಬೇಕೆಂದು ಶಾಸಕ ಅಪ್ಪಚ್ಚು ರಂಜನ್ ಒತ್ತಾಯಿಸಿದ್ದರು.
ಇದೆಲ್ಲದರ ನಡುವೆ ನಿನ್ನೆ ದಕ್ಷಿಣ ವಲಯ ಪೊಲೀಸ್ ಮಹಾನಿರ್ದೇಶಕ ಎಎನ್ಎಸ್ ಮೂರ್ತಿ ಅವರ ಆದೇಶದ ಮೇರೆಗೆ ಹಾಸನ ಜಿಲ್ಲಾ ಪೊಲೀಸ್ ಉನ್ನತಾಧಿಕಾರಿ ಕೆ.ವಿ.ಶರತ್ಚಂದ್ರರವರು ತನಿಖೆಗೆ ನಿಯೋಜಿಸಿದ ಇನ್ಸ್ಪೆಕ್ಟರ್ ವೀರಭದ್ರಪ್ಪ ನೇತೃತ್ವದ ತಂಡ ಸೋಮವಾರಪೇಟೆಗೆ ಆಗಮಿಸಿದ್ದು, ಠಾಣಾಧಿಕಾರಿ ಮಹೇಶ್ ಹಾಗೂ ಸಾಕ್ಷಿದಾರರಾದ ಯೋಗಾನಂದ್ ಹಾಗೂ ಪ್ರಭಾಕರ್ ಎಂಬುವರನ್ನು ಆರಕ್ಷಕ ಉಪನಿರೀಕ್ಷಕರ ಕೊಠಡಿಯ ಬಾಗಿಲನ್ನು ಭದ್ರವಾಗಿ ಹಾಕಿ ಗೌಪ್ಯವಾಗಿ ವಿಚಾರಣೆ ನಡೆಸಿದೆಯಂತೆ.
ಇದನ್ನು ಓದಿದಾಗ ಅಚ್ಚರಿಯಾಗಬಹುದು. ಆದರೆ ಇದು ಸತ್ಯ. ಇಷ್ಟಕ್ಕೂ ಪೊಲೀಸರನ್ನೇಕೆ ವಿಚಾರಣೆಗೆ ಒಳಪಡಿಸಿದರು ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದವರಿಗೆ ಸಿಕ್ಕಿದ ಮಾಹಿತಿ ಹೀಗಿದೆ. ಅವತ್ತು ಲಕ್ಕೆರೆಗೆ ಬಂದವರು ತೆಹಲ್ಕಾ ಡಾಟ್ ಕಾಂನವರೆಂದೂ ಅದರ ವರದಿಗಾರ್ತಿ ಕೆ.ಕೆ.ಶಾಹಿನಾ ಅವರನ್ನು ವಿಚಾರಿಸಿದ ಸೋಮವಾರಪೇಟೆಯ ಠಾಣಾಧಿಕಾರಿ ಮಹೇಶ್ರವರು ಆಕೆಯ ಗುರುತಿನ ಚೀಟಿಯನ್ನು ವಶಕ್ಕೆ ತೆಗೆದುಕೊಂಡು ದೂರು ದಾಖಲಿಸಿಕೊಂಡು ಕಳಿಸಿದ್ದರಂತೆ. ಈ ಘಟನೆಗೆ ಸಂಬಂಧಿಸಿದಂತೆ ಶಾಹಿನಾ ತಿರುವನಂತಪುರದ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು, ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಈ ವಿಚಾರಣೆ ನಡೆದಿದೆ ಎನ್ನಲಾಗಿದೆ.