ಡಿ.11ರಂದು ಭ್ರಷ್ಟಾಚಾರ ಸಾಕಪ್ಪಾ 'ಸಾಕು' ಚಳವಳಿ
ಭ್ರಷ್ಟಾಚಾರ ವಿರೋಧಿ ಸಮಿತಿ, ಯುವ ಬೆಂಗಳೂರು. ದಕ್ಷಾ ಸಂಘ, ಪ್ರಜಾ ಸಂಘ, ಲೋಕಸತ್ತಾ, ಸ್ಮಾರ್ಟ್ ವೋಟ್, ಫಾರ್ವರ್ಡ್ 150, ಸ್ವಾಮಿ ವಿವೇಕಾನಂದ ಎಂಫವರ್ ಯುವ ಸಮಿತಿ, ಸಚ್ಚಿದಾನಂದ ನ್ಯಾಯಪರ ಆಂದೋಲನ, ವರ್ಲ್ಡ್ ಅಲಯನ್ಸ್ ಫಾರ್ ಯುಥ್ ಎಂಫವರ್ ಮೆಂಟ್, ಎಂಫವರ್ ಬೆಂಗಳೂರು ಸೇರಿದಂತೆ ಅನೇಕ ಸಂಘಟನೆಗಳು ಸೇರಿಕೊಂಡು ಭ್ರಷ್ಟಾಚಾರ ನಿಗ್ರಹಿಸಲು ಪಣತೊಟ್ಟಿದ್ದು, ಇದಕ್ಕಾಗಿ www.saaku.in ವೆಬ್ ಸೈಟ್ ಆರಂಭಿಸಿದೆ.
ಸುಮಾರು 60 ವರ್ಷಗಳಿಂದ ವ್ಯವಸ್ಥೆಯಲ್ಲಿ ಸಕ್ರಿಯವಾಗಿರುವ ಭ್ರಷ್ಟಾಚಾರವನ್ನು ತಡೆಯಲು ವಿವಿಧ ಸಂಘಟನೆಗಳು ಕೈಜೋಡಿಸಿದ್ದು, ಹೀಗಾಗಿ ಸಾರ್ವಜನಿಕರಲ್ಲಿ ಇದರ ಬಗ್ಗೆ ಅರಿವು ಮೂಡಿಸಲು ವೆಬ್ ಸೈಟ್ ನ್ನು ಆರಂಭಿಸಲಾಗಿದೆ. ಭ್ರಷ್ಟಾಚಾರದ ಸಮಾಜದ ವೈರಿಯಾಗಿದ್ದು, ಎಲ್ಲಿ ನೋಡಿದರೂ ಭ್ರಷ್ಟಾಚಾರ ತನ್ನ ಕಬಂದಬಾಹುಗಳನ್ನು ಚಾಚಿದೆ. ಭ್ರಷ್ಟ ರಾಜಕಾರಣಿಗಳ ಅಟ್ಟಹಾಸ ಮೇರೆ ಮೀರಿದೆ. ನೈತಿಕ ಮೌಲ್ಯಗಳು ಅಧಃಪತನ ಕಂಡು ಬಹುದಿನಗಳೆ ಆಗಿವೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ನಾವು ಆರಂಭಿಸಿರುವ ಚಳವಳಿಗೆ ವ್ಯಾಪಕ ಬೆಂಬಲ ದೊರೆಯಲಿದೆ ಎಂದು ಸಾಕು ವೆಬ್ ಸೈಟಿನ ಮುಖ್ಯಸ್ಥ ಪೃಥ್ವಿ ರೆಡ್ಡಿ ತಿಳಿಸಿದರು.
ಇತ್ತೀಚೆಗೆ ರಾಷ್ಟ್ರ ಮತ್ತು ರಾಜ್ಯ ರಾಜಕೀಯದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಮುಖ್ಯವಾಗಿ ಕೇಂದ್ರ ಮಾಜಿ ಟೆಲಿಕಾಂ ಸಚಿವ ಎ ರಾಜಾ ಅವರ 2ಜಿ ಸ್ಪೆಕ್ಟ್ರಂ ಹಗರಣ, ಕಾಮನ್ ವೆಲ್ತ್ ಗೇಮ್ಸ್ ಹಗರಣ, ಕರ್ನಾಟಕದ ಸರಕಾರದ ಭೂಹಗರಣ ಹಾಗೂ ಬಳ್ಳಾರಿಯ ಮೈನಿಂಗ್ ಹಗರಣ ಸೇರಿದಂತೆ ಸೇರಿದಂತೆ ಅನೇಕ ಹಗರಣಗಳು ಜನರನ್ನು ಶೋಷಣೆ ಮಾಡತೊಡಗಿವೆ. ಇಂಥ ಅನಿಷ್ಟಗಳ ವಿರುದ್ಧ ಸಾರ್ವಜನಿರಲ್ಲಿ ಅರಿವು ಮೂಡಿಸುವುದು ನಮ್ಮ ಏಕೈಕ ಉದ್ದೇಶ ಎಂದು ರೆಡ್ಡಿ ವಿವರಿಸಿದರು. ಭ್ರಷ್ಟಾಚಾರ ತಡೆಯಬೇಕು ಎನ್ನುವುದಾದರೆ ನೀವು ಈ ಚಳವಳಿಯಲ್ಲಿ ಪಾಲ್ಗೊಳ್ಳಿ.