ಮಾಹಿತಿ ಲೀಕ್ ಮಾಡಿದ ಅಧಿಕಾರಿಗಳಿಗೆ ಯಡ್ಡಿ ಕಿಕ್

ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿ ನಡೆದಿದೆಯನ್ನಲಾದ ಭೂಗರಣವನ್ನು ಬಯಲಿಗೆಳೆಯಲಾಗಿತ್ತು. ಈ ಹಗರಣಗಳ ತನಿಖೆ ಲೋಕಾಯುಕ್ತರ ಮುಂದೆ ಬಂದಿರುವುದು ಮತ್ತು ಮಾರ್ಚ್ 31ರೊಳಗಾಗಿ ಸಂಪೂರ್ಣ ವರದಿ ನೀಡುವುದಾಗಿ ಯೋಕಾಯುಕ್ತ ಸಂತೋಷ್ ಹೆಗಡೆ ಹೇಳಿರುವುದು ಬಿಜೆಪಿ ಸರಕಾರಕ್ಕೆ ತಲೆಬಿಸಿ ತಂದಿದೆ.
ತಮ್ಮದೇ ಭೂಹಗರಣಗಳು ಬೆಳಕಿಗೆ ಬಂದ ಮೇಲೆ ಕುರ್ಚಿಯನ್ನು ಹಾಗೂಹೀಗೂ ಉಳಿಸಿಕೊಂಡಿದ್ದ ಯಡಿಯೂರಪ್ಪ, ವಿರೋಧ ಪಕ್ಷದ ನಾಯಕರ ಭೂಹಗರಣಗಳನ್ನು ಪತ್ರಿಕೆಗಳಲ್ಲಿ ಜಾಹೀರಾತು ನೀಡುವ ಮುಖಾಂತರ ಬಯಲಿಗೆಳೆಯುವುದಾಗಿ ಬೆದರಿಸಿದ್ದರು. ಬಿಜೆಪಿ ಹೈ ಕಮಾಂಡ್ ಅವರನ್ನು ತೆಪ್ಪಗಿರಬೇಕೆಂದು ತಪರಾಕಿ ಹಾಕಿದ ಮೇಲೆ ತಮ್ಮದೇ ಕಚೇರಿಯಲ್ಲಿ ತಮ್ಮ ವಿರುದ್ಧವೇ ಕೆಲಸ ಮಾಡುತ್ತಿರುವ ಅಧಿಕಾರಿಗಳ ಮೇಲೆ ಯಡಿಯೂರಪ್ಪ ಮುಗಿಬಿದ್ದಿದ್ದಾರೆ.
ಇದಲ್ಲದೆ, ವಿರೋಧ ಪಕ್ಷಗಳ 'ಬೇಹುಗಾರರಂತೆ' ವರ್ತಿಸಿ ಪ್ರಮುಖ ದಾಖಲೆಗಳನ್ನೆಲ್ಲ ನೀಡಿದ ಅಧಿಕಾರಿಗಳ ಮೇಲೆ ಯಡಿಯೂರಪ್ಪನವರು ಕೆಂಡ ಕಾರುತ್ತಿದ್ದಾರೆ. "ಆ ರೀತಿ ಮಾಹಿತಿ ನೀಡುತ್ತಿದ್ದವರ ಪಟ್ಟಿ ತಯಾರಿಸಿ, ಬೆಂಗಳೂರಿನಿಂದ ಹೊರಗೆ ಅಟ್ಟುತ್ತೇನೆ" ಎಂದು ಹೇಳಿರುವ ಯಡೂಯರಪ್ಪನವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಒಂದು ಮಾಹಿತಿಯ ಪ್ರಕಾರ, ಈ ಅಧಿಕಾರಿಗಳು ಮುಖ್ಯಮಂತ್ರಿಗಳ ಕಚೇರಿಯಿಂದಲೇ ಮಾಹಿತಿಯನ್ನು ಸೋರಿಕೆ ಮಾಡಿದ್ದಾರೆ.
ಭೂಕಬಳಿಕೆ ಅಥವಾ ಭೂ ಒತ್ತುವರಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಮಾಹಿತಿ ನೀಡಬಾರದೆಂದು ಅಧಿಕಾರಿಗಳಿಗೆ ಕಟ್ಟಪ್ಪಣೆ ಮಾಡಲಾಗಿದೆ. ಹೀಗಾಗಿ, ವಿರೋಧ ಪಕ್ಷಗಳ ಅನೇಕ ನಾಯಕರು ಸೇರಿದಂತೆ ಸಾರ್ವಜನಿಕರಿಂದ ಮಾಹಿತಿ ಕೋರಿ ಸಲ್ಲಿಸಲಾಗಿರುವ ಅರ್ಜಿಗಳು ಧೂಳು ತಿನ್ನುತ್ತಾ ಟೇಬಲ್ ಮೇಲೆ ಬಿದ್ದಿವೆ. ಜೆಡಿಎಸ್ ನಾಯಕ ವೈಎಸ್ ವಿ ದತ್ತಾ ಅವರು ವಿಶೇಷ ಆರ್ಥಿಕ ವಲಯದಲ್ಲಿ ಬರುವ ಭೂಮಿಯ ಕುರಿತು ಅರ್ಜಿ ಸಲ್ಲಿಸಿದ್ದಾರೆ. ಪರೋಕ್ಷವಾಗಿ ಸಾರ್ವಜನಿಕ ಮಾಹಿತಿ ಪಡೆಯುವ ಹಕ್ಕನ್ನೇ ಯಡಿಯೂರಪ್ಪನವರು ಕಿತ್ತುಕೊಂಡಂತಾಗಿದೆ.
ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಪಡೆಯುವುದು ಹೇಗೆ?











Click it and Unblock the Notifications