ತ್ರಿವಳಿ ಕೊಲೆ : ಆರು ಆರೋಪಿಗಳ ಬಂಧನ
ವೈಯಾಲಿಕಾವಲ್ನ ಈಜುಕೊಳ ಬಡಾವಣೆಯ ಪ್ರಭಾಕರ ಅಲಿಯಾಸ್ ಪ್ರಭಾ (30), ಈತನ ತಮ್ಮ ಪ್ರಶಾಂತ್ ಅಲಿಯಾಸ್ ಪ್ರಶಿ (27), ಬಸಪ್ಪ ಗಾರ್ಡನ್ನ ಉಮಾಶಂಕರ್ (26), ಕೋದಂಡ ರಾಮಪುರದ ಚಿಕ್ಕಶ್ಯಾನೇಗೌಡ ಅಲಿಯಾಸ್ ಮಾಲಾಶ್ರೀ ಸೀನಾ (29), ಮಲ್ಲೇಶ್ವರದ ಪಿ.ಜಿ.ಹಳ್ಳಿ ವಿವೇಕಾನಂದ ಬ್ಲಾಕ್ನ ಸುನಿಲ್ ಅಲಿಯಾಸ್ ಹೊನ್ನವಳ್ಳಿ (21) ಹಾಗೂ ಕಿರಣ್ (22) ಬಂಧಿತರು.
ತೀವ್ರವಾಗಿ ಗಾಯಗೊಂಡಿರುವ ಚಿಕ್ಕಶ್ಯಾನೇಗೌಡ ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನೂ ಕೆಲವರು ತಲೆಮರೆಸಿಕೊಂಡಿದ್ದು, ಶೋಧ ಕಾರ್ಯ ನಡೆದಿದೆ. ಬಂಧಿತ ಪ್ರಶಾಂತ್ ವಿರುದ್ಧ ಮಲ್ಲೇಶ್ವರ ಠಾಣೆಯಲ್ಲಿ ಕೊಲೆ, ಕೊಲೆ ಯತ್ನ, ಬೆದರಿಕೆ ಮತ್ತಿತರ ಪ್ರಕರಣ ದಾಖಲಾಗಿವೆ.
ಪ್ರಕರಣದ ವಿವರ: ಮಲ್ಲೇಶ್ವರ ಸಂಪಿಗೆ ರಸ್ತೆ ಸಾಯಿಬಾಬಾ ದೇವಸ್ಥಾನ ಸಮೀಪದಲ್ಲಿರುವ ನ್ಯೂ ಶಾಂತಿ ಸಾಗರ ಹೋಟೆಲ್ನಲ್ಲಿ ಚಿಕ್ಕಶ್ಯಾನೇಗೌಡನ ಸಹೋದರಿ ಸುಶೀಲ ಹಾಗೂ ರಮೇಶ್ ಅವರ ಆರತಕ್ಷತೆ ನಡೆಯುತ್ತಿತ್ತು. ಸೀನನ ಸ್ನೇಹಿತನಾಗಿದ್ದ ಪ್ಯಾಲೇಸ್ ಗುಟ್ಟಹಳ್ಳಿಯ ವಿವೇಕಾನಂದ ಬ್ಲಾಕ್ ನಿವಾಸಿ, ರೌಡಿ ಶೀಟರ್ ಲಂಬು ನಟರಾಜ್ (24) ಹಾಗೂ ಈತನ ಸಹಚರರು ಶನಿವಾರ ರಾತ್ರಿ 10 ಗಂಟೆಗೆ ಆರತಕ್ಷತೆಗೆ ಆಗಮಿಸಿದ್ದರು.
ಲಂಬು ನಟರಾಜ್ ಊಟದ ಹಾಲ್ನಲ್ಲಿ ಕುಳಿತು ಊಟ ಮಾಡುತ್ತಿದ್ದ. ತನ್ನ ಸಹಚರರಾದ ಗಾಯತ್ರಿನಗರದ ಸೋಮಶೇಖರ ಅಲಿಯಾಸ್ ಸೋಮಿ (23) ಹಾಗೂ ವೈಯಾಲಿ ಕಾವಲ್ನ ಮುನೇಶ್ವರ ಬ್ಲಾಕ್ನ ಬಾಲಸುಬ್ರಮಣಿ ಅಲಿಯಾಸ್ ಸ್ಲಂ ಬಾಲ (23) ಕೆಳಗೆ ನಿಂತಿದ್ದರು. ಮೊದಲೇ ಸಜ್ಜಾಗಿದ್ದ ಹಂತಕರು, ಮಾರಕಾಸ್ತ್ರಗಳಿಂದ ಏಕಾಏಕಿ ದಾಳಿ ನಡೆಸಿದರು. ಕ್ಷಣಾರ್ಧದಲ್ಲಿ ಮೂರು ಹೆಣಗಳನ್ನು ಉರುಳಿಸಿ ಪರಾರಿಯಾದರು.
ಲಂಬು ನಟರಾಜ್ನ ಸಹೋದರ ನವೀನ್ ಎಂಬುವರು ನೀಡಿದ ದೂರಿನನ್ವಯ ಮಲ್ಲೇಶ್ವರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 143, 147, 148, 307, 121 (ಬಿ) ಮತ್ತು 149 ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಮೂರು ವಿಶೇಷ ತಂಡ ರಚಿಸಲಾಗಿದೆ. ಶೀಘ್ರವೇ ಉಳಿದ ಆರೋಪಿಗಳನ್ನು ಬಂಧಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಶಂಕರ ಬಿದರಿ ತಿಳಿಸಿದ್ದಾರೆ.