ಲೋಕಾಯುಕ್ತ ಎಫ್ ಐಆರ್ ಪಡೆದ ಕಟ್ಟಾ ತಲೆದಂಡ?
ಇದರಿಂದ ರಾಜ್ಯ ಸರ್ಕಾರಕ್ಕೆ ಇನ್ನೊಂದು ದೊಡ್ಡ ಆಘಾತ ಉಂಟಾಗಿದ್ದು, ಈ ಪ್ರಕರಣದಿಂದಾಗಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡುರ ತಲೆ ದಂಡವಾಗುವ ಸಾಧ್ಯತೆ ನಿಚ್ಚಳವಾಗಿದೆ. ರಾಜ್ಯದ ಸಂಪುಟ ದರ್ಜೆಯ ಸಚಿವರೊಬ್ಬರ ಮೇಲೆ ಇದೇ ಮೊದಲ ಬಾರಿಗೆ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಎಫ್ಐಆರ್ ದಾಖಲಿಸಿದ ಲೋಕಾಯುಕ್ತ ಪೊಲೀಸರು, ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡುರನ್ನು ಬಂಧಿಸಲು ಅನುಮತಿ ಕೋರಿ ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯನವರಿಗೆ ಪತ್ರ ಬರೆದಿದ್ದಾರೆ.
ವಿವಿಧ ಸೆಕ್ಷನ್ಗಳಡಿ ಎಫ್ಐಆರ್: ಸಚಿವ ಕಟ್ಟಾ ಹಾಗೂ ಅವರ ಪುತ್ರ ಸಹಿತ 11 ಮಂದಿಯ ವಿರುದ್ಧ ಸೆಕ್ಷನ್ 7,8,12, 13(1)(ಡಿ), ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಸೆ.419, 420, 465, 468, 471 ಅಯನ್ವಯ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಕೆಐಎಡಿಬಿ ಹಗರಣದಲ್ಲಿ ಈ ಹಿಂದೆ ಸಿಲುಕಿ ಜೈಲು ಪಾಲಾಗಿದ್ದ ಕಟ್ಟಾ ಸುಬ್ರಹ್ಮಣ್ಯ ನಾಯ್ಡುರ ಪುತ್ರ ಕಟ್ಟಾ ಜಗದೀಶ್ರನ್ನು ಮತ್ತೆ ಲೋಕಾಯುಕ್ತ ಪೊಲೀಸರು ವಿಚಾರಣೆಗೊಳಪಡಿಸಲು ವಶಕ್ಕೆ ತೆಗೆದುಕೊಳ್ಳುವ ಸಾಧ್ಯತೆಯಿದೆ.
2006ರಲ್ಲಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಬೃಹತ್ ಕೈಗಾರಿಕಾ ಸಚಿವರಾಗಿದ್ದ ಅವಧಿಯಲ್ಲಿ ಕೆಐಎಡಿಬಿ ಅಧಿಕಾರಿಗಳೊಂದಿಗೆ ಸೇರಿಕೊಂಡು ಕೋಟ್ಯಂತರ ರೂ.ಬೆಲೆಯ ಭೂಮಿಯನ್ನು ಕಾನೂನು, ನೀತಿ, ನಿಯಮವನ್ನು ಉಲ್ಲಂಘಿಸಿ ಇಟಾಸ್ಕ ಎಂಬ ಕೆಂಪೆನಿಗೆ ಮಂಜೂರು ಮಾಡಿದ ಆರೋಪದ ಹಿನ್ನೆಲೆಯಲ್ಲಿ ಈ ಎಫ್ಐಆರ್ ದಾಖಲು ಮಾಡಲಾಗಿದೆ.
ದೇವನಹಳ್ಳಿ ಸಮೀಪದ ಬಂಡಿಕೊಡಿಗೆಹಳ್ಳಿ ಗ್ರಾಮದ 325 ಎಕರೆ ಭೂಮಿಯನ್ನು ಪುತ್ರ ಕಟ್ಟಾ ಜಗದೀಶ್ರ ಇಟಾಸ್ಕ ಕಂಪೆನಿಗೆ ಅಕ್ರಮವಾಗಿ ಮಂಜೂರು ಮಾಡಲು ಕೆಐಎಡಿಬಿ ಅಧಿಕಾರಿಗಳೊಂದಿಗೆ ಸಚಿವ ಕಟ್ಟಾ ಒಡಂಬಡಿಕೆ ಮಾಡಿಕೊಂಡಿದ್ದರು ಎಂದು ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆರ್.ಕೆ.ದತ್ತಾ ಆರೋಪಿಸಿದ್ದಾರೆ.
ಇಟಾಸ್ಕ ಕಂಪೆನಿಯ ಪರವಾಗಿ ಸಚಿವರ ಕುಟುಂಬ, ಅವರ ಸಹಚರರು, ಇತರ ಕೆಲವು ರೈತರಿಂದ ಭೂಸ್ವಾಧೀನಕ್ಕೆ ಒಪ್ಪಂದ ಪತ್ರ ಸಲ್ಲಿಕೆ ಮಾಡಿದ ಪ್ರಕ್ರಿಯೆಯಲ್ಲಿ ಹಲವಾರು ಅಕ್ರಮಗಳು, ನಕಲಿ ದಾಖಲೆ ಸೃಷ್ಟಿ, ಸರಕಾರಕ್ಕೆ ಸುಳ್ಳು ಮಾಹಿತಿ ಸಲ್ಲಿಸುವಿಕೆ, ಬಲವಂತ ಮತ್ತು ಸರಕಾರದ ನಿಯಮಗಳ ಉಲ್ಲಂಘನೆ ನಡೆದಿದೆ ಎಂದು ಅವರು ವಿವರ ನೀಡಿದ್ದಾರೆ.
ಇಟಾಸ್ಕ ಎಂಬ ಸಾಫ್ಟ್ಟ್ವೇರ್ ಕಂಪೆನಿ ಸ್ಥಾಪಿಸಿ ಉದ್ಯೋಗ ಮಿತ್ರ ಯೋಜನೆಯಡಿ ಇದನ್ನು ನೋಂದಣಿ ಮಾಡಿಸಿದ್ದರು. ಈ ಸಂಸ್ಥೆಯ ಮೂಲಕ ನೂರಾರು ಎಕರೆ ಭೂಮಿಯನ್ನು ಕಾನೂನು ಬಾಹಿರವಾಗಿ ಸ್ವಾಧೀನಪಡಿಸಿ ಕೊಂಡಿರುವುದಲ್ಲದೆ, ಸರಕಾರಿ ಭೂಮಿಗೆ ಪರಿಹಾರವನ್ನೂ ಕೂಡ ಪಡೆದಿದ್ದ ಆರೋಪ ಸಚಿವ ಕಟ್ಟಾ ಹಾಗೂ ಅವರ ಪುತ್ರನ ಮೇಲೆ ಹೊರಿಸಲಾಗಿದೆ.