ಗೌಡರ ಅಕ್ರಮ ಆಸ್ತಿ ಬಡವರಿಗೆ ಹಂಚುವೆ
ಹಾಸನ ಜಿಲ್ಲೆಯ ಅರಕಲಗೂಡು ಮತ್ತು ಹೊಳೆ ನರಸೀಪುರ ತಾಲ್ಲೂಕುಗಳಲ್ಲಿ ದೇವೇಗೌಡ ಅವರ ಕುಟುಂಬವರ್ಗ 82.1 ಎಕರೆ ಸರಕಾರಿ ಭೂಮಿಯನ್ನು ಕಬಳಿಸಿದ್ದು, ಈ ವಾರದೊಳಗೆ ಈ ಜಮೀನನ್ನು ಸರಕಾರ ವಶಪಡಿಸಿಕೊಂಡು ಬಡವರಿಗೆ ಹಂಚುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.
ನಮ್ಮ ಆಸ್ತಿಪಾಸ್ತಿಯ ಸ್ಥಳಗಳಿಗೆ ಮುಖ್ಯಮಂತ್ರಿ ಭೇಟಿ ನೀಡಿ ಕಾನೂನು ಬಾಹಿರವೆಂದು ಕಂಡ ಬಂದರೆ ಅವುಗಳನ್ನು ಮುಟ್ಟುಗೋಲು ಹಾಕಿಕೊಂಡು ದಲಿತರಿಗಾದರೂ ಕೊಡಲಿ ಇಲ್ಲವೇ ಮಕ್ಕಳಾದ ರಾಘವೇಂದ್ರ ಮತ್ತು ವಿಜಯೇಂದ್ರ ಅವರಿಗಾದರೂ ಹಂಚಲಿ ಎಂದು ಕುಮಾರಸ್ವಾಮಿ ಪ್ರತಿ ಸವಾಲು ಎಸೆದಿದ್ದಾರೆ.
ಹಾಸನದ ಅರಕಲಗೂಡು ಮತ್ತು ಹೊಳೆನರಸೀಪುರವಷ್ಟೇ ಅಲ್ಲದೆ ಬೆಂಗಳೂರು ಬಳಿಯ ಬಿಡದಿಯ ತಾಲ್ಲೂಕು ಕೇತಗಾನಹಳ್ಳಿಯಲ್ಲಿ ಕುಮಾರಸ್ವಾಮಿ ತಮ್ಮ ಚಿಕ್ಕಮ್ಮನಿಂದ ಪಡೆದಿರುವ 22.6 ಎಕರೆ ಜಮೀನು ಕೂಡ ಅಕ್ರಮ ಎಂದು ಮುಖ್ಯಮಂತ್ರಿಗಳು ಆಪಾದಿಸಿದ್ದಾರೆ. ಈ ಜಮೀನನ್ನು ದೇವೇಗೌಡರ ಕುಟುಂಬ ವರ್ಗ ತಕ್ಷಣವೇ ವಾಪಸು ಮಾಡದೆ ಹೋದರೆ ವಾರದೊಳಗೆ ತಾವೇ ಸ್ಥಳಕ್ಕೆ ಭೇಟಿ ವಾಪಸು ಪಡೆದು ಬಡವರಿಗೆ ಹಂಚಲಾಗುವುದು ಎಂದು ಯಡಿಯೂರಪ್ಪ ಎಚ್ಚರಿಸಿದ್ದಾರೆ.