ಯಡ್ಡಿಜೀ, ಹಗರಣ ಕುರಿತ ಜಾಹೀರಾತು ನಿಲ್ಲಿಸಿ : ಗಡ್ಕರಿ
ಹಿಂದಿನ ಸರ್ಕಾರಗಳ ಹಗರಣಗಳನ್ನು ಕೆದಕುವ ಬದಲು, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರವನ್ನು ಮುನ್ನಡೆಸಿ. ಯಾವುದೇ ಕಾರಣಕ್ಕೂ ಪ್ರತಿಪಕ್ಷಗಳ ಟೀಕೆಗೆ ಆಹಾರವಾಗಬೇಡಿ. "ಆಡಿಕೊಂಡು ನಗುವವರ ಮುಂದೆ ಎಡವಿ ಬಿದ್ದು "ನಗೆಪಾಟಲಿಗೆ ಗುರಿಯಾದರೆ ನಾವೇನು ಮಾಡಲು ಸಾಧ್ಯವಿಲ್ಲ ಎಂದು ತೀಕ್ಷ್ಣವಾಗಿ ಯಡಿಯೂರಪ್ಪ ಅವರಿಗೆ ಕಿವಿಮಾತು ಹೇಳಿದ್ದಾರೆ.
ಮೊದಲು ಜನರ ವಿಶ್ವಾಸ ಗಳಿಸಿ :ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ಎದುರಾಗಿರುವ ಸಂದರ್ಭದಲ್ಲಿ ಜನತೆಗೆ ನಿಮ್ಮ ಮೇಲೆ ಉಂಟಾಗಿರುವ ಅನುಮಾನಗಳನ್ನು ಮೊದಲು ಪರಿಹರಿಸಲು ಯತ್ನಿಸಿ. ಹಗರಣಗಳ ಕುರಿತು ಜಾಹೀರಾತು ನೀಡಿದರೆ ಜನತೆ ನಂಬುವುದಿಲ್ಲ. ನಿಮ್ಮ ಕುರ್ಚಿ ಉಳಿಸಿಕೊಳ್ಳಲು ಏನೆಲ್ಲಾ ಮಾಡಬೇಕಾಯಿತು ಎಂಬುದು ನೆನಪಿರಲಿ. ಪ್ರತಿಪಕ್ಷವನ್ನು ವಿನಾಕಾರಣ ಕೆಣಕಿ, ನಮ್ಮ ಪಕ್ಷದ ಶಾಸಕರನ್ನು ಕಳೆದುಕೊಳ್ಳಬೇಡಿ. ಪಕ್ಷದ ಯಾವೊಬ್ಬ ಶಾಸಕನು ಪಕ್ಷ ತೊರೆದು ಹೊರ ಹೋಗದಂತೆ ತಡೆಯಲು ನಿಮಗೆ ಸಾಮರ್ಥ್ಯವಿದೆಯೆ ಎಂಬ ಪ್ರಶ್ನೆಯನ್ನು ಯಡಿಯೂರಪ್ಪ ಅವರಿಗೆ ಬಿಜೆಪಿ ಹೈ ಕಮಾಂಡ್ ಕೇಳಿದೆ.
ಕೃಷ್ಣ ಉದಾಹರಣೆ ನೀಡಿದ ಬಿಜೆಪಿ ಹೈ ಕಮಾಂಡ್ : ಈ ಹಿಂದೆ ಇದೇ ರೀತಿ ಸರ್ಕಾರದ ಸಾಧನೆಗಳ ಬಗ್ಗೆ ಜಾಹೀರಾತು ನೀಡಿದ್ದ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಸರ್ಕಾರದ ಗತಿ ಏನಾಯಿತು ಎಂಬುದರ ಅರಿವಿರಲಿ. ಕೌಟುಂಬಿಕ ಅಥವಾ ವಯಕ್ತಿಕ ಕಲಹಗಳಿಗೆ ಸರ್ಕಾರವನ್ನು ವೇದಿಕೆಯಾಗಿ ಬಳಸಬೇಡಿ ಎಂದು ಯಡಿಯೂರಪ್ಪ ಅವರಿಗೆ ಗಡ್ಕರಿ ಸೂಚಿಸಿದ್ದಾರೆ.
ತಮ್ಮನ್ನು ಮುಖ್ಯಮಂತ್ರಿಯಾಗಿ ಮುಂದುವರೆಸಿದ್ದಕ್ಕೆ ಕೃತಜ್ಞತೆ ಸೂಚಿಸಲು ಮಂಗಳವಾರವೇ ದೆಹಲಿ ತಲುಪಿದ್ದ ಯಡಿಯೂರಪ್ಪ ಇಂದು ಬಿಜೆಪಿ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಬೆಳಗ್ಗೆ ಕರ್ನಾಟಕ ಭವನದಲ್ಲಿ ರಾಜ್ಯದ ಸಂಸದರೊಡನೆ ಉಪಾಹಾರ ಸೇವಿಸಿದರು. ಮಧ್ಯಾಹ್ನ ಎಲ್ ಕೆ ಅಡ್ವಾಣಿ, ಸುಷ್ಮಾ ಸ್ವರಾಜ್, ರಾಜನಾಥ್ ಸಿಂಗ್, ಅರುಣ್ ಜೇಟ್ಲಿ, ಮುರಳಿ ಮನೋಹರ್ ಜೋಷಿ, ಶಾಂತಕುಮಾರ್ ಮತ್ತಿತ್ತರ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಕೊನೆ ಕ್ಷಣದಲ್ಲಿ ಗಡ್ಕರಿ ಜೊತೆ ಮಾತುಕತೆ ನಡೆಸಿದ ಸಿಎಂಗೆ ಭರಪೂರವಾಗಿ ಸಲಹೆ ಸೂಚನೆಗಳನ್ನು ಗಡ್ಕರಿ ಅವರು ನೀಡಿ ಕಳಿಸಿದ್ದಾರೆ.