ಆರೆಸ್ಸೆಸ್ ವತಿಯಿಂದ ಹಿಂದೂ ಸಮಾಜೋತ್ಸವ

ಹಿಂದೂ ಸಮಾಜೋತ್ಸವದ ಉದ್ದೇಶ : ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಸಂಕಲ್ಪ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಕಳೆದ ಆರು ಶತಮಾನಗಳಿಂದ ನಡೆದಿರುವ ಹೋರಾಟ ಇಂದು ಪ್ರಮುಖ ತಿರುವನ್ನು ಪಡೆದಿದೆ. ಅಲಹಾಬಾದ್ ನ್ಯಾಯಪೀಠದ ತೀರ್ಪಿನಲ್ಲಿ ವಿವಾದಿತ ಜಾಗವು ಶ್ರೀರಾಮ ಜನ್ಮಸ್ಥಾನ ಎಂದು ದೃಢಪಟ್ಟಿದೆ. ಸಾವಿರಾರು ಸಾಕ್ಷ್ಯಗಳು ಹಿಂದುಗಳ ಪರವಾಗಿ ಇದ್ದರೂ, ನ್ಯಾಯಾಲಯವು ಇದನ್ನು ರಾಮ ಜನ್ಮಸ್ಥಾನವೆಂದು ಸಾರಿದರೂ ದೇಶ ಆಳುತ್ತಿರುವ ನಾಯಕರಿಗೆ ಈ ಸತ್ಯವನ್ನು ಗೌರವಿಸುವ ಧೈರ್ಯವಿಲ್ಲ.
ಸಾಧುಸಂತರ ಸಮುದಾಯದ ಸಂಕಲ್ಪ, ಕೋಟ್ಯಾಂತರ ದೇಶವಾಸಿಗಳ ಆಶಯ, ಲಕ್ಷಾಂತರ ರಾಮಭಕ್ತರ ಬಲಿದಾನಗಳು ಸಾರ್ಥಕವಾಗಬೇಕಾದರೆ ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾನ ಭವ್ಯವಾದ ಮಂದಿರ ನಿರ್ಮಾಣವಾಗಲೇ ಬೇಕು. ಇದು ಸಾಧ್ಯವಾಗುವುದು ಪ್ರಬಲವಾದ ಜನ ಸಮರ್ಥನೆಯಿಂದ. ಎಲ್ಲ ಹಿಂದುಗಳು ಒಂದಾಗಿ ಇದಕ್ಕೆ ಒತ್ತಾಯ ಮಾಡಿದಾಗ ಮಾತ್ರ ಸರ್ಕಾರವು ಬಾಗುತ್ತದೆ. ವೈಭವಪೂರ್ಣ ರಾಮಮಂದಿರದ ನಿರ್ಮಾಣದ ಹಾದಿ ಸುಗಮವಾಗಲಿದೆ.
ಕಾಶ್ಮೀರ ಸಮಸ್ಯೆ : ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಈಗಿರುವ ಜಮ್ಮು ಕಾಶ್ಮೀರದ ಜೊತೆಗೆ ಪಾಕಿಸ್ಥಾನದ ವಶದಲ್ಲಿರುವ ಗಿಲ್ಗಿಟ್, ಬಾಲ್ಟಿಸ್ಥಾನ ಮುಂತಾದ ಪ್ರದೇಶಗಳು, ಚೀನಾದ ವಶದಲ್ಲಿರುವ ಅಕ್ಸಯ್ಚಿನ್ ಇವೆಲ್ಲವು ನಮ್ಮ ದೇಶದ ಭಾಗವೇ. ಹತ್ತಾರು ಸಾವಿರ ವರ್ಷಗಳಿಂದ ರೂಪಿತವಾದ ಸಾಂಸ್ಕೃತಿಕ ಸಂಬಂಧ ಕಾರಣದಿಂದಾಗಿ ಪ್ರತಿಯೊಬ್ಬ ದೇಶವಾಸಿಯೂ 'ಕಾಶ್ಮೀರ ನಮ್ಮದು" ಎಂದು ಘೋಷಿಸುತ್ತಾನೆ. ಆದರೆ ಪಾಕಿಸ್ಥಾನದ ಷಡ್ಯಂತ್ರ, ಮತಾಂಧರ ಕುತಂತ್ರ ಮತ್ತು ಭಾರತ ದೇಶದ ನಾಯಕತ್ವದ ದೃಢನಿಲುವುಗಳ ಕೊರತೆಯಿಂದಾಗಿ ಕಾಶ್ಮೀರದ ಜನ ಇಂದು ಅತಂತ್ರರಾಗಿದ್ದಾರೆ.
ಈಗಿನ ಕೇಂದ್ರ ಸರಕಾರವು ಪ್ರತ್ಯೇಕತೆಯ ಕೂಗಿಗೆ ಉಗ್ರ ಕ್ರಮ ಕೈಗೊಳ್ಳುವುದನ್ನು ಬಿಟ್ಟು, ಅವರ ಬೆದರಿಕೆಯ ತಂತ್ರಗಳಿಗೆ ಶರಣಾಗುವ ಲಕ್ಷಣಗಳೇ ಕಾಣುತ್ತಿವೆ. ಅಮೇರಿಕಾ, ಪಾಕಿಸ್ಥಾನ ಹಾಗೂ ಚೀನಾ ಕೂಡಾ ಈ ಬೆಂಕಿಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಕೆಲಸದಲ್ಲಿ ತೊಡಗಿವೆ. ನಮ್ಮ ಸಮಸ್ಯೆಯನ್ನು ನಾವೇ ಪರಿಹರಿಸಿಕೊಳ್ಳಬೇಕು. ಬೇರೆಯವರಿಂದ ಇದನ್ನು ನಿರೀಕ್ಷಿಸಲಾಗದು. ಕಾಶ್ಮೀರ ಸಮಸ್ಯೆಯು ಎಲ್ಲ ಭಾರತೀಯರದ್ದು. ಇಡೀ ದೇಶ ಒಂದಾಗಿ ಧ್ವನಿ ಗೂಡಿಸಿದಾಗ ಮಾತ್ರ ಇದಕ್ಕೆ ಪರಿಹಾರ ಸಿಗಬಲ್ಲದು.
ಹಿಂದೂ ಭಯೋತ್ಪಾದನೆ ಎಂಬ ಷಡ್ಯಂತ್ರ : ಸಗಟು ಮುಸ್ಲಿಂ ಓಟ್ ಬ್ಯಾಂಕ್ ಮೇಲೆ ಕಣ್ಣಿರಿಸಿರುವ ನಮ್ಮ ದೇಶದ ಕೆಲವು ಕುಂತಂತ್ರಿ ರಾಜಕಾರಣಿಗಳು ಹಿಂದೂ ಸಂಘಟನೆಗಳನ್ನು ಭಯೋತ್ಪಾದಕ ಸಂಘಟನೆಗಳೆಂದು ಅಪಪ್ರಚಾರ ಮಾಡಲಾರಂಭಿಸಿದ್ದಾರೆ. ಈ ಹಿಂದೆ ಕಂಚಿ ಶಂಕರಾಚಾರ್ಯ, ಬಾಬಾರಾಮ್ದೇವ್ರಂತಹ ಸಾಧು ಸಂತರಿಗೆ ಕಿರುಕುಳ ನೀಡಿದ್ದ ಹಿಂದು ವಿರೋಧಿ ಶಕ್ತಿಗಳು ಇದೀಗ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್)ದ ಪ್ರಮುಖರನ್ನು ಗುರಿಯಾಗಿರಿಸಿಕೊಂಡು, ಸಂಘದ ವರ್ಚಸ್ಸಿಗೆ ಕಪ್ಪು ಮಸಿ ಬಳಿಯುವ ಪ್ರಯತ್ನ ಮಾಡುತ್ತಿದೆ.
ದೇಶಾದ್ಯಂತ ಸಾವಿರಾರು ಸಂಖ್ಯೆಯ ಸಾಮಾಜಿಕ ಪರಿವರ್ತನೆಯ ಚಟುವಟಿಕೆಗಳಲ್ಲಿ ತೊಡಗಿರುವ ಆರೆಸ್ಸೆಸ್ನ್ನು ಭಯೋತ್ಪಾದನೆಯಂತಹ ಕರಾಳ ಮುಖದೊಂದಿಗೆ ಜೋಡಿಸುವ ಮೂಲಕ ಹಿಂದೂ ಸಂಘಟನೆಗಳ ಮನೋಬಲ ಕುಗ್ಗಿಸುವ ಕೆಟ್ಟಕೆಲಸಕ್ಕೆ ಕೆಲವು ರಾಜಕಾರಣಿಗಳು ಕೈ ಹಾಕಿದ್ದಾರೆ. ಆದರೆ ಹಿಂದೂ ಸಂಘಟನೆಗಳು ಇದನ್ನು ಪ್ರಜಾಪ್ರಭುತ್ವದ ರೀತಿಯಲ್ಲೇ ಸಮರ್ಥವಾಗಿ ಎದುರಿಸಲಿದೆ. ಹಿಂದೂಜನ ಶಕ್ತಿ ಎದ್ದು ನಿಂತು ಈ ಷಡ್ಯಂತ್ರವನ್ನು ವಿಫಲಗೊಳಿಸುವುದೇ ಸರಿಯಾದ ಮಾರ್ಗ ಎಂದು ಆರೆಸ್ಸೆಸ್ ಅಭಿಪ್ರಾಯಪಟ್ಟಿದೆ.
ಹಿಂದೂ ಸಮಾಜೋತ್ಸವ ಕುರಿತು ಈಗಾಗಲೇ ಭರದ ಸಿದ್ದತೆ ನಡೆಯುತ್ತಿದ್ದು ಬಹುತೇಕ ಎಲ್ಲ ತಾಲೂಕುಗಳಲ್ಲಿ ಸಮಾಜೋತ್ಸವ ನಡೆಯಲಿದೆ. ಸಮಾಜೋತ್ಸವದ 3 ಪ್ರಮುಖ ಉದ್ದೇಶಗಳ ಕುರಿತು ಕಿರು ವಿಡಿಯೋ ಸರಣಿಗಳನ್ನು ಬಿಡುಗಡೆಗೊಳಿಸಲಾಗಿದೆ. ಈ ಪೈಕಿ ಅಯೋಧ್ಯೆ ಕುರಿತ ಕನ್ನಡ ವಿಡಿಯೋ ಇಲ್ಲಿದೆ.












Click it and Unblock the Notifications