ಬೆಂಗಳೂರಿನಲ್ಲಿ ಮುಂದುವರಿದ ಟೆಕ್ಕಿಗಳ ಆತ್ಮಹತ್ಯೆ ಸರಣಿ
ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಜಕ್ಕಸಂದ್ರದಲ್ಲಿ ಪೇಯಿಂಗ್ ಗೆಸ್ಟ್ ಆಗಿದ್ದ ಮಧ್ಯಪ್ರದೇಶ ಮೂಲದ ದೀಪಾಂಜಲಿ ಅವಷ್ಟಿ (24) ಎಂಬ ಯುವತಿ ಕಳೆದ ರಾತ್ರಿ 10.30ರ ಸುಮಾರಿಗೆ ನೇಣು ಹಾಕಿಕೊಂಡು ಜಗವನ್ನು ತೊರೆದಿದ್ದಾರೆ.
ಅವರು ಟ್ರಾನ್ಸ್ ಎಂಬ ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅವರು ನೇಣಿಗೆ ಶರಣಾಗಲು ವಿಫಲ ಪ್ರೇಮವೇ ಇರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಅವರ ಪಾಲಕರು ಮಧ್ಯಪ್ರದೇಶದಿಂದ ಇಂದು ಬೆಂಗಳೂರಿಗೆ ಬರುತ್ತಿದ್ದು, ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ಹೇಳಿದ್ದಾರೆ.
ಮತ್ತೊಂದು ಘಟನೆಯಲ್ಲಿ ದೆಹಲಿ ಮೂಲದ ಸಾಫ್ಟ್ ವೇರ್ ಇಂಜಿನಿಯರ್ ಯೋಗೇಶ್ ಮಿಶ್ರಾ (35) ಎಂಬುವವರು ಜೆಪಿನಗರದಲ್ಲಿರುವ ತಮ್ಮ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾರೆ. ಅವರು ಬನ್ನೇರುಘಟ್ಟದಲ್ಲಿರುವ ನೆಕ್ಟ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಅಸಹಜ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕಳೆದ ತಿಂಗಳಷ್ಟೆ, ಸಾಫ್ಟ್ ವೇರ್ ಇಂಜಿನಿಯರಾಗಿದ್ದ ವೈದ್ಯರ ಪತ್ನಿ ವಾಣಿ ಎಂಬುವವರು ಆಜಾದ್ ನಗರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ಸಿಸ್ಕೋ ಕಂಪನಿಯಲ್ಲಿದ್ದರು. ಮತ್ತೊಂದು ಘಟನೆಯಲ್ಲಿ ವರದಕ್ಷಿಣೆ ಕಿರುಕುಳ ತಾಳಲಾರದೆ ಪ್ರತಿಮಾ ಎಂಬ ಮಹಿಳೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ಮ್ಯಾಗ್ನಾ ಇನ್ಫೋಟೆಕ್ ಕಂಪನಿಯಲ್ಲಿ ಕೆಲಸಕ್ಕಿದ್ದರು. ಆಗಸ್ಟ್ ನಲ್ಲಿ ಟಿಸಿಎಸ್ ಕಂಪನಿಯಲ್ಲಿ ಟ್ರೈನಿಯಾಗಿ ಕೆಲಸಕ್ಕೆ ಸೇರಿದ್ದ ಹದಿಹರೆಯದ ಯುವಕನೊಬ್ಬ ಕಚೇರಿಯ 11ನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದ. ಇದೇ ವರ್ಷದ ಜನವರಿಯಲ್ಲಿ ಕೂಡ ವಿಪ್ರೋ ಕಂಪನಿಯ ಉದ್ಯೋಗಿ ಎಚ್ಎಸ್ಆರ್ ಲೇಔಟಿನಲ್ಲಿ ನೇಣು ಹಾಕಿಕೊಂಡಿದ್ದರು.