ಭೂ ಹಗರಣ ತನಿಖೆಗೆ ನ್ಯಾ. ಪದ್ಮರಾಜ್ ಆಯೋಗ
ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ಅವಧಿಯಿಂದ ಯಡಿಯೂರಪ್ಪರ ಕಾಲಾವಧಿಯವರೆಗೆ ವಿವಿಧ ಮುಖ್ಯಮಂತ್ರಿಗಳ ಕಾಲಾವಧಿಯಲ್ಲಿ ನಡೆದಿರುವ ಎಲ್ಲ ರೀತಿಯ ಡಿನೋಟಿಫಿಕೇಶನ್ಗಳ ಕುರಿತು ತನಿಖೆ ನಡೆಸಿ ಸಮಗ್ರ ವರದಿಯನ್ನು ಒಂದು ವರ್ಷಾವಧಿಯೊಳಗೆ ನೀಡುವಂತೆ ಸರ್ಕಾರ ಕೋರಿದೆ.
ಭೂ ಹಗರಣದಿಂದ ಹೊರಬರಲು ಸರ್ಕಾರ ಇತ್ತೀಚೆಗೆ ನಡೆದ ಸಂಪುಟ ಸಭೆಯಲ್ಲಿ ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಾಧೀಶರ ಮೂಲಕ ತನಿಖೆ ನಡೆಸಲು ತೀರ್ಮಾನಿಸಿತ್ತು. ಆದರೆ, ಸುಪ್ರೀಂ ಕೋರ್ಟಿನ ನ್ಯಾಯಾಧೀಶರು ತನಿಖೆಗೆ ಮುಂದೆ ಬಾರದ ಕಾರಣ ಹೈಕೋರ್ಟಿನ ನ್ಯಾಯಾಧೀಶರ ಮೂಲಕ ತನಿಖೆ ನಡೆಸಲು ನಿರ್ಧರಿಸಿ ಆದೇಶ ಹೊರಡಿಸಿದೆ.
* ಭೂ ಸ್ವಾಧೀನಪಡಿಸಿಕೊಳ್ಳಲು ಬಿಡಿಎ ಹೊರಡಿಸಿದ್ದ ಅಧಿಸೂಚನೆಯನ್ನು ಅಕ್ರಮವಾಗಿ ಡಿನೋಟಿಫೈ ಮಾಡಿರುವ ಬಗ್ಗೆ.
* ಬಿಡಿಎ ಕಾನೂನು ಬಾಹಿರವಾಗಿ ಜಿ-ಕೆಟಗರಿಯ ನಿವೇಶನಗಳನ್ನು ಹಂಚಿಕೆ ಮಾಡಿರುವುದು.
* ಕೆಐಎಡಿಬಿಯಿಂದ ಕಾನೂನು ಬಾಹಿರವಾಗಿ ಕೈಗಾರಿಕಾ ನಿವೇಶನಗಳು ಮತ್ತು ಕೈಗಾರಿಕಾ ಪ್ರದೇಶ ಹಂಚಿಕೆ ಮಾಡಿರುವುದು.
* ಗೃಹ ಮಂಡಳಿಯಿಂದ ಆದ ಅಕ್ರಮ ಡಿನೋಟಿಫೈ ಬಗ್ಗೆ.
* ನಗರ ಸ್ಥಳೀಯ ಸಂಸ್ಥೆಗಳಲ್ಲಿ ಭೂ ಸ್ವಾದೀನ ಕಾಯ್ದೆಯಡಿ ಸ್ವಾಧೀನಪಡಿಸಿಕೊಳ್ಳಲು ಹೊರಡಿಸಿದ್ದ ಅಧಿಸೂಚನೆಯನ್ನು ಕಾನೂನುಬಾಹಿರವಾಗಿ ರದ್ದುಪಡಿಸಿದ ಪ್ರಕರಣಗಳು.
* ಈ ಮೇಲ್ಕಂಡ ಪ್ರಕರಣಗಳಲ್ಲಿ ಭಾಗಿಯಾದವರನ್ನು ಪತ್ತೆ ಹಚ್ಚಿ ಅಕ್ರಮಗಳಿಗೆ ಅವರನ್ನು ಜವಾಬ್ದಾರರನ್ನಾಗಿಸುವುದು.
* ಅಕ್ರಮಗಳು ನಡೆಯದಂತೆ ಕೈಗೊಳ್ಳಬೇಕಾದ ಪರಿಹಾರ ಕ್ರಮಗಳನ್ನು ಸರ್ಕಾರಕ್ಕೆ ನೀಡುವುದು.
* ಇನ್ನಿತರೆ ಭೂ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಡೆದಿರುವ ಅಕ್ರಮಗಳ ಬಗ್ಗೆಯೂ ತನಿಖೆ ನಡೆಸಬಹುದು. ನಡೆದಿರುವ ಅಕ್ರಮಗಳ ನಡೆದಿರುವ ಸ್ಥಳಗಳಿಗೆ ತೆರಳಿ ವಿಚಾರಣೆ ನಡೆಸುವ ಅಧಿಕಾರ ಆಯೋಗಕ್ಕಿದೆ.
ಲೋಕಾಯುಕ್ತರನ್ನು ಸರ್ಕಾರ ಮರೆತಿದ್ದು ಏಕೆ?: ಅಕ್ರಮ ಗಣಿಗಾರಿಕೆ, ಭ್ರಷ್ಟಾಚಾರ ವಿರುದ್ಧ ಸತತವಾಗಿ ಹೋರಾಟ ಮಾಡುತ್ತಾ ಬಂದಿರುವ ಲೋಕಾಯುಕ್ತ ಎನ್ ಸಂತೋಷ್ ಹೆಗ್ಡೆ ಹಾಗೂ ಅವರ ತಂಡವನ್ನು ಬೇಕೆಂತಲೇ ಭೂ ಹಗರಣ ತನಿಖೆಗೆ ನೇಮಿಸಿಲ್ಲ. ಸಚಿವ ಕಟ್ಸಾ ಸುಬ್ರಮಣ್ಯ ನಾಯ್ಡು ಅವರ ಸುಪುತ್ರ ಭಾಗಿಯಾಗಿರುವ ಕೆಐಎಡಿಬಿ ಹಗರಣದ ತನಿಖೆಯನ್ನು ಲೋಕಾಯುಕ್ತ ಕೈಗೆತ್ತಿಕೊಂಡಿದ್ದು ಗೊತ್ತಿದ್ದು ಸರ್ಕಾರ ಅವರನ್ನು ದೂರವಿರಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿದೆ.