ಮಕ್ಕಳಿಗೆ ನೀಡಿದ್ದ ಭೂಮಿ ವಾಪಸ್ : ಸಿಎಂ
ಬಾಗಲಕೋಟೆಗೆ ತೆರಳುವ ಮಾರ್ಗದಲ್ಲಿ ಶುಕ್ರವಾರ ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವ ಮಾತೇ ಇಲ್ಲ. ಮುಂದಿನ ಎರಡೂವರೆ ವರ್ಷಗಳ ಕಾಲ ನಾನೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತೇನೆ ಎಂದರು. ನನ್ನ ಮಕ್ಕಳು ಹಾಗೂ ಸಂಬಂಧಿಸಿಕರಿಗೆ ನೀಡಿರುವ ಎಲ್ಲ ನಿವೇಶನ ಹಾಗೂ ಭೂಮಿಯನ್ನು ಸರಕಾರ ವಶಪಡಿಸಿಕೊಳ್ಳಲಿದೆ ಎಂದು ಹೇಳಿದರು.
ಡಿನೋಟಿಫಿಕೇಷನ್ ಇದೀಗ ದೊಡ್ಡ ಹಗರಣವಾಗಿ ಪರಿಣಮಿಸಿದೆ. ಡಿನೋಟಿಫಿಕೇಷನ್ ಮಾಡಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಮಾಡಲಾಗಿತ್ತು. ಅದೇ ಆಧಾರದ ಮೇಲೆ ಡಿನೋಟಿಫಿಕೇಷನ್ ಮಾಡಲಾಗಿದೆ. ವಿವಾದ ಕಾರಣವಾಗುವುದು ಎಂಬ ಕಾರಣದಿಂದ ನನ್ನ ಮಕ್ಕಳು ಹಾಗೂ ಸಂಬಂಧಿಕರಿಗೆ ನೀಡಲಾಗಿದ್ದ ಎಂದು ಭೂಮಿಯನ್ನು ವಶಪಡಿಸಿಕೊಳ್ಳಲು ಈಗಾಗಲೇ ಆದೇಶ ನೀಡಲಾಗಿದೆ ಎಂದು ಯಡಿಯೂರಪ್ಪ ವಿವರಿಸಿದರು.
ಡಿನೋಟಿಫಿಕೇಷನ್ ಬಗ್ಗೆ ನಿವೃತ್ತಿ ನ್ಯಾಯಮೂರ್ತಿಯಿಂದ ನ್ಯಾಯಾಂಗ ತನಿಖೆ ಮಾಡಿಸಲು ಚಿಂತನೆ ನಡೆಸಲಾಗಿದೆ. ನನ್ನ ಹೆಸರನ್ನು ವಿನಾಕಾರಣ ಹಗರಣದಲ್ಲಿ ಸಿಲುಕಿಸಲಾಗಿದೆ. ನ್ಯಾಯಾಂಗ ತನಿಖೆ ನಡೆಸಿದರೆ, ಎಲ್ಲವೂ ತಿಳಿಯಲಿದೆ ಎಂದು ಯಡಿಯೂರಪ್ಪ ಅಭಿಪ್ರಾಯಪಟ್ಟರು. ಪ್ರತಿಪಕ್ಷಗಳು ಸರಕಾರ ಅಭದ್ರಗೊಳಿಸಲು ನಿರತವಾಗಿವೆ. ಜೆಡಎಸ್ ನಾಯಕರು ಸರಕಾರ ಪತನಕ್ಕೆ ಸಂಚು ರೂಪಿಸಿದ್ದಾರೆ ಎಂದು ಅವರು ಆರೋಪಿಸಿದರು.