ಪಂಚಾಯಿತಿ ಮೀಸಲಾತಿ ಮತ್ತೆ ವಾಪಸ್
ಕಳೆದ ಗುರುವಾರ (ನ.11), ಹೊಸ ಮೀಸಲು ಸಂಬಂಧ ಸರಕಾರ ಕಳುಹಿಸಿಕೊಟ್ಟಿದ್ದ ಸುಗ್ರೀವಾಜ್ಞೆ ಪ್ರಸ್ತಾವನೆಯನ್ನು ರಾಜ್ಯಪಾಲರು ತಳ್ಳಿ ಹಾಕಿದ್ದರು. ನಂತರ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯ ತೀರ್ಮಾನದಂತೆ ಇದೇ ಪ್ರಸ್ತಾವನೆಯನ್ನು ಮತ್ತೆ ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ತಮ್ಮ ನಿಲುವು ಬದಲಿಸದ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಶನಿವಾರ ಸಂಜೆ ಈ ಸುಗ್ರೀವಾಜ್ಞೆ ಪ್ರಸ್ತಾವನೆಯನ್ನು ಮತ್ತೆ ವಾಪಸ್ ಕಳುಹಿಸಿ, ಅಂಕಿತ ಹಾಕಲು ಸಾಧ್ಯವಿಲ್ಲವೆಂದು ಸ್ಪಷ್ಟ ವಾಗಿ ಹೇಳಿದ್ದಾರೆ. ರಾಜ್ಯಪಾಲರ ಈ ಕ್ರಮ ಸರಕಾರಕ್ಕೆ ಮತ್ತೊಮ್ಮೆ ಇರಸುಮುರಸು ತಂದಿದೆ.
ನನಗೆ ಈ ಸರಕಾರದೊಂದಿಗೆ ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲ. ಆದರೆ, ಹಿಂದುಳಿ ದ ವರ್ಗದವರಿಗೆ ಸೂಕ್ತ ಪ್ರಾತಿನಿಧ್ಯ ಸಿಗಬೇಕು. ಈ ಎಲ್ಲ ಪ್ರಕ್ರಿಯೆಯೂ ಸಂವಿಧಾನ ಬದ್ಧವಾಗಿಯೇ ಆಗಬೇಕು. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರವೇ ಮೀಸಲು ನಿಗದಿಯಾಗಬೇಕು. ಈ ವಿಷಯದಲ್ಲಿ ಲೋಪವಾಗಿರುವುದರಿಂದ ಸುಗ್ರೀವಾಜ್ಞೆ ಪ್ರಸ್ತಾವನೆಗೆ ಅಂಕಿತ ಹಾಕಿಲ್ಲ ಎಂದಿದ್ದಾರೆ.
ಸೂಕ್ಷ್ಮ ಪರಿಶೀಲನೆ : ನಾನು ರಾಜ್ಯ ಚುನಾವಣೆ ಆಯೋಗದಿಂದ ಸ್ವೀಕರಿಸಿರುವ ಮಾಹಿತಿಯನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಅದರ ಪ್ರಕಾರ 30 ಜಿಲ್ಲೆಗಳ ಪೈಕಿ 25 ರಲ್ಲಿ ಮೀಸಲು ಪ್ರಮಾಣವು ಶೇ. 50 ಕ್ಕಿಂತ ಜಾಸ್ತಿಯಾಗುತ್ತದೆ. ಇದು ಮೀಸಲು ನಿಗದಿಗೆ ಸುಪ್ರೀಂ ಕೋರ್ಟ್ ಹಾಕಿರುವ ಮಿತಿಯನ್ನು ಮೀರುತ್ತದೆ. ಹೀಗಾಗಿ, ಸುಗ್ರೀವಾಜ್ಞೆ ಪ್ರಸ್ತಾವನೆಯನ್ನು ವಾಪಸ್ ಕಳುಹಿಸಲಾಗಿದೆ ಎಂದು ಸರಕಾರಕ್ಕೆ ನೀಡಿರುವ ಸಲಹೆಯಲ್ಲಿ ರಾಜ್ಯಪಾಲರು ತಿಳಿಸಿದ್ದಾರೆ.
ಸುಪ್ರೀಂಕೋರ್ಟ್ ಮಾರ್ಗಸೂಚಿ ಪ್ರಕಾರ ಮೀಸಲು ನಿಗದಿಪಡಿಸಿ ಚುನಾವಣೆ ಆಯೋಗ ಹೊರಡಿಸಿದ್ದ ಅಧಿಸೂಚನೆಯನ್ನು ಹಿಂದುಳಿದ ವರ್ಗದ ಹಿತ ರಕ್ಷಣೆಗೆ ಪೂರಕವಾಗಿಲ್ಲ ಎಂಬ ನೆಪವೊಡ್ಡಿ ಸರಕಾರ ರದ್ದುಪಡಿಸಿತ್ತು. ಹೊಸ ಮೀಸಲು ನಿಗದಿ ಮಾಡಿ ಸುಗ್ರೀವಾಜ್ಞೆ ಪ್ರಸ್ತಾಪ ಸಲ್ಲಿಸಿತ್ತು.