ಆದರ್ಶ ಹಗರಣದಲ್ಲಿ ಗಡ್ಕರಿ ಕೈವಾಡ : ಕಾಂಗ್ರೆಸ್
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ, ಹಗರಣದಲ್ಲಿ ಭಾಗಿಯಾಗಿರುವ ಎನ್ಡಿಎ ಸರಕಾರದಲ್ಲಿ ಸಚಿವರಾಗಿದ್ದ ಸುರೇಶ್ ಪ್ರಭು ಮತ್ತು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿಯ ಆಪ್ತರಾದ ಸಂಚೇತಿಯ ಬಗ್ಗೆ ಬಿಜೆಪಿ ಏಕೆ ಪ್ರಸ್ತಾಪಿಸುತ್ತಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ. ತಿಂಗಳಿಗೆ 8600 ರುಪಾಯಿ ವೇತನ ಪಡೆಯುವ ಸಂಚೇತಿ 60 ಲಕ್ಷ ರುಪಾಯಿಯ ಫ್ಲಾಟನ್ನು ಪಡೆದಿದ್ದಾರೆ. ಅವರು ನಿತಿನ್ ಗಡ್ಕರಿಯ ಆಪ್ತರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿವಾದಾತ್ಮಕ ಆದರ್ಶ ಪ್ರಕರಣದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚವಾಣ್ ರಾಜೀನಾಮೆ ನೀಡಿದ್ದಾರೆ. ಅದೇ ರೀತಿ ಕಾಮನ್ವೆಲ್ತ್ ಗೇಮ್ಸ್ ಹಗರಣಕ್ಕೆ ಸಂಬಂಧಿಸಿ ಈಗಗಾಲೇ ಕಾಂಗ್ರೆಸ್ ಸಂಸದೀಯ ಸಮಿತಿಯ ಕಾರ್ಯದರ್ಶಿ ಸ್ಥಾನಕ್ಕೆ ಸುರೇಶ್ ಕಲ್ಮಾಡಿ ರಾಜೀನಾಮೆ ನೀಡಿದ್ದಾರೆ.ಕಲ್ಮಾಡಿಯವರನ್ನು ಬೆಂಬಲಿಸಿದ್ದ ಬಿಜೆಪಿಯ ಹಿರಿಯ ನಾಯಕ ವಿಜಯ್ ಮಲ್ಹೊತ್ರಾ ಮತ್ತು ತ್ರಿಲೋಚನ್ ಸಿಂಗ್ ರ ವಿರುದ್ಧ ಬಿಜೆಪಿ ಯಾವ ಕ್ರಮ ಕೈಗೊಳ್ಳುತ್ತದೆ ಎಂದು ಸ್ಪಷ್ಟಪಡಿಸಬೇಕು ಎಂದು ತಿವಾರಿ ಪ್ರಶ್ನಿಸಿದ್ದಾರೆ.
ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ. ಈ ಬಗ್ಗೆ 72 ಗಂಟೆಗಳ ಒಳಗೆ ಆರೋಪವನ್ನು ಸಾಬೀತುಪಡಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿಯ ವಕ್ತಾರ ಪ್ರಕಾಶ್ ಜಾವೇದ್ ಕರ್ ಎಚ್ಚರಿಕೆ ನೀಡಿದ್ದಾರೆ.