ರಾಜ್ಯದಲ್ಲಿ 'ಜಲ್' ಪ್ರಳಯ ಮುಂದುವರಿಕೆ
ಮುಂದಿನ 24 ಗಂಟೆಗಳಲ್ಲಿ ದಕ್ಷಿಣ ಒಳನಾಡು ಮತ್ತು ಕರಾವಳಿಯಲ್ಲಿ ಭಾರಿ ಮಳೆಯಾಗುವ ಸಂಭವವಿದೆ. ಹಾಗೆಯೇ ಬೆಂಗಳೂರಿನಲ್ಲಿ ಮುಂದಿನ 48 ಗಂಟೆ ಕಾಲ ಮೋಡದ ವಾತಾವರಣವಿರುತ್ತದೆ ಮತ್ತು ಸಾಧಾರಣ ಮಳೆಯಾಗಲಿದೆ. ಮಳೆಗಾಲದ ಅಂತ್ಯದ ವೇಳೆಗೆ ಚಂಡಮಾರುತ ಬೀಸುವುದು ಸಹಜ ಎಂದು ಹವಾಮಾನ ಇಲಾಖೆ ಬೆಂಗಳೂರು ಕೇಂದ್ರದ ನಿರ್ದೇಶಕ ಬಿ.ಪುಟ್ಟಣ್ಣ ತಿಳಿಸಿದ್ದಾರೆ.
ಉಷ್ಣಾಂಶ ಕುಸಿತ: ದಿನದ ಗರಿಷ್ಠ ಉಷ್ಣಾಂಶದಲ್ಲಿ ದಿಢೀರ್ ಇಳಿಕೆಯಾಗಿರುವುದರಿಂದ ಶೀತಮಯ ವಾತಾವರಣ ನಿರ್ಮಾಣವಾಗಿದೆ. ಶನಿವಾರ ದಿನದ ಗರಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇತ್ತು. ಆದರೆ ಭಾನುವಾರ ಉಷ್ಣಾಂಶದ ಪ್ರಮಾಣ 19.8 ಡಿಗ್ರಿ ಸೆಲ್ಸಿಯಸ್ಗೆ ಕುಸಿದಿದೆ. ಪರಿಣಾಮವಾಗಿ ಚಳಿ ಹೆಚ್ಚಾಗಿರುತ್ತದೆ ಎಂದು ಪುಟ್ಟಣ್ಣ ಮಾಹಿತಿ ನೀಡಿದರು.
ಟುಸ್ ಎಂದ ಪಟಾಕಿಗಳು: ಭಾನುವಾರದ ರಜೆ ಹಾಗೂ ಬಲಿಪಾಡ್ಯಮಿ ಆಚರಣೆಗೆ ನಗರದ ಜನತೆ ನಡೆಸಿದ್ದ ಸಿದ್ಧತೆಯನ್ನು ಮಳೆರಾಯ ಕೊಚ್ಚಿ ಹಾಕಿದ್ದಾನೆ. ಬೆಳಿಗ್ಗೆಯಿಂದಲೇ ಮಳೆ ಸುರಿಯುತ್ತಿದ್ದಂತೆ ಪಟಾಕಿ ಮಳಿಗೆಗಳ ಬಳಿ ಗ್ರಾಹಕರು ಸುಳಿವಿರಲಿಲ್ಲ. ಮೊದಲೇ ಪಟಾಕಿ ಖರೀದಿಸಿದ್ದವರು ಪಟಾಕಿ ಸಿಡಿಸಲು ತೊಂದರೆ ಅನುಭವಿಸಿದ್ದು ಕಂಡುಬಂತು.
ಶಾಲಾ, ಕಾಲೇಜಿಗೆ ರಜೆ: ಕೋಲಾರ ಜಿಲ್ಲೆ ಮುಳಬಾಗಿಲು, ಚಿಕ್ಕಬಳ್ಳಾಪುರ ಜಿಲ್ಲೆಯ ಕೆಲವೆಡೆ ಸುರಿದಿರುವ ಭಾರಿ ಮಳೆಯ ಕಾರಣ ಇಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಇಬ್ಬರ ಸಾವು: ಕನ್ಯಾಕುಮಾರಿಯ ಸಮುದ್ರ ದಡಕ್ಕೆ ತೆರಳಿದ್ದ ಬೆಂಗಳೂರಿನ ಬಸವೇಶ್ವರ ನಗರದ ನಿವಾಸಿ ಎಸ್. ಮಧುಸೂದನ್(29) ಸೇರಿದಂತೆ, ಭಾರಿ ಮಳೆಗೆ ಇಬ್ಬರು ಮೃತಪಟ್ಟಿದ್ದಾರೆ.