ಸಿಎಂ ಸಿಕ್ಕಿದ ಕಡೆಯಲೆಲ್ಲಾ ಘೇರಾವ್ : ಕಾಂಗ್ರೆಸ್
ಆಕ್ರೋಶ ಭರಿತರಾಗಿದ್ದ ಕಾಂಗ್ರೆಸ್ ಶಾಸಕರು ಸಿಎಂ ಮನೆಗೆ ನುಗ್ಗಲು ಯತ್ನಿಸಿದಾಗ ಪೊಲೀಸ ರೊಂದಿಗೆ ತೀವ್ರ ವಾಗ್ವಾದ ನಡೆಯಿತು. ನಂತರ ರಸ್ತೆಯಲ್ಲೇ ಕುಳಿತ ಸಿದ್ದು, ಡಿಕೆಶಿ ಮತ್ತಿತ್ತರು ಬಿಜೆಪಿ ವಿರುದ್ಧ ಹರಿಹಾಯ್ದರು.
ಆಪರೇಷನ್ ಕಮಲದ ಮೂಲಕ ರಾಜ್ಯದಲ್ಲಿ ಅಧಿಕಾರ ಹಿಡಿದ ಬಿಜೆಪಿ ಸರ್ಕಾರ, ಕುದುರೆ ವ್ಯಾಪಾರ ಮಾಡುತ್ತಿದ್ದು, ಇದು ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಹೈಕೋರ್ಟ್ ತೀರ್ಪು ಸರಕಾರದ ವಿರುದ್ಧ ಬರುತ್ತದೆ ಎಂಬ ಭೀತಿಯ ಹಿನ್ನೆಲೆಯಲ್ಲಿ ಆಪರೇಷನ್ ಕಮಲಕ್ಕೆ ಅದು ಕೈಹಾಕಿದೆ ಎಂದು ಮುಖಂಡರು ಯಡಿಯೂರಪ್ಪನವರ ವಿರುದ್ಧ ಕೆಂಡ ಕಾರಿದ್ದಾರೆ.
ಬಹುಮತವಿಲ್ಲದೆ ಅಡ್ಡಹಾದಿ ಹಿಡಿದಿರುವ ಅತ್ಯಂತ ನೀಚ ಸರಕಾರ, ಶಾಸಕರಿಗೆ ಹಣ, ಅಧಿಕಾರದ ಆಮಿಷವೊಡ್ಡಿ ಸೆಳೆದುಕೊಳ್ಳುತ್ತಿದೆ. ದೇಶದ ಪ್ರಮುಖ ವಾರಪತ್ರಿಕೆಗಳು ಬಿಜೆಪಿ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರ ಎಂದು ಜಗತ್ತಿಗೆ ಸಾರಿದೆ ಆದರೂ ಇವರಿಗೆ ನಾಚಿಕೆ ಮಾನ ಮಾರ್ಯದೆ ಇಲ್ಲ. ಇದಕ್ಕೆ ತಕ್ಕ ಪ್ರತಿಫಲ ಅನುಭವಿಸಬೇಕಾಗುತ್ತದೆ ಎಂದು ಸಿದ್ದು ಎಚ್ಚರಿಸಿದರು.
ಜೈಲ್ಭರೋ ಎಚ್ಚರಿಕೆ: ಕೋಲಾರದ ಶಾಸಕ ವರ್ತೂರು ಪ್ರಕಾಶ್, ಚನ್ನಪಟ್ಟಣದ ಶಾಸಕ ಎಂ.ಸಿ.ಅಶ್ವಥ್ರನ್ನು ಸಚಿವ ಸ್ಥಾನ ಮತ್ತು ಹಣದ ಆಮಿಷವೊಡ್ದಿ ಸೆಳೆದುಕೊಂಡಿದೆ. ಇಂತಹ ಮಹಾನ್ ಭ್ರಷ್ಟ ಸರಕಾರ, ಜನತೆಯ ಸಮಸ್ಯೆಗಳನ್ನು ಆಲಿಸುತ್ತಿಲ್ಲ. ಅನೈತಿಕ ಆಪರೇಷನ್ ಕಮಲದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯಾದ್ಯಂತ ಬೀದಿಗಿಳಿದು ಜೈಲ್ ಭರೋ ಚಳವಳಿ ನಡೆಸಲಿದ್ದಾರೆ ಎಂದು ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ತೊಡಗಿದ್ದ ಕಾಂಗ್ರೆಸ್ ನಾಯಕರನ್ನು ಬಂಧಿಸಿ, ಕೋರಮಂಗಲ ಆಡುಗೋಡಿ ಸಿಎಆರ್ ಮೈದಾನದಲ್ಲಿ ಸ್ವಲಕಾಲ ಇಡಲಾಗಿತ್ತು, ನಂತರ ಎಲ್ಲರನ್ನೂ ಬಂಧಮುಕ್ತಗೊಳಿಸಲಾಯಿತು. ಈ ನಡುವೆ ಮೈಸೂರು ರಸ್ತೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಸ್ತೆ ತಡೆ ನಡೆಸಿದರು.