Get Updates
Get notified of breaking news, exclusive insights, and must-see stories!

ರಾಜ್ಯಪಾಲರಿಗೆ ವರ್ತನೆಗೆ ಜಯಕಾರ, ಧಿಕ್ಕಾರ

Justice Rama Jois
ಬೆಂಗಳೂರು, ಅ. 12 : ಕರ್ನಾಟಕ ವಿಧಾನಸಭೆಯಲ್ಲಿ ಮತ್ತೊಂದು ಪ್ರಹಸನ ನೋಡಲು ರಾಜ್ಯದ ಜನತೆ ಸಿದ್ಧರಾಗಬೇಕಿದೆ. ಮತ್ತೊಮ್ಮೆ ಬಹುಮತ ಸಾಬೀತುಪಡಿಸಲು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ನೀಡಿರುವ ಅವಕಾಶ ನಾಡಿನ ಜನತೆ ಮಾತ್ರವಲ್ಲ ರಾಜಕೀಯ ಪಕ್ಷಗಳಲ್ಲಿಯೂ ವಿದ್ಯುತ್ ಸಂಚಾರವಾಗುವಂತೆ ಮಾಡಿದೆ.

ಕಾಂಗ್ರೆಸ್ ಪಕ್ಷ ಕರತಾಡನ ಮಾಡುವ ಮೂಲಕ ಹಂಸರಾಜ್ ಭಾರದ್ವಾಜ್ ಅವರ ಕ್ರಮವನ್ನು ಸ್ವಾಗತಿಸಿದ್ದರೆ, ಅ.11ರ ಘಟನೆಯಿಂದ ಆಕ್ರೋಶಗೊಂಡಿದ್ದ ತೆನೆಹೊತ್ತ ಮಹಿಳೆಯ ಚಿಹ್ನೆಯ ಶಾಸಕರು ಕುಣಿದು ನಲಿದಾಡಿದ್ದಾರೆ. ಸಹಜವಾಗಿ ವಿರೋಧ ಪಕ್ಷಗಳಲ್ಲಿ ಮತ್ತೆ ಆಸೆಯ ಗೆರೆ ಮೂಡಿಸಿದೆ. ಆದರೆ, ಆಡಳಿತ ಬಿಜೆಪಿ ಪಕ್ಷದಲ್ಲಿ ರಾಜ್ಯ ಮತ್ತು ರಾಷ್ಟ್ರ ನಾಯಕರಿಂದ ಭಾರೀ ಟೀಕೆಗೆ ಒಳಗಾಗಿದೆ.

ಸಾರ್ವಜನಿಕ ವಲಯದಿಂದ ಕೂಡ ಹಂಸರಾಜ್ ಭಾರದ್ವಾಜ್ ಅವರ ನಡೆ ಮಿಶ್ರ ಪ್ರತಿಕ್ರಿಯೆಗೆ ಒಳಗಾಗಿದೆ. ಬಿಜೆಪಿ ಬಗ್ಗೆ ಒಲವಿರುವ ಓದುಗರು ರಾಜ್ಯಪಾಲರ ಅನಿರೀಕ್ಷಿತ ನಡೆಯನ್ನು ವಿರೋಧಿಸಿದ್ದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿಗರಿಂದ ಭಾರದ್ವಾಜ್ ಶಭಾಸ್ಗಿರಿ ಪಡೆದಿದ್ದಾರೆ. ರಾಷ್ಟ್ರಪತಿ ಆಳ್ವಿಕೆ ಅಥವಾ ಮತ್ತೊಂದು ಚುನಾವಣೆ ಎದುರಿಸಬಯಸದ ತಟಸ್ಥ ಓದುಗರು ಪುನಃ ವಿಶ್ವಾಸಮತ ಕೋರಬೇಕೆನ್ನುವ ರಾಜ್ಯಪಾಲರ ಸಲಹೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ರಾಜ್ಯಪಾಲರ ಕ್ರಮದಿಂದಾಗಿ ಮತ್ತೆ ಕುದುರೆ ವ್ಯಾಪಾರದ ದುರ್ವಾಸನೆ ಹೊಡೆಯಲು ಪ್ರಾರಂಭಿಸಿದೆ. ಯಡಿಯೂರಪ್ಪನವರ ಅಧಿಕಾರ ಚಲಾವಣೆಯಿಂದ ಬೇಸತ್ತಿರುವ ಕೆಲ ಅತೃಪ್ತರು ಭಿನ್ನರಂತೆ ವಿಭಿನ್ನವಾಗಿ ಚಿಂತಿಸಲು ಪ್ರಾರಂಭಿಸಿದ್ದಾರೆ. ಭಿನ್ನಮತೀಯ ಶಾಸಕ ಶಿವರಾಜ್ ತಂಗಡಗಿಯ ಬೆಂಬಲಿಗರಿಬ್ಬರು ನಾಯಕ ಸಾಗಿದ ಹಾದಿಯಲ್ಲಿ ಸಾಗಲು ನಿರ್ಧರಿಸಿದ್ದಾರೆಂದು ತಿಳಿದುಬಂದಿದ್ದು, ನಾಳೆಯ ಹೊತ್ತಿಗೆ ಇನ್ನೂ ಹತ್ತು ಜನ ಬಿಜೆಪಿಗೆ ಗುಡ್ ಬೈ ಹೇಳಬಹುದು ಎಂದು ಸುವರ್ಣ ನ್ಯೂಸ್ ಚಾನಲ್ ವರದಿ ಮಾಡಿದೆ. ಕುದುರೆ, ಕುರಿ ವ್ಯಾಪಾರಕ್ಕೆ ಬೆದರಿದ ಕಾಂಗ್ರೆಸ್ ಬಣ ಈಗಾಗಲೆ ರೆಸಾರ್ಟ್ ದಾರಿ ಹಿಡಿದಿದೆ. ಮತ್ತೆ ಉತ್ಸಾಹದ ಬುಗ್ಗೆಯಂತಾಗಿರುವ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಪದ್ಮನಾಭನಗರದ ಮನೆಗೆ ತೆರಳಿ ಪೂಜ್ಯ ತಂದೆಯವರ ಆಶೀರ್ವಾದ ಪಡೆದು ಬಂದಿದ್ದಾರೆ.

ವಿವಿಧ ಪಕ್ಷಗಳ ನಾಯಕರು ಏನು ಹೇಳುತ್ತಾರೆ?

ನ್ಯಾ. ರಾಮಾ ಜೋಯಿಸ್ : ಬಿಜೆಪಿಗೆ ಮತ್ತು ಬಹುಮತ ಸಾಬೀತುಪಡಿಸಲು ಹೇಳಿರುವುದು ರಾಜ್ಯಪಾಲರು ಭಿನ್ನಮತೀಯ ಶಾಸಕರ ವಜಾ ಆದೇಶವನ್ನು ಒಪ್ಪಿದಂತೆ ಆಗುತ್ತದೆ. ನಿನ್ನೆ ರಾಷ್ಟ್ರಪತಿ ಆಳ್ವಿಕೆಗೆ ಹೇಳಿ ಈಗ ಮತ್ತೆ ವಿಶ್ವಾಸಮತ ಕೋರಲು ಹೇಳಿರುವುದು ಒಂದಕ್ಕೊಂದು ತದ್ವಿರುದ್ಧವಾಗಿವೆ. ರಾಜ್ಯಪಾಲರ ಹೇಳಿಕೆಗಳೇ ವೈರುಧ್ಯಗಳಿಂದ ಕೂಡಿವೆ.

ಯಡಿಯೂರಪ್ಪ : ರಾಜ್ಯಪಾಲರ ನಿರ್ಣಯ ಆಶ್ಚರ್ಯ ತಂದಿದೆ. ಬಹುಮತ ಸಾಬೀತು ಪಡಿಸಿದ್ದರೂ ಮತ್ತೆ ವಿಶ್ವಾಸಮತ ಕೋರಲು ಯಾಕೆ ಹೇಳಿದ್ದಾರೆಂದು ಗೊತ್ತಿಲ್ಲ. ಪಕ್ಷದ ಹಿರಿಯರು, ವಕೀಲರೊಂದಿಗೆ ಪರಾಮರ್ಶಿಸಿ ಮುಂದಿನ ನಿರ್ಣಯವನ್ನು ತಿಳಿಸುತ್ತೇವೆ.

ಸಿದ್ದರಾಮಯ್ಯ : ನಾವು ಈ ಕ್ರಮವನ್ನು ಸ್ವಾಗತಿಸುತ್ತೇವೆ. ವಿಶ್ವಾಸಮತ ಕೋರಿಕೆ ಪ್ರಕ್ರಿಯೆ ಸರಿಯಾಗಿ ನಡೆದಿಲ್ಲವೆಂಬುದು ತಿಳಿದೇ ರಾಜ್ಯಪಾಲರು ಈ ನಿರ್ಧಾರ ತಿಳಿಸಿದ್ದಾರೆ. ಸರಕಾರದ ವಿರುದ್ಧ ಮತ ಚಲಾಯಿಸುವುದು ಖಂಡಿತ.

ಕುಮಾರಸ್ವಾಮಿ : ಬಿಜೆಪಿ ವಿಶ್ವಾಸಮತದಲ್ಲಿ ಹೇಗೆ ಜಯ ಸಾಧಿಸುತ್ತದೆ ಎಂದು ನೋಡೇ ಬಿಡುತ್ತೇವೆ. ರಾಜ್ಯಪಾಲರು ಅತ್ಯಂತ ಸೂಕ್ತ ನಿರ್ಣಯ ತೆಗೆದುಕೊಂಡಿದ್ದಾರೆ.

ರಾಮಚಂದ್ರೇಗೌಡ : ಕರ್ನಾಟಕದಲ್ಲಿ ವಿರೋಧಪಕ್ಷಗಳೇ ಇಲ್ಲ. ಇದ್ದರೂ ಅವರು ಒಬ್ಬರೇ. ಅವರು ರಾಜ್ಯಪಾಲ ಹಂಸರಾಜ್ ಭಾರದ್ವಾಜ್. ಕೇಂದ್ರ ಅವರನ್ನು ಅವರನ್ನು ವಾಪಸ್ ಕರೆಯಿಸಿಕೊಳ್ಳಬೇಕು.

ಜಗದೀಶ್ ಶೆಟ್ಟರ್ : ಮತ್ತೆ ವಿಶ್ವಾಸಮತ ಕೋರಲು ರಾಜ್ಯಪಾಲರು ಹೇಳಿರುವುದು ದುರದೃಷ್ಟಕರ. ನಾವು ಈ ಕ್ರಮವನ್ನು ಖಡಾಖಂಡಿತವಾಗಿ ವಿರೋಧಿಸುತ್ತೇವೆ. ಇದರ ಅವಶ್ಯಕತೆಯೇ ಇರಲಿಲ್ಲ. ನಾವು ಈಗಾಗಲೆ ಬಹುಮತ ಗಳಿಸಿದ್ದೇವೆ.

ಸಿಟಿ ರವಿ : ಅರವತ್ತು ವಯಸ್ಸಿಗೆ ಅರಳುಮರಳು ಬರುತ್ತೆ ಅಂತಾರೆ. ನಮ್ಮ ರಾಜ್ಯಪಾಲರಿಗೆ ಎಂಬತ್ತಕ್ಕೆ ಎಡಬಿಡಂಗಿಯಂತೆ ವರ್ತಿಸುತ್ತಿದ್ದಾರೆ. ಬಹುಮತ ಸಾಬೀತುಪಡಿಸಿದ ಮೇಲೆಯೂ ಮತ್ತೆ ವಿಶ್ವಾಸಮತ ಕೋರಲು ಹೇಳಿರುವುದು ಎಡಬಿಡಂಗಿತನವಲ್ಲದೆ ಮತ್ತೇನು?

ಅರುಣ್ ಜೇಟ್ಲಿ :
ಹಂಸರಾಜ್ ಭಾರದ್ವಾಜ್ ಅವರು ತಾವಾಗಿಯೇ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸಲು ಹೊರಟಿದ್ದಾರೆ. ರಾಜ್ಯಾಪಾಲರು ಕಾಂಗ್ರೆಸ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಕೇಂದ್ರ ಸರಕಾರ ಅವರನ್ನು ತಕ್ಷಣ ವಾಪಸ್ಸು ಕರೆಯಿಕೊಳ್ಳಬೇಕು.

ಕೆಎಸ್ ಈಶ್ವರಪ್ಪ : ಮೊನ್ನೆ ತಾನೆ ವಿಶ್ವಾಸ ಮತ ಗೆದ್ದಿದ್ದೀವಿ. ಮತ್ತೆ ಮತ್ತೆ ವಿಶ್ವಾಸಮತ ಕೇಳುವ ಅಗತ್ಯ ಏನಿದೆ.

ಈ ನಡುವೆ ರಾಜ್ಯಪಾಲರ ನಡೆ ನುಡಿಯನ್ನು ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಶಿವಮೊಗ್ಗ, ಬಳ್ಳಾರಿ, ತುಮಕೂರು, ಬೀದರ್ ಹಾಗೂ ಅನೇಕ ಪಟ್ಟಣಗಳಲ್ಲಿ ಮೆರವಣಿಗೆ, ಪ್ರತಿಭಟನಾ ಪ್ರದರ್ಶನಗಳನ್ನು ಕಾರ್ಯಕರ್ತರು ಹಮ್ಮಿಕೊಂಡಿದ್ದಾರೆ. ಗವರ್ನರ್ ಚಲೇಜಾವ್ ಚಳವಳಿ ಚುರುಕಾಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+