ಬೆನ್ನಿಗೆ ಚೂರಿ ಹಾಕಿದ್ದೇ ರೇಣುಕಾ : ಭಿನ್ನಮತೀಯರು

ಯಡಿಯೂರಪ್ಪನವರ ವಿರುದ್ಧ ಯಾವುದೇ ಭಿನ್ನಾಭಿಪ್ರಾಯವಿಲ್ಲದಿದ್ದರೂ ನಮ್ಮನ್ನೆಲ್ಲ ಬಡಿದೆಬ್ಬಿಸಿ, ಸರಕಾರದ ವಿರುದ್ಧ ನಿಲ್ಲಿಸಿ, ಕೊನೆಗೆ ತಾವೇ ಸರಕಾರಕ್ಕೆ ಬೆಂಬಲ ವ್ಯಕ್ತಪಡಿಸಿ ಆತ್ಮಸಾಕ್ಷಿಯ ವಿರುದ್ಧ ನಡೆದುಕೊಳ್ಳುವಂತೆ ರೇಣುಕಾಚಾರ್ಯ ನಡೆದುಕೊಂಡರು ಎಂದು ಭಿನ್ನಮತೀಯರಲ್ಲಿ ಗುರುತಿಸಿಕೊಂಡಿರುವ ಕೆಲ ಶಾಸಕರು ರೇಣುಕಾಚಾರ್ಯ ವಿರುದ್ಧ ತಿರುಗಿ ನಿಂತಿದ್ದಾರೆ.
ರೇಣುಕಾಚಾರ್ಯ ಅವರನ್ನು ಗೋವಾದ ತಾಜ್ ಎಕ್ಸೋಟಿಕಾ ರೆಸಾರ್ಟಲ್ಲಿ ಏಕಾಂಗಿಯಾಗಿ ಮಾಡಿ ಉಳಿದ 13 ಭಿನ್ನಮತೀಯ ಶಾಸಕರು ಜೆಡಿಎಸ್ ನ ಜಮೀರ್ ಅಹ್ಮದ್ ಖಾನ್ ಜೊತೆ ಹೊರಬಿದ್ದಿದ್ದಾರೆ. ಅಲ್ಲಿಂದ ಎಲ್ಲಿಗೆ ತೆರಳುತ್ತಾರೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ.
ಜೆಡಿಎಸ್ ನಿಂದ 'ಹೈಜಾಕ್' ಆಗಿರುವ ಬಿಜೆಪಿಯ ಶಂಕರಲಿಂಗೇಗೌಡ, ಎಸ್ ಕೆ ಬೆಳ್ಳುಬ್ಬಿ ಮತ್ತು ಲಿಂಗಸೂರು ಶಾಸಕ ಮಾನಪ್ಪ ವಜ್ಜಲ ಕೂಡ ಚೆಲುವರಾಯ ಸ್ವಾಮಿ ಜೊತೆ ಗೋವಾದಲ್ಲಿರುವ ಭಿನ್ನಮತೀಯರನ್ನು ಸೇರಿಕೊಂಡಿದ್ದಾರೆ. ಶಿವನಗೌಡ ನಾಯಕ್ ಕೂಡ ಅವರನ್ನು ಸೇರಿಕೊಂಡಿದ್ದು, ಬಿಜೆಪಿ ವಿರುದ್ಧ ತಿರುಗಿಬಿದ್ದವರ ಸಂಖ್ಯೆ ರೇಣುಕಾಚಾರ್ಯರನ್ನು ಹೊರತುಪಡಿಸಿ 19ಕ್ಕೇರಿದೆ.
ರಾಜೀನಾಮೆಗೆ ಸಿದ್ಧ : ಭಿನ್ನಮತೀಯರು ಗೋವಾದಲ್ಲೇ ಇದ್ದು, ಮುಂದಿನ ನಡೆಯನ್ನು ಒಟ್ಟಿನಿಂದ ನಿರ್ಧರಿಸುವುದಾಗಿ ತಿಳಿಸಿದ್ದಾರೆ. ಅಲ್ಲದೆ, ವಿಧಾನಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಭಿನ್ನಮತೀಯರೆಲ್ಲ ಜೆಡಿಎಸ್ ಜೊತೆ ಸೇರಿರುವುದು ಮುಂದಿನ ರಾಜಕೀಯ ಲೆಕ್ಕಾಚಾರದ ಬಗ್ಗೆ ಅನೇಕ ಪ್ರಶ್ನೆಗಳನ್ನು ಏಳುವಂತೆ ಮಾಡಿದೆ.
ಇವರೆಲ್ಲ ಒಟ್ಟು ಸೇರಿ ಪೂಣೆಗೆ ಪಯಣ ಬೆಳೆಸಲಿದ್ದಾರೆ ಎಂಬ ಮಾತುಗಳೂ ಕೇಳಿಬಂದಿವೆ. ಕಾಂಗ್ರೆಸ್ ನ ಶಾಸಕರೆಲ್ಲ ಈಗಾಗಲೆ ಪೂಣೆ ಬಳಿಯ ಆಂಬಿ ವ್ಯಾಲಿಯಲ್ಲಿ ಬೀಡುಬಿಟ್ಟಿರುವುದು ಅನೇಕ ಊಹಾಪೋಹಗಳಿಗೆ ದಾರಿಮಾಡಿಕೊಟ್ಟಿದೆ. ಭಿನ್ನಮತೀಯರೆಲ್ಲ ಒಟ್ಟಾಗಿ ಒಂದೆಡೆ ಪಯಣ ಬೆಳೆಸಿದರೆ, ಭಿನ್ನಮತದ ಕಿಡಿಹಚ್ಚಿದ ರೇಣುಕಾಚಾರ್ಯ ಎತ್ತ ಹೋಗಬೇಕೆಂದು ತಿಳಿಯದೆ 'ಎಲ್ಲಿಗೆ ಪಯಣ, ಯಾವುದೋ ದಾರಿ, ಏಕಾಂಗಿ ಸಂಚಾರಿ' ಎಂದು ಹಾಡಿಕೊಳ್ಳುವಂತಾಗಿದೆ. ಇತ್ತೀಚೆಗೆ ತಿಳಿದುಬಂದ ಮಾಹಿತಿ ಪ್ರಕಾರ, ರೇಣುಕಾಚಾರ್ಯ ಬೆಂಗಳೂರಿನ ವಿಮಾನ ಹತ್ತಲಿದ್ದಾರೆ.












Click it and Unblock the Notifications