ಅಯೋಧ್ಯೆ ವಿವಾದ : ಸೆ.30ರಂದು ತೀರ್ಪು ಪ್ರಕಟ

ಈ ಆಜ್ಞೆಯ ಪ್ರಕಾರ, ಅಲಹಾಬಾದ್ ಉಚ್ಚ ನ್ಯಾಯಾಲಯ ಅಯೋಧ್ಯೆ ಭೂಹಕ್ಕಿಗೆ ಸಂಬಂಧಿಸಿದಂತೆ ಹೂಡಲಾಗಿರುವ ಪ್ರಕರಣದಲ್ಲಿ ತೀರ್ಪನ್ನು ಪ್ರಕಟಿಸಲು ಮುಕ್ತವಾಗಿದೆ. ತೀರ್ಪನ್ನು ಮುಂದೂಡಬೇಕೆಂದು ರಮೇಶ್ ಚಂದ್ರ ತ್ರಿಪಾಠಿ ಹೂಡಿದ್ದ ವಿಶೇಷ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಎಸ್ಎಚ್ ಕಪಾಡಿಯಾ, ನ್ಯಾ. ಅಫ್ತಾಬ್ ಆಲಮ್ ಮತ್ತು ನ್ಯಾ. ಕೆಎಸ್ ರಾಧಾಕೃಷ್ಣನ್ ಅವರನ್ನು ಒಳಗೊಂಡ ತ್ರಿಸದಸ್ಯರ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.
ಸೆ.30ರಂದು ತೀರ್ಪು : ತೀರ್ಪು ಪ್ರಕಟಿಸಲು ಸುಪ್ರೀಂ ಕೋರ್ಟ್ ಮುಕ್ತಹಸ್ತ ನೀಡಿದ್ದರಿಂದ ತೀರ್ಪಿನ ದಿನಾಂಕವನ್ನು ಸೆ.30ಕ್ಕೆ ಅಲಹಾಬಾದ್ ಹೈಕೋರ್ಟ್ ನಿಗದಿಪಡಿಸಿದೆ. ಗುರುವಾರ ಮಧ್ಯಾಹ್ನ 3.30ಕ್ಕೆ ತೀರ್ಪು ಹೊರಬರಲಿದೆ.
ಅಕ್ಟೋಬರ್ 3ರಿಂದ ನವದೆಹಲಿಯಲ್ಲಿ ಕಾಮನ್ ವೆಲ್ತ್ ಕ್ರೀಡಾಕೂಟ ನಡೆಯುತ್ತಿರುವ ಹಿನ್ನೆಲೆಯಲ್ಲಿ ತೀರ್ಪು ಹೊರಬಿದ್ದರೆ ಹಿಂಸಾಚಾರ ಭುಗಿಲೇಳಬಹುದು, ಕೋಮುಸೌಹಾರ್ದತೆಗೆ ಧಕ್ಕೆ ಬರಬಹುದು ಎಂಬ ಕಾರಣ ನೀಡಿ ತ್ರಿಪಾಠಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರೆ. ಅಲಹಾಬಾದ್ ನ್ಯಾಯಾಲಯ ಈ ಅರ್ಜಿಯನ್ನು ತಿರಸ್ಕರಿಸಿ ಸೆ.24ರಂದು ತೀರ್ಪು ಪ್ರಕಟಿಸುವುದಾಗಿ ಹೇಳಿತ್ತು. ಆದರೆ, ಸುಪ್ರೀಂ ಕೋರ್ಟ್ ತ್ರಿಪಾಠಿ ಸಲ್ಲಿಸಿದ್ದ ಮೇಲ್ಮನವಿ ಪುರಸ್ಕರಿಸಿ ಹೈಕೋರ್ಟ್ ತೀರ್ಪು ನೀಡದಂತೆ ತಡೆಯಾಜ್ಞೆ ನೀಡಿತ್ತು. ಈ ತೀರ್ಪಿನಿಂದಾಗಿ ನ್ಯಾಯಾಲಯದ ಹೊರಗಡೆ ಸಂಧಾನ ನಡೆಸುವ ಪ್ರಕ್ರಿಯೆಗೆ ಮಂಗಳ ಹಾಡಿದಂತಾಗಿದೆ.
ಈಗ ಇಡೀ ದೇಶದ ಕಣ್ಣು ಅಲಹಾಬಾದ್ ಹೈಕೋರ್ಟ್ ನತ್ತ ನೆಟ್ಟಿದೆ. ವಿಭಾಗೀಯ ಪೀಠ ನ್ಯಾಯಮೂರ್ತಿ ಎಸ್ ಯು ಖಾನ್, ನ್ಯಾ. ಸುಧೀರ್ ಅಗರವಾಲ್ ಮತ್ತು ನ್ಯಾ. ಧರಮ್ ವೀರ್ ಶರ್ಮಾ ಅವರನ್ನು ಒಳಗೊಂಡಿದೆ. ಅವರಲ್ಲಿ ನ್ಯಾ. ಧರಮ್ ವೀರ್ ಶರ್ಮಾ ಅವರು ಅಕ್ಟೋಬರ್ 1ರಂದು ನಿವೃತ್ತರಾಗುತ್ತಿದ್ದಾರೆ.
2.77 ಎಕರೆ ಭೂಮಿಯಲ್ಲಿದ್ದ ಜಮೀನು ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡಿಗೆ ಅಥವಾ ಅಖಿಲ ಭಾರತ ಹಿಂದೂ ಸಭಾಗೆ ಸೇರಬೇಕೋ ಎಂಬ ಬಗ್ಗೆ ಹೈಕೋರ್ಟ್ ತೀರ್ಪು ನೀಡೇಬೇಕಿದೆ. ವಿವಾದಿತ ಭೂಮಿಯಲ್ಲಿ ಇದ್ದ ಬಾಬ್ರಿ ಮಸೀದಿಯನ್ನು 1992ರ ಡಿಸೆಂಬರ್ 6ರಂದು ಧ್ವಂಸಗೊಳಿಸಲಾಗಿತ್ತು.
ಓದಲು ಮರೆಯದಿರಿ : ಈ ಭೂಮಿ ಯಾರಿಗೆ ಸೇರಿದ್ದು? | ಶಾಲಾ ಕಾಲೇಜು ರಜಾ | ರಾಜ್ಯಾದ್ಯಂತ ಕಟ್ಟೆಚ್ಚರ | ತೀರ್ಪು ಯಾರಿಗೆ ಬೇಕು?
ಸೆಲ್ ಫೋನಿನಲ್ಲಿ ದಟ್ಸ್ ಕನ್ನಡ ಓದುವ ಸಂಭ್ರಮ
ಹೊಸತು ಹೊಸತು : ಟಾಪ್ 10 ಪುಸ್ತಕ | ಟಾಪ್ 10 ಆಡಿಯೋ | ಟಾಪ್ 10 ವಿಡಿಯೋ












Click it and Unblock the Notifications