ಮೈಸೂರು ದಸರಾಗೆ 20ರೂ ಊಟದ ವರಸೆ
ದಸರಾ ಸಂದರ್ಭದಲ್ಲಿ ಪ್ರವಾಸಿಗರ ಒತ್ತಡ ಹೆಚ್ಚಿರುವುದರಿಂದ ಹೋಟೆಲ್ ಗಳಲ್ಲಿ ಊಟೋಪಚಾರ ಸಹಜವಾಗಿಯೇ ದುಬಾರಿ ಎಂಬ ಕಳವಳ ಇತ್ತು. ಇದೆಲ್ಲವನ್ನೂ ಆಲೋಚಿಸಿ ಸಚಿವ ಸುರೇಶಕುಮಾರ್ ಮೈಸೂರು ಥಾಲಿ ಹೆಸರಿನಲ್ಲಿ ಪ್ರವಾಸಿಗರಿಗೆ ಊಟ ಕೊಡುವಂತೆ ಹೋಟೆಲ್ ಮಾಲೀಕರಲ್ಲಿ ವಿನಂತಿ ಮಾಡಿದ್ದರು. ಹೋಟೆಲ್ ಮಾಲೀಕರ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ದಸರಾ ಸಂದರ್ಭಕ್ಕೆ ಮಾತ್ರ ಕಡಿಮೆ ದರದಲ್ಲಿ ಗುಣಮಟ್ಟದ ಊಟ ನೀಡುವಂತೆ ಕೋರಿಕೊಂಡಿದ್ದರು.
ಈ ಕೋರಿಕೆಗೆ ಸ್ಪಂದಿಸಿರುವ ಹೋಟೆಲ್ ಮಾಲೀಕರ ಸಂಘ, ಉತ್ಸವದಲ್ಲಿ ಪಾಲ್ಗೊಳ್ಳುವ ಪ್ರವಾಸಿಗರಿಗೆ ಕೇವಲ 20 ರುಪಾಯಿಗೆ ಮೈಸೂರು ಥಾಲಿ ಹೆಸರಿನ ಊಟ ನೀಡುವುದಾಗಿ ಹೇಳಿದೆ. ಅನ್ನದೊಂದಿಗೆ ಒಂದು ಚಪಾತಿ, ಪಲ್ಯ ಮತ್ತು ಮಜ್ಜಿಗೆ ಥಾಲಿಯಲ್ಲಿರುತ್ತದೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ರಾಜೇಂದ್ರ ತಿಳಿಸಿದ್ದಾರೆ.
ಮೈಸೂರು ಥಾಲಿ ಊಟ ನಗರದ ಆಯಕಟ್ಟಿನ ಪ್ರದೇಶದಲ್ಲಿರುವ 35-40 ಹೋಟೆಲ್ ಗಳಲ್ಲಿ ಮಧ್ಯಾಹ್ನದ ವೇಳೆ ದೊರಕಲಿದೆ. ಇವೆಲ್ಲವೂ ಮಧ್ಯಮ ವರ್ಗದ ಹೋಟೆಲೆಗಳು, ಇದರೊಂದಿಗೆ ಬೇರೆ ಬೇರೆ ಊಟಗಳೂ ಸಿಗಲಿದೆಯಾದರೂ ದಸರೆಗಾಗಿ ನಮ್ಮದೂ ಒಂದು ಕೊಡುಗೆ ಇರಲಿ ಎಂಬ ಕಾರಣಕ್ಕಾಗಿ ಹೋಟೆಲ್ ಮಾಲೀಕರು ಇದೇ ಮೊದಲ ಬಾರಿ ಔದಾರ್ಯ ತೋರಿ ವಿನೂತನ ಯೋಜನೆಗೆ ಸಹಕರಿಸಿದ್ದಾರೆ ಎಂದು ರಾಜೇಂದ್ರ ಹೇಳಿದ್ದಾರೆ.
ಸೆಲ್ ಫೋನಿನಲ್ಲಿ ದಟ್ಸ್ ಕನ್ನಡ ಓದುವ ಸಂಭ್ರಮ