ಶಿವಮೊಗ್ಗ : ಪತ್ನಿಯಿಂದ ಪತಿಗೆ ಅನ್ಯಾಯ

ಅಚ್ಯುತ್ ರಾವ್ ಮತ್ತು ಜಲಜಮ್ಮ ದಂಪತಿಗೆ ಮಕ್ಕಳಿಲ್ಲದ ಕಾರಣ ಶಿವಾನಂದನನ್ನು ದತ್ತು ಪಡೆದಿದ್ದರು. ಸಾಗರದ ಸಾವಿತ್ರಮ್ಮನೊಂದಿಗೆ ವಿವಾಹ ಮಾಡಿದ್ದರು. ಕೊನೆಗಾಲದಲ್ಲಿ ದಂಪತಿ ತಮ್ಮ ಮನೆಯನ್ನು ಸಾಕು ಮಗ ಮತ್ತು ಸೊಸೆ ಹೆಸರಿನಲ್ಲಿ ಜಂಟಿ ವಿಲ್ ಮಾಡಿದ್ದರು. ಶಿವಾನಂದಗೆ ಅಷ್ಟೇನು ವ್ಯವಹಾರ ಜ್ಞಾನ ಇಲ್ಲದಿರುವುದನ್ನೇ ಬಳಸಿಕೊಂಡ ಸಾವಿತ್ರಮ್ಮ ಮನೆಯನ್ನು ತಮ್ಮ ಹೆಸರಿಗೆ ಮಾಡಿಸಿಕೊಂಡು "ನೀನು ದಡ್ಡ ಕೆಲಸಕ್ಕೆ ಬಾರದವ" ಎಂದು ಹಿಯ್ಯಾಳಿಸುತ್ತಿದ್ದರು.
ನಿತ್ಯ ಕಿರುಕುಳ ನೀಡುತ್ತಿದ್ದರು. ಮನೆಯ ಎಲ್ಲಾ ಕೆಲಸವನ್ನು ಅವರಿಂದಲೇ ಮಾಡಿಸುತ್ತಿದ್ದರು. ಕಿರುಕುಳ ತಾಳಲಾರದೇ ಹತ್ತು ವರ್ಷದ ಹಿಂದೆ ನವದೆಹಲಿಗೆ ತೆರಳಿದ ಶಿವಾನಂದ, ಆಕಾಶವಾಣಿ ಕ್ಯಾಂಟೀನ್ ನಲ್ಲಿ ಪಾತ್ರೆ ತೊಳೆಯುವ ಕೆಲಸಕ್ಕೆ ಸೇರಿಕೊಂಡರು. ವರ್ಷಕ್ಕೆ, ಎರಡು ವರ್ಷಕ್ಕೆ ಮನೆಗೆ ಬಂದು ಹೋಗುತ್ತಿದ್ದರು. ವಯಸ್ಸಾದ ಕಾರಣ ಕೆಲಸ ಮಾಡಲಾಗದೆ ಊರಿಗೆ ಮರಳಿದರೆ ಆಶ್ಚರ್ಯ ಕಾದಿತ್ತು. ಕೆಲಸದಲ್ಲಿರುವಾಗ ಮನೆಗೆ ಕರೆದುಕೊಳ್ಳುತ್ತಿದ್ದ ಪತ್ನಿ, ಕೆಲಸ ಬಿಟ್ಟು ಬಂದಿದ್ದು ಗೊತ್ತಾಗುತ್ತಿದ್ದಂತೆಯೇ ಅವರನ್ನು ಮನೆಯೊಳಗೆ ಸೇರಿಸಲಿಲ್ಲ.
ಮೊರ್ನಾಲ್ಕು ದಿನ ನಡೆಸಿದ ಸಂಧಾನ ವಿಫಲವಾಗಿದ್ದರಿಂದ ಈಗ ಅವರು ಸತ್ಯಾಗ್ರಹದ ಹಾದಿ ತುಳಿದಿದ್ದಾರೆ. ಶಿವಾನಂದಗೆ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಮಗ ರಾಘವೇಂದ್ರ ಮತ್ತು ಹೈದರಾಬಾದ್ ನಲ್ಲಿ ನೆಲೆಸಿರುವ ಮಗಳು ರಾಧಿಕ ಇದ್ದಾರೆ. ಇಬ್ಬರಿಗೂ ಮದುವೆಯಾಗಿದೆ. ಆದರೆ, ಮಕ್ಕಳು ಮಾತ್ರ ಇದುವರೆಗೂ ತಂದೆಯ ಸಹಾಯಕ್ಕೆ ಬಂದಿಲ್ಲ. ಸಾವಿತ್ರಮ್ಮ ಮನೆಗೆ ಕೀಲಿ ಹಾಕಿ ಊರು ಬಿಟ್ಟಿದ್ದಾರೆ.
ಶಿವಾನಂದಗೆ ಅಕ್ಕಪಕ್ಕದವರು, ಸಂಘಸಂಸ್ಥೆಗಳು ನೆರವಿಗೆ ದಾವಿಸಿವೆ. ಕೊನೆಗಾಲದಲ್ಲಿ ನಾನು ಎಲ್ಲಿಗೆ ಹೋಗಲಿ. ದುಡಿಯುವ ಶಕ್ತಿ ಇದ್ದಿದ್ದರೆ ಇವರನ್ನು ಕೇಳುತ್ತಿರಲಿಲ್ಲ. ಪ್ರೀತಿಯಿಂದ ಮಾತನಾಡಿಸಿ ಎರಡು ಹೊತ್ತು ಊಟ ಹಾಕಿದ್ದರೆ ಸಾಕಿತ್ತು. ಯಾವುದೇ ಸಂಬಂಧ ಇಲ್ಲದವನಂತೆ ನನ್ನನ್ನು ಹೊರದಬ್ಬಿದ್ದಾಳೆ. ದಯವಿಟ್ಟು ನನಗೆ ನ್ಯಾಯ ಕೊಡಿಸಿ ಎಂದು ಶಿವಾನಂದ ಕಣ್ಣೀರಿಡುತ್ತಾರೆ.












Click it and Unblock the Notifications