ದಾಂಪತ್ಯಕ್ಕೆ ಕಾಲಿಟ್ಟ ಮಾಜಿ ಸನ್ಯಾಸಿಗಳ ಮೊರೆ
ದಾವಣಗೆರೆಯ ಚೀಗಟೇರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿಗಳಿಂದ ಚೇತನ್ ಅಪ್ರಾಪ್ತನಲ್ಲ ಎಂಬ ಪ್ರಮಾಣ ಪತ್ರ ತೆಗೆದುಕೊಂಡ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ನಿವೇದಿತಾ ಮತ್ತು ಚೇತನ್, ನಮ್ಮನ್ನು ಎಲ್ಲರಂತೆ ಬದುಕಲು ಬಿಡಿ. ನಾವು ಯಾವ ತಪ್ಪನ್ನು ಮಾಡಿಲ್ಲ ಎಂದಿದ್ದಾರೆ.
ಚೇತನ್ ಅವರ ತಾಯಿ ರತ್ನಮ್ಮ ಅವರಿಂದ ನನಗೆ ಬೆದರಿಕೆ ಕರೆ ಬರುತ್ತಿವೆ. ರಾತ್ರಿ ಮನೆ ಮುಂದೆ ಗೂಂಡಾಗಳನ್ನು ಕಳುಹಿಸುತ್ತಾರೆ. ಎಲ್ಲಿ ಏನೋ ಮಾಡಿಬಿಡುತ್ತಾರೋ ಎಂಬ ಭಯದಲ್ಲಿ ಕಾಲ ಕಳೆಯುತ್ತಿದ್ದೇವೆ ಎಂದು ನಿವೇದಿತಾ ನೋವನ್ನು ತೋಡಿಕೊಂಡರು.
ನನ್ನ ವಯಸ್ಸು 32 ಅಲ್ಲ 24, ಮಾದ್ಯಮಗಳಲ್ಲಿ ಸುಖಾಸುಮ್ಮನೇ ನನ್ನ ವಯಸ್ಸನ್ನು ತಪ್ಪಾಗಿ ಬಿಂಬಿಸಲಾಗಿದೆ. 1986ರಲ್ಲಿ ಜನಿಸಿದ್ದು, ಎಸ್ಎಸ್ಎಲ್ಸಿ ಅಂಕಪಟ್ಟಿಯಲ್ಲಿ ಸಹ ಅದೇ ರೀತಿ ಇದೆ ಎಂದು ನಿವೇದಿತಾ ಸ್ಪಷ್ಟೀಕರಣ ನೀಡಿದರು.
ಈ ಹಿಂದೆ ನನ್ನ ತಾಯಿ ಮನೆಯಲ್ಲಿ ನಾನು 1988ರಲ್ಲಿ ಹುಟ್ಟಿದ್ದೆ ಎಂದು ಹೇಳುತ್ತಿದ್ದರು. ಆದರೆ, ಶಾಲೆಗೆ ಬೇಕೆಂತಲೇ 1990ರಲ್ಲಿ ಜನಿಸಿದೆ ಎಂದು ಸೇರಿಸಲಾಗಿದೆ ಎಂದು ಹೇಳುತ್ತಿದ್ದರು. ಈ ಹಿಂದೆಯೂ ನಾನು ಹೇಳಿದ್ದೆ ನನಗೆ 22 ವರ್ಷ ಎಂದು ಈಗ ಅದನ್ನು ವೈದ್ಯರೇ ದೃಢಪಡಿಸಿದ್ದಾರೆ ಎಂದು ಚೇತನ್ ಸಂತಸ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗದ ಮುರುಘಾಮಠದಿಂದ ಸನ್ಯಾಸತ್ವ ಪಡೆದು ಸಿರಸಿ ರುದ್ರದೇವರ ಮಠದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ನಿವೇದಿತಾ ಅವರು ಸನ್ಯಾಸತ್ವ ತೊರೆದು ಚೇತನ್ ಎಂಬುವವರನ್ನು ಇತ್ತೀಚೆಗೆ ಮದುವೆಯಾಗಿದ್ದಾರೆ.