ಬಳ್ಳಾರಿಗೆ ಕಾಂಗ್ರೆಸ್ ಪಾದಯಾತ್ರೆ, ಜೆಡಿಎಸ್ ಸಾಥ್
ಅಕ್ರಮ ಗಣಿಗಾರಿಕೆಯನ್ನು ಅಸ್ತ್ರವಾಗಿ ಮಾಡಿಕೊಂಡು ಸರಕಾರದ ವಿರುದ್ದ ಯುದ್ದ ಸಾರಿರುವ ಪ್ರತಿಪಕ್ಷಗಳು ಸರಕಾರವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಲು ನಿರ್ಧರಿಸಿದ್ದು 'ಬಳ್ಳಾರಿ ಬಚಾವೋ ಆಂದೋಲನ' ಹೆಸರಿನಲ್ಲಿ ಬೆಂಗಳೂರಿನಿಂದ ಬಳ್ಳಾ ರಿವರೆಗೆ ಪಾದಯಾತ್ರೆ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ.
ಕಾಂಗ್ರೆಸ್ ನಿರ್ಧಾರದ ಬೆನ್ನಲ್ಲೇ ಜಾತ್ಯಾತೀತ ಜನತಾದಳ ಪಾದಯಾತ್ರೆಗೆ ಕೈಜೋಡಿಸುವುದಾಗಿ ಹೇಳಿಕೆ ನೀಡಿದೆ. ಅಕ್ರಮ ಗಣಿಗಾರಿಕೆಯನ್ನು ಸಿಬಿಐಗೆ ವಹಿಸಬೇಕು, ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು, ಬಳ್ಳಾರಿ ಸಚಿವರು ಮತ್ತು ಶಾಸಕರನ್ನು ಅಮಾನತು ಮಾಡಬೇಕು ಎನ್ನುವ ಬೇಡಿಕೆಯೊಂದಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಧರಣಿ ಆರಂಭಿಸಿದೆ.
ಜೆಡಿಎಸ್ ಬೆಂಬಲ: ಪಾದಯಾತ್ರೆಯ ದಿನಾಂಕ ಮತ್ತು ರೂಪುರೇಷೆಯನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಅಹೋರಾತ್ರಿ ಧರಣಿ ನಿರತ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರುಗಳನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ ಆಸ್ಕರ್ ಫೆರ್ನಾಂಡಿಸ್ ಮತ್ತು ಕುಮಾರಸ್ವಾಮಿ ಧರಣಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ.
ಧರಣಿ ನಿರತ ಶಾಸಕರಿಗೆ ಮಲಗಲು ಸದನದಲ್ಲೇ ಹಾಸಿಗೆ, ದಿಂಬು, ಹೊದಿಕೆ, ಮಾತ್ರೆ ಮತ್ತು ಊಟದ ವ್ಯವಸ್ಥೆಯನ್ನು ವಿಧಾನಸಭಾಧ್ಯಕ್ಷ ಕೆ ಜಿ ಬೋಪಯ್ಯ ವ್ಯವಸ್ಥೆ ಮಾಡಿದ್ದರು. ಯಾವ ಸಂಧಾನಕ್ಕೂ ವಿಪಕ್ಷಗಳು ಒಪ್ಪದಿರಲು ನಿರ್ಧರಿಸಿರುವುದರಿಂದ ವಿಧಾನಮಂಡಲದ ಅಧಿವೇಶನ ಮುಂದೆ ನಡೆಯುವ ಬಗ್ಗೆ ಅನಿಶ್ಚಿತತೆ ಉಂಟಾಗಿದೆ.