ಅಫ್ಜಲ್ ಗುರು ಕ್ಷಮಾದಾನ ಅರ್ಜಿ ತಿರಸ್ಕೃತ
"ಆತ ಎಸಗಿರುವ ಅಪರಾಧ ಅತ್ಯಂತ ಹೀನಾಯವಾಗಿದ್ದು ಯಾವುದೇ ಕ್ಷಮೆಗೆ ಅರ್ಹನಲ್ಲ. ತಬಸ್ಸುಂ ಸಲ್ಲಿಸಿರುವ ಕ್ಷಮಾ ಅರ್ಜಿಯನ್ನು ತಿರಸ್ಕರಿಸಲಾಗಿದೆ" ಎಂದು ಗೃಹ ಸಚಿವಾಲಯ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಮುಂಬೈ ಹತ್ಯಾಕಾಂಡದಲ್ಲಿ ಬಂಧಿಯಾಗಿರುವ ಪಾಕ್ ಉಗ್ರ ಅಜ್ಮಲ್ ಅಮೀರ್ ಕಸಬ್ ನಿಗೆ ಗಲ್ಲು ವಿಧಿಸಿದ ಕೆಲವೇ ದಿನಗಳಲ್ಲಿ ಈ ನಿರ್ಣಯವನ್ನು ಕೇಂದ್ರ ತೆಗೆದುಕೊಂಡಿರುವುದು ಕಸಬ್ ಪ್ರಕರಣದ ಮೇಲೆಯೂ ಪರಿಣಾಮ ಬೀರಲಿದೆ.
ಡಿಸೆಂಬರ್ 13, 2001ರಲ್ಲಿ ಐವರು ಉಗ್ರರು ಭಾರತದ ಸಂಸತ್ತಿನ ಮೇಲೆ ದಾಳಿ ನಡೆಸಿ ಆರು ಪೊಲೀಸರು ಮತ್ತು ಓರ್ವ ನಾಗರಿಕನನ್ನು ಹತ್ಯೆಗೈದಿದ್ದರು. ಪ್ರತಿದಾಳಿಯಲ್ಲಿ ಐವರು ಉಗ್ರರನ್ನು ಕೊಲ್ಲಲಾಗಿತ್ತು. ದಾಳಿಯ ಪ್ರಮುಖ ರೂವಾರಿಯೆಂದು ಅಫ್ಜಲ್ ಗುರುವನ್ನು 2002 ಡಿಸೆಂಬರ್ 18ರಂದು ದೆಹಲಿ ಹೈಕೋರ್ಟ್ ಗಲ್ಲು ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿತ್ತು. ಆತನನ್ನು ನೇಣಿಗೇರಿಸಲು 2006ರ ಅಕ್ಟೋಬರ್ 20ಕ್ಕೆ ದಿನ ನಿಗದಿಪಡಿಸಲಾಗಿತ್ತು. ಆದರೆ, ತಬಸ್ಸು ಕ್ಷಮಾದಾನ ಅರ್ಜಿಯನ್ನು ಅಂದಿನ ರಾಷ್ಟ್ರಪತಿ ಅಬ್ದುಲ್ ಕಲಾಂಗೆ ಸಲ್ಲಿಸಿದ್ದರಿಂದ ಇಲ್ಲಿಯವರೆಗೆ ಆತನಿಗಾಗಿ ನೇಣುಗಂಬ ಕಾಯುವಂತಾಯಿತು.