ಬೆಂಗಳೂರಿನಲ್ಲಿ ಮರಗಳನ್ನು ಕಡಿಯಲು ಕರೆ
ಆದರೆ ಜೀವಕ್ಕೇ ಸಂಚಕಾರ ಒಡ್ಡುವ ಮರಗಳು ನಮಗೆ ಖಂಡಿತ ಬೇಡ. ಪ್ರತೀವರ್ಷ ಮೇ ಜೂನ್ ತಿಂಗಳಲ್ಲಿ ಮಳೆ ಗಾಳಿ ಜೋರಾದಾಗ ಬೆಂಗಳೂರಿನಲ್ಲಿರುವ ರಸ್ತೆ ಮರಗಳು ಉರುಳಿ ಬೀಳುತ್ತಲೇ ಇರುತ್ತವೆ. ಇದು ಪ್ರತೀವರ್ಷ ಕಂಡುಬರುವ ದೃಶ್ಯ. ವಯಸ್ಸಾದ ಮರಗಳು ಮತ್ತು ಬುಡ ಭದ್ರವಿಲ್ಲದ ಮರಗಳು ಉರುಳಿ ನಾನಾ ಬಗೆಯ ಅನಾಹುತಗಳು ಸಂಭವಿಸುತ್ತವೆ. ದಾರಿಯಲ್ಲಿ ಹೋಗುತ್ತಿದ್ದರೆ ಯಾವ ಮರ ಯಾರ ತಲೆ ಮೇಲೆ ಯಾವಾಗ ಬೀಳುತ್ತದೋ ಎಂಬ ಅಂಜಿಕೆಯಿಂದಲೇ ಹೆಜ್ಜೆ ಹಾಕಬೇಕಾಗುವ ಸೀಸನ್ ಈಗ ಮತ್ತೆ ಬೆಂಗಳೂರಿಗೆ ಕಾಲಿಟ್ಟಿದೆ.
ಮೊನ್ನೆ ಶನಿವಾರ ನಗರದ ನಾನಾ ಕಡೆ ಬಿದ್ದ ಅಲ್ಪ ಬೇಸಿಗೆ ಮಳೆಗೆ 60 ಮರಗಳು ಉರುಳಿವೆ. ಇಂದಿರಾ ನಗರದಲ್ಲಂತೂ ಮರ ಉರುಳುವುದರಿಂದ ಉಂಟಾದ ಫಜೀತಿ ಹೇಳಲಸಾಧ್ಯ. ಈ ಮರಗಳು ಸುಮ್ಮನೆ ಉರುಳಿಬೀಳುವುದಿಲ್ಲ. ಕರೆಂಟು ಕಂಬ, ಫೋನು ಕಂಬ, ಸಿಗ್ನಲ್ ಲೈಟು ಕಂಬ, ಕೇಬಲ್ಲುಗಳು, ಜಾಹಿರಾತು ಫಲಕಗಳ ಮೇಲೆ ಬಿದ್ದು ರಸ್ತೆಯಲ್ಲಿ ಅಂಗಾತ ಮಲಗುತ್ತವೆ. ಮರದ ಕೆಳಗೆ ಇರುವ ವಾಹನ, ಜನಗಳನ್ನು ಈ ಮರಗಳು ಆಹುತಿ ತೆಗೆದುಕೊಳ್ಳುವ ಭಯ ಇದ್ದೇ ಇದೆ.
ಬೆಂಗಳೂರಿನ ರಸ್ತೆಯ ಇಕ್ಕೆಲಗಳಲ್ಲಿರುವ ಶಿಥಿಲ ಮರಗಳನ್ನು, ರಸ್ತೆಯಮೇಲೆ ಚಾಚಿಕೊಂಡಿರುವ ಕೊಂಬೆ ರೆಂಬೆಗಳನ್ನು ಈ ಕೂಡಲೇ ಕಡಿಯಬೇಕೆಂದು ಬಿಬಿಎಂಪಿಗೆ ನಾವು ಈ ಮೂಲಕ ಮನವಿ ಮಾಡುತ್ತೇವೆ. ಉದ್ಯಾನವನ, ಮನೆ ಕಾಂಪೌಂಡು ಮತ್ತಿತರ ಬಯಲು ಪ್ರದೇಶಗಳಲ್ಲಿರುವ ಮರಗಳನ್ನು ರಕ್ಷಿಸಿ, ಪ್ರಾಣಾಪಾಯದ ಭೀತಿ ಹುಟ್ಟಿಸಿರುವ ಮರಗಳನ್ನು ದಯಾ ದಾಕ್ಷಿಣ್ಯ ತೋರದೆ ಇವತ್ತೇ ಕಡಿಯಿರಿ.