ಧೈರ್ಯವಿದ್ದರೆ ನೇರವಾಗಿ ಮಾತಾಡಿ : ನಾಯಕ್
ಇದಕ್ಕೆ ಪ್ರತಿಕ್ರಿಯಿಸಿರುವ ಯಡಿಯೂರಪ್ಪ, ನ್ಯಾ. ನಾಯಕ್ ಜೊತೆ ಮಾತನಾಡುವಷ್ಟು ಧೈರ್ಯವೂ ಇಲ್ಲ. ಅವರಷ್ಟು ದೊಡ್ಡವರೂ ಅಲ್ಲ. ದೊಡ್ಡವರ ಸಹವಾಸವೇ ನನಗೆ ಬೇಡ. ನಾನು ನನ್ನ ಪಾಡಿಗೆ ಇದ್ದೇನೆ. ಅವರ ಹೇಳಿಕೆಗೆ ಉತ್ತರಿಸುವ ಗೋಜಿಗೆ ಹೋಗುವುದಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಸರಕಾರ ಮತ್ತು ರಾಜ್ಯ ಮಾನವ ಹಕ್ಕುಗಳ ಅಧ್ಯಕ್ಷರ ನಡುವೆ ನಡೆಯುತ್ತಿರುವ ಶೀತಲ ಸಮರ ಬಹಿರಂಗಗೊಂಡಿದೆ.
ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ನಾಯಕ್, ಯಡಿಯೂರಪ್ಪನವರೇ ನಿಮ್ಮ ಹಿಂಬಾಲಕರೂ ನನ್ನನ್ನು ಮತ್ತು ಸಂಸ್ಥೆಯನ್ನು ದಮನಿಸುವ ರೀತಿ ಹೇಳಿಕೆ ನೀಡುತ್ತಿದ್ದರೂ ಮೌನವಾಗಿರುವುದು ನೋಡಿದರೆ ಪರದೆಯ ಹಿಂದೆ ಇರುವವರು ನೀವೇ ಅಲ್ಲವೇ ಎಂದು ಪ್ರಶ್ನಿಸಿದರು.
ಮಾತಿನುದ್ದಕ್ಕೂ ಮುಖ್ಯಮಂತ್ರಿ, ದಿಲ್ಲಿ ಪ್ರತಿನಿಧಿ ಧನಂಜಯ್ ಕುಮಾರ್, ಬಿಜೆಪಿ ವಕ್ತಾರ ಆಯನೂರು ಮಂಜುನಾಥ್, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಪುಟ್ಟಸ್ವಾಮಿ, ಸಚಿವ ಆನಂದ ಅಸ್ನೋಟಿಕರ್ ಅವರನ್ನು ತರಾಟೆಗೆ ತೆಗೆದುಕೊಂಡ ಅವರು, ನೀಚತನದ ಬುದ್ಧಿ ಬಿಟ್ಟು ವರ್ತಿಸುವಂತೆ ಹೇಳಿದರು. ಮಾಜಿ ಸಚಿವ ಹರತಾಳು ಹಾಲಪ್ಪ ಅವರ ಅತ್ಯಾಚಾರ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ನಾಯಕ್ ಆಗ್ರಹಿಸಿದರು.