Get Updates
Get notified of breaking news, exclusive insights, and must-see stories!

ಶೋಲೆ ಶೂಟಿಂಗ್ ಸ್ಥಳದಲ್ಲಿ ಏಳಲಿದೆ ರೆಸಾರ್ಟ್

ರಾಮನಗರ, ಏ.29 : 'ಕಿತನೇ ಆದ್ಮೀತೇ' ಎಂಬ ಗಬ್ಬರ್‌ಸಿಂಗ್‌ನ ಘರ್ಜನೆ, ಹೇಮಾಮಾಲಿನಿ ಗೆಜ್ಜೆ ನಾದ, ಜಯಾಭಾದುರಿಯ ಸದ್ದಿಲ್ಲದ ಕಾಲ್ನಡಿಗೆ, ಸಂಜೀವ್‌ಕುಮಾರ್ ಅಬ್ಬರ, ಅಮಿತಾಭ್‌ ಬಚ್ಚನ್‌ರ ಠೇಂಕಾರದ ಮಾತುಗಳು, ಧರ್ಮೇಂದ್ರನ ವೀರಾವೇಶದ ನುಡಿಗಳು.. ಇಂದಿಗೂ ರಾಮನಗರದ ರಾಮದೇವರಬೆಟ್ಟಕ್ಕೆ ಕಾಲಿಟ್ಟರೆ ಕಿವಿಗೆ ಬಂದು ಅಪ್ಪಳಿಸುತ್ತವೆ. ಪ್ರತಿಧ್ವನಿಸಿ ಬಂದಂತಾಗಿ ಮೈಯಲ್ಲಿ ರೋಮಾಂಚನ ಮೂಡಿಸುತ್ತವೆ.

ಭಾರತೀಯ ಚಿತ್ರರಂಗದ ಮೈಲಿಗಲ್ಲು ಎನಿಸಿರುವ ರಮೇಶ್ ಸಿಪ್ಪಿ ನಿರ್ದೇಶನದ 'ಶೋಲೆ' ಚಿತ್ರದ ಚಿತ್ರೀಕರಣ ನಡೆದಿರುವ ರಾಮದೇವರ ಬೆಟ್ಟವನ್ನ ಇಂದಿಗೂ ಜನ ಪ್ರೀತಿಯಿಂದ ರಾಮ್‌ಘಡ್ ಎಂದೇ ಕರೆಯುತ್ತಾರೆ. ಅದಕ್ಕೆ ಕಾರಣ ಬಿಸಿಲು ಮಳೆಗೆ ಮೈಯೊಡ್ಡಿ ನಿಂತಿರುವ ರಾಮನಗರದ ಬೆಟ್ಟಗಳು ಮತ್ತು ಶೋಲೆ ಶೂಟಿಂಗ್.

ಶ್ರೀರಾಮಲಕ್ಷ್ಮಣರು ವಸವಾಸಕ್ಕೆ ಬಂದ ಸಂದರ್ಭದಲ್ಲಿ ನೆಲೆಸಿದ್ದರೆಂಬ ಪ್ರತೀತಿಯಿರುವ ಶ್ರೀರಾಮದೇವರ ಬೆಟ್ಟ ಪುರಾಣಪ್ರಸಿದ್ದಿ ಪಡೆದಿದೆ. ದಕ್ಷಿಣ ಭಾರತದಲ್ಲಿ ರಣಹದ್ದುಗಳು ನೆಲೆಸಿರುವ ಏಕೈಕ ಸ್ಥಳವೆನಿಸಿರುವ ಶ್ರೀರಾಮದೇವರ ಬೆಟ್ಟ ಹಲವಾರು ವೈಶಿಷ್ಟ್ಯತೆಗಳನ್ನ ತನ್ನ ಪ್ರಕೃತಿಯ ಮಡಿಲಲ್ಲಿಡಿದಿಟ್ಟುಕೊಂಡಿದೆ.

ಇಷ್ಟೆಲ್ಲಾ ಮಹತ್ವವಿರುವ ಸ್ಥಳದ ಸನಿಹದಲ್ಲೇ ರೆಸಾರ್ಟ್ ನಿರ್ಮಾಣ ಮಾಡಲು ಅರಣ್ಯ ಇಲಾಖೆಯ ವಿರೋಧದ ನಡುವೆ ಜಿಲ್ಲಾಡಳಿತ ಅನುಮತಿ ನೀಡಿದ್ದು, ರಾಜ್ಯ ಗೃಹಸಚಿವ ವಿ.ಎಸ್.ಆಚಾರ್ಯರವರೇ ರೆಸಾರ್ಟ್ ನಿರ್ಮಾಣಕ್ಕೆ ಸಹಕರಿಸುವಂತೆ ಶಿಫಾರಸು ಪತ್ರ ನೀಡಿದ್ದಾರೆ. ರೆಸಾರ್ಟ್ ನಿರ್ಮಾಣಕ್ಕೆ ಅನುಮತಿ ನೀಡಿರುವ ಸರ್ಕಾರದ ನಿರ್ಧಾರದ ವಿರುದ್ದ ಸ್ಥಳೀಯರು ಆಕ್ರೋಶವ್ಯಕ್ತಪಡಿಸಿದ್ದು, ಹೋರಾಟದ ಎಚ್ಚರಿಕೆಯನ್ನು ನೀಡಿದ್ದಾರೆ.

ರಾಮದೇವರ ಬೆಟ್ಟದಲ್ಲಿ ಶೋಲೆ ಚಿತ್ರದ ನಟರ ಮಾತುಗಳು ಇಂದಿಗೂ ಪ್ರತಿಧ್ವನಿಸುತ್ತಿದ್ದರೂ ಗ್ರಾಮಸ್ಥರ ಕೂಗು ಮಾತ್ರ ಸರಕಾರಕ್ಕೆ ಕೇಳುತ್ತಲೇ ಇಲ್ಲ. ಶೋಲೆ ಚಿತ್ರದಲ್ಲಿ ರಾಮ್‌ಘಡ್ ಆಗಿದ್ದ ರಾಮದೇವರ ಬೆಟ್ಟದಲ್ಲಿ ಬೆಟ್ಟದ ಮೇಲೆಲ್ಲಾ ಚಿತ್ರೀಕರಣದ ಸೆಟ್‌ಗಳನ್ನಾಕಿದ್ದರ ಬಗೆ ಇಂದಿಗೂ ಸ್ಥಳೀಯರು ನೆನಪಿಸಿಕೊಳ್ಳುತ್ತಾರೆ. ದೇಶದಲ್ಲಿ ರಣಹದ್ದುಗಳ ಸಂತತಿ ನಶಿಸುತ್ತಿರುವ ನಡುವೆಯೂ ರಾಮದೇವರ ಬೆಟ್ಟದಲ್ಲಿ ರಣಹದ್ದುಗಳ ಸಂತತಿ ಇಂದಿಗೂ ಇದೆ. ಐದಾರು ವರ್ಷಗಳ ಹಿಂದೆ ನೂರಾರು ಸಂಖ್ಯೆಯಲ್ಲಿದ್ದ ರಣಹದ್ದುಗಳ ಸಂಖ್ಯೆ 15ರಿಂದ 20ಕ್ಕೆ ಇಳಿಮುಖವಾಗಿವೆ.

ಶೋಲೆ ಹೆಸರಿನಲ್ಲೇ 'ಅನಂತರ' ಸಂಸ್ಥೆ ರೆಸಾರ್ಟ್ ನಿರ್ಮಾಣ ಮಾಡಲು ಹೊರಟಿದೆ. ಇದಕ್ಕೆ ಜಿಲ್ಲಾಡಳಿತ ಈಗಾಗಲೇ ಹಸಿರು ನಿಶಾನೆ ನೀಡಿದೆ. ಆದರೆ ಅರಣ್ಯ ಇಲಾಖೆಯ ಪ್ರಕಾರ ಅರಣ್ಯ ವಲಯಕ್ಕೆ ಸೇರಿದ್ದೆಂಬ ಜಮೀನಾಗಿರುವುದರಿಂದ ರೆಸಾರ್ಟ್ ನಿರ್ಮಾಣ ಸಾಧ್ಯವಿಲ್ಲವೆಂಬ ವಿಷಯವನ್ನು ಸರ್ಕಾರಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಪತ್ರ ಬರೆದಿದ್ದಾರೆ. ಆದರೂ ಗೃಹ ಸಚಿವ ವಿ.ಎಸ್.ಆಚಾರ್ಯರವರು ರೆಸಾರ್ಟ್ ನಿರ್ಮಾಣಕ್ಕೆ ಸಹಕರಿಸುವಂತೆ ಶಿಫಾರಸು ಪತ್ರ ಬರೆದಿರುವುದು ಸರಿಯಲ್ಲವೆಂದು ಸ್ಥಳೀಯ ಪತ್ರಕರ್ತರಾದ ಚಲುವರಾಜು ಆಕ್ರೋಶವ್ಯಕ್ತಪಡಿಸಿದ್ದಾರೆ.

ರೆಸಾರ್ಟ್ ನಿರ್ಮಾಣ ಮಾಡುತ್ತಿರುವ ಸ್ಥಳ ಅರಣ್ಯ ವಲಯಕ್ಕೆ ಸೇರಿದ್ದೆಂದು 1917ರಲ್ಲಿ ನೊಟಿಫಿಕೇಶನ್ ಹೊರಡಿಸಿ ನಕಾಶೆಯನ್ನ ಸಹ ತಯಾರಿಸಲಾಗಿದೆ. ಮತ್ತು ಡಿಸೆಂಬರ್ 1996ರಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಅರಣ್ಯ ಇಲಾಖೆಯ ಭೂಮಿಯನ್ನು ಜಿ.ಆರ್.ಮಂಜುನಾಥ್‌ರವರು ಅತಿಕ್ರಮಣ ಮಾಡಿರುವುದರ ಬಗ್ಗೆ ಅರಣ್ಯ ಇಲಾಖೆ ಸಾಬೀತು ಪಡಿಸಿರುವ ಪತ್ರವನ್ನ ಜಿಲ್ಲಾಡಳಿತಕ್ಕೆ ನೀಡಿದ್ದಾರೆ.

ಆದರೂ ಅನಂತರ ಸಂಸ್ಥೆಯವರು 6.27 ಎಕರೆ ಭೂಮಿಯನ್ನು ಕ್ರಯಕ್ಕೆ ಪಡೆದಿದ್ದು, ಅರಣ್ಯ ಇಲಾಖೆಯವರು ಸಮಂಜಸ ದಾಖಲೆಗಳನ್ನ ಸಾಬೀತುಪಡಿಸಿಲ್ಲವೆಂಬ ಕಾರಣ ಹೇಳಿ ಉಪವಿಭಾಗಾಧಿಕಾರಿಗಳು ರೆಸಾರ್ಟ್ ನಿರ್ಮಾಣಕ್ಕೆ ಅಸ್ತು ಎಂದಿದ್ದಾರೆ. ಜಿಲ್ಲಾಡಳಿತ ಎಡವಟ್ಟು ಮಾಡಿರುವ ಬಗ್ಗೆ ಎಲ್ಲಾ ದಾಖಲಾತಿಗಳನ್ನ ಸರ್ಕಾರಕ್ಕೆ ಅರಣ್ಯ ಇಲಾಖೆ ಒದಗಿಸಿ ರೆಸಾರ್ಟ್ ನಿರ್ಮಾಣ ಕಾರ್ಯ ಕಾನೂನು ಬಾಹಿರವೆಂದು ಸರ್ಕಾರಕ್ಕೆ ಮನದಟ್ಟು ಮಾಡಿದ್ದಾರೆ.

ಆದರೂ ದೊಡ್ಡ ಕಂಟೇನರ್, ಕಲ್ಲು, ಮಣ್ಣು ರಾಮದೇವರ ಬೆಟ್ಟದ ಸನಿಹದಲ್ಲೇ ಇದ್ದು ಮುಂದಿನ ತಿಂಗಳಿನಿಂದ ನಿರ್ಮಾಣ ಕಾರ್ಯ ನಡೆಯಲಿದೆ ಎಂದು ಹೇಳಲಾಗುತ್ತಿದೆ. ರೆಸಾರ್ಟ್ ನಿರ್ಮಾಣದ ಅನುಮತಿಯನ್ನ ರದ್ದುಗೊಳಿಸಬೇಕು ಇಲ್ಲದಿದ್ದರೆ ಉಗ್ರಹೋರಾಟ ಮಾಡಲಾಗುವುದೆಂದು ಜಿಲ್ಲಾ ಕರವೇ ಅಧ್ಯಕ್ಷ ಶ್ರೀಧರ್ ಎಚ್ಚರಿಸಿದ್ದಾರೆ. ಒಟ್ಟಾರೆ ಹಣದ ಥೈಲಿ ಒಂದಿದ್ದರೆ ಏನಾದರು ಮಾಡಬಹುದೆಂಬುದಕ್ಕೆ ಹಣವಂತರ ದುರಾಸೆಗೆ ಶೋಲೆಬೆಟ್ಟದಲ್ಲಿ ರೆಸಾರ್ಟ್ ನಿರ್ಮಾಣಕ್ಕೆ ಹಸಿರು ನಿಶಾನೆ ನೀಡಿರುವುದು ಸಾಕ್ಷಿಯಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+