ಮಂತ್ರಾಲಯದಲ್ಲಿ ತಂಬಾಕು, ಮದ್ಯ ನಿಷಿದ್ದ
ಹೊಸದಾಗಿ ಜಾರಿಗೊಳಿಸಿರುವ ನಿಷೇಧಾಜ್ಞೆ ಬಗ್ಗೆ ತಿಳುವಳಿಕೆ ಮೂಡಿಸಲು ಸರಕಾರ ವ್ಯಾಪಕ ಪ್ರಚಾರ ನೀಡಿದೆ. ಪೋಲಿಸ್ ಇಲಾಖೆ ಮತ್ತು ಮಠದ ಸಿಬ್ಬಂದಿ ಅವಿರತವಾಗಿ ತಂಬಾಕು ಸೇವನೆ ಮತ್ತು ಮಧ್ಯಪಾನ ಮಾಡಬಾರದೆಂದು ಡಂಗುರ ಸಾರಿಸುತ್ತಿದೆ. ಇದರ ಫಲವಾಗಿ ಶ್ರೀಮಠದ ಆಸುಪಾಸು, ಮಂತ್ರಾಲಯದ ಮುಖ್ಯರಸ್ತೆಗಳಲ್ಲಿ ನಡೆಯುತ್ತಿದ್ದ ಬೀಡಿ, ಸಿಗರೇಟು, ಗುಟ್ಕಾ ಸೇವನೆ ತಹಬಂದಿಗೆ ಬಂದಿದೆ.
ನಿಷೇಧದ ದುರ್ಲಾಭ ಪಡೆಯಲು ಅವಕಾಶ ನೀಡುವುದಿಲ್ಲ. ನಿರಂತರ ಪ್ರಚಾರ ದಟ್ಟ ಜನಾಭಿಪ್ರಾಯ ರೂಪಿಸಲಿದ್ದು, ಪುಣ್ಯಕ್ಷೇತ್ರದಲ್ಲಿ ವಾಸವಿದ್ದಷ್ಟು ಅವಧಿ ಕೆಟ್ಟ ವ್ಯಸನ ಬಿಟ್ಟರೆ ಜೀವನದಲ್ಲಿ ಮಹತ್ತರ ಬದಲಾವಣೆ ತರಲಿದೆ. ರಾಯರ ಅನುಗ್ರಹ ನಿಮಗೆ ಸಿಗಲಿದೆ. ಆರೋಗ್ಯಪೂರ್ಣ ಚೈತನ್ಯಕ್ಕೂ ಮತ್ತು ಪರಿಸರ ಸ್ವಚ್ಚತೆಗೂ ಅನುಕೂಲವಾಗಲಿದೆ ಎಂದು ಶ್ರೀಮಠದ ಸುಯಮೀಂದ್ರಾಚಾರ್ಯ ಹೇಳಿಕೆ ನೀಡಿದ್ದಾರೆ.
ಆದರೆ, ಇಲ್ಲಿನ ವ್ಯಾಪಾರಸ್ಥರು ಹೊಸ ಕಾನೂನಿನ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವಹಿವಾಟಿನಿಂದ ಕೈತುಂಬುತ್ತಿದ್ದ ಸಂಪಾದನೆ ಕೈತಪ್ಪಿ ಹೋಗುತ್ತಿದೆ ಎಂದು ಪರಿತಪಿಸುತ್ತಿದ್ದಾರೆ. ಶ್ರೀಮಠದ ಕೆಲವು ಸಿಬ್ಬಂದಿ ಗುಟ್ಕಾ, ಸಿಗರೇಟು ಚಟ ಮೊದಲಿಗೆ ಬಿಡಲಿ ನಂತರ ಇದು ಬೇರೆಯವರಿಗೆ ಅನುಕರಣೆಯಾಗಲಿದೆ ಎಂದು ಸ್ಥಳೀಯ ವ್ಯಾಪಾರಸ್ಥರ ವಾದವಾಗಿದೆ.