ದುಬೈಗೆ ಹೋಗುವ ದಾದಿಯರ ಸಂಖ್ಯೆ ಇಳಿಮುಖ

ಕಡಿಮೆ ಸಂಬಳ, ಅಭದ್ರತೆ, ದಾದಿಯರ ಕೆಲಸಕ್ಕೆ ಉಜ್ವಲ ಭವಿಷ್ಯ ಇಲ್ಲದಿರುವುದು ಹಾಗೂ ಉದ್ಯೋಗಿಗಳಿಗೆ ಮೂಲಸೌಲಭ್ಯಗಳ ಕೊರತೆಯಿಂದಾಗಿ ದಾದಿಯರ ನೌಕರಿ ಆಯ್ದುಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ ಎಂದು ನರ್ಸಿಂಗ್ ಮತ್ತು ಮಿಡ್ ವೈಫರಿ ಮಂಡಳಿಯ ಅಭಿಪ್ರಾಯಪಟ್ಟಿದೆ. ನರ್ಸ್ ಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿರುವುದು ಅರಬ್ ದೇಶದ ಸರಕಾರಗಳ ಗಮನಕ್ಕೂ ಬಂದಿದ್ದು, ಅದಕ್ಕೆ ಪೂರಕವಾದ ಕಾರಣಗಳನ್ನೂ ಸರಕಾರಗಳು ಗಂಭೀರವಾಗಿ ಪರಿಗಣಿಸಿವೆ ಎಂದು ಸರಕಾರದ ವಕ್ತಾರರು ಹೇಳಿದ್ದಾರೆ.
ನರ್ಸ್ ಗಳಿಗೆ ಇತರರಂತೆ ಮೂಲಸೌಲಭ್ಯ ಕಲ್ಪಿಸಲು ಮುಖ್ಯವಾಗಿ ಹೊರ ರಾಷ್ಟ್ರಗಳಿಂದ ಬಂದಿರುವ ನರ್ಸ್ ಗಳ ಸಾಧಕ ಬಾಧಕಗಳ ಪರಿಶೀಲನೆಗೆ ನೂತನ ಮಂಡಳಿಯನ್ನು ರಚಿಸಲಾಗುವುದು. ಮಂಡಳಿಯಿಂದ ನರ್ಸಿಂಗ್ ಕೋರ್ಸ್ ಗಳ ಗುಣಮಟ್ಟ ಕಾಪಾಡುವುದು. ನರ್ಸ್ ಗಳ ಯೋಗಕ್ಷೇಮ ಸೇರಿ ಮೂಲಭೂತ ಸೌಕರ್ಯಗಳ ಬಗ್ಗೆ ಗಮನ ಹರಿಸಲಾಗುವುದು. ನರ್ಸ್ ಗಳ ಬೇಡಿಕೆ ಬರೀ ಅರಬ್ ರಾಷ್ಟ್ರಗಳಲ್ಲಿ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲೂ ಇದರ ಸಮಸ್ಯೆ ಬೃಹತ್ ಪ್ರಮಾಣದಲ್ಲಿದೆ ಎಂದು ಯುಎಇ ಆರೋಗ್ಯ ಇಲಾಖೆ ಕಾರ್ಯದರ್ಶಿ ಡಾ. ಫಾತೀಮಾ ರಿಪೈ ತಿಳಿಸಿದ್ದಾರೆ.
ದಾದಿಯರ ಗಮನ ಬೇರೆ ಕಡೆಗೆ : ಇತಿಹಾಸಗಳಲ್ಲಿ ನಾವೆಲ್ಲ ಓದಿರುವಂತೆ ಏಲಕ್ಕಿ, ಮೆಣಸು, ಲವಂಗ ಮುಂತಾದ ಸಾಂಬಾರ ಪದಾರ್ಥಗಳ ರಫ್ತಿಗೆ ಭಾರತ ಹೆಸರು ವಾಸಿಯಾಗಿತ್ತು. ಆಧುನಿಕ ಭಾರತದ ಉದಯವಾಗುತ್ತಿದ್ದಂತೆ ಸಾಂಬಾರ ಪದಾರ್ಥಗಳ ರಫ್ತಿಗೆ ಕೊಂಚ ಹಿನ್ನಡೆಯಾಗಿ ಇತರ ಅನೇಕ ವಸ್ತುಗಳು ರಫ್ತು ಪಟ್ಟಿಗೆ ಸೇರಿಕೊಂಡವು. ಕರ್ನಾಟಕದಿಂದ ಕಬ್ಬಿಣದ ಅದಿರು, ಗ್ರಾನೈಟ್, ಐಟಿ ಉತ್ಪನ್ನಗಳು ಮತ್ತು ಮಾನವ ಸಂಪನ್ಮೂಲಗಳ ಸಾಗಾಣಿಕೆ ( ಪ್ರತಿಭಾ ಪಲಾಯನ ಎನ್ನುವುದು ಇನ್ನೊಂದು ಮಗ್ಗಲು) ಹೆಚ್ಚಾಯಿತು.
ಮೊದಮೊದಲು ರಾಜ್ಯದಿಂದ ವಿದೇಶಗಳಿಗೆ ಹೋಗುತ್ತಿದ್ದವರಲ್ಲಿ ವೈದ್ಯರು ಮತ್ತು ಮೂಲ ವಿಜ್ಞಾನ ಪದವೀಧರರ ಪ್ರಮಾಣ ಹೆಚ್ಚಿತ್ತು. ಈಗಿನ ಕಾಲದಲ್ಲಿ ಐಟಿ ಇಂಜಿನಿಯರುಗಳನ್ನು ಅಮೆರಿಕಾಗೆ, ಬ್ರಿಟನ್ನಿಗೆ, ಚೀನಾಗೆ ರಫ್ತು ಮಾಡುವುದು ಹೆಚ್ಚಾಗಿದೆ. ಆದರೆ, ಅರಬ್ ರಾಷ್ಟಗಳಿಗೆ ಭಾರತದಿಂದ ಹೋಗುವವರ ಪೈಕಿ ದಾದಿಯರ ಪ್ರಮಾಣ ಅಪಾರ. ಈ ದಾದಿಯರು ಶೇ 90 ರಷ್ಟು ಕೇರಳದಿಂದ ಹೋಗುತ್ತಾರೆ. ಅದರಲ್ಲೂ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಕೊಟ್ಟಾಯಂ ಮೂಲದವರೇ ಹೆಚ್ಚು.
ಈಗೀಗ ದಾದಿಯರ ವೃತ್ತಿಗೆ ಹೊಸ ವ್ಯಾಖ್ಯೆ, ಹೊಸ ಬೇಡಿಕೆ ಬಂದಿದೆ. ದಾದಿ ಎಂದರೆ ಆಸ್ಪತ್ರೆಯಲ್ಲಿ ರೋಗಿಗೆ ಔಷಧೋಪಚಾರ ಮಾಡುವ, ಶಸ್ತ್ರ ಚಿಕಿತ್ಸೆಗಳಲ್ಲಿ ವೈದ್ಯರಿಗೆ ಸಹಾಯಕರಾಗಿ ಕೆಲಸ ಮಾಡುವ medical support staff ಎಂಬ ಹಣೆಪಟ್ಟಿ ಬದಲಾಗಿದೆ. ಮುಂದುವರೆದ ದೇಶಗಳಲ್ಲಿ ಶಸ್ತ್ರ ಚಿಕಿತ್ಸೆ ಮಾಡುವಾಗ ಅಥವಾ ಔಷಧ ನೀಡುವಾಗ ಲೋಪವಾದರೆ ವೈದ್ಯರ ಜತೆಗೆ ದಾದಿಯರೂ ಕಾನೂನಿನ ಪ್ರಕಾರ ಶಿಕ್ಷೆಗೆ ಒಳಗಾಗುವ ಪ್ರಮೇಯಗಳಿವೆ.
ಸುಮ್ಮನೆ ಯಾಕೆ ರಿಸ್ಕು ಎಂದು ಭಾವಿಸುತ್ತಿರುವ ಈ ಕಾಲದ ದಾದಿಯರು, ಪಾಶ್ಚಿಮಾತ್ಯ ರಾಷ್ಟಗಳಲ್ಲಿ ವೃದ್ಧರನ್ನು ನೋಡಿಕೊಳ್ಳುವ ಖಾಸಗಿ ದಾದಿಯರಾಗಲು ಇಷ್ಟಪಡುತ್ತಾರೆ. ಸಂಬಳ ಹೆಚ್ಚು ರಿಸ್ಕ್ ಕಡಿಮೆ. ಇಂಥ ನೌಕರಿ ಹುಡುಕಿಕೊಂಡು ಕೇರಳದ ಅನೇಕ ದಾದಿಯರು ಆಸ್ಟ್ರೇಲಿಯಾ ದೇಶ ಸೇರಿಕೊಂಡಿದ್ದಾರೆ. ಈ ಎಲ್ಲ ಮತ್ತಿತರ ಕಾರಣಗಳಿಂದಾಗಿ ದಶಕಗಳಿಂದ ಕೊಟ್ಟಾಯಂನಿಂದ ದುಬೈ ವಿಮಾನ ಏರುತ್ತಿದ್ದ ಸಾವಿರಾರು ನರ್ಸುಗಳ ಸಂಖ್ಯೆ ನೂರಾರಕ್ಕೆ ಇಳಿದಿದೆ.












Click it and Unblock the Notifications