ಮಕ್ಕಳಿಗೆ ಬ್ಯಾಂಕಿಂಗ್ ಜ್ಞಾನ ಅಗತ್ಯ: ಡಿ. ಸುಬ್ಬರಾವ್
ಅವರು ಸೋಮವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಎಲೆಕ್ಟ್ರಾನಿಕ್ ವರ್ಗಾವಣೆ ಯೋಜನೆ, ಆರ್ಥಿಕ ಸಾಕ್ಷರತೆಯನ್ನು ಸೇರ್ಪಡೆ ಮಾಡಿದ ಪರಿಷ್ಕೃತ ಶಾಲಾ ಪಠ್ಯ ಪುಸ್ತಗಳ ಬಿಡುಗಡೆ ಹಾಗೂ ಆರ್ಥಿಕ ಸಾಕ್ಷರತಾ ಸ್ಪರ್ಧೆಗಳ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮಕ್ಕಳು ಬಾಲ್ಯದಿಂದಲೇ ಉಳಿತಾಯ ಮನೋಭಾವವನ್ನು ಬೆಳೆಸಿಕೊಳ್ಳುವುದರಿಂದ ಆರ್ಥಿಕ ಅಭಿವೃದ್ಧಿಗೂ ನೆರವಾಗುತ್ತದೆ ಎಂದು ಅವರು ನುಡಿದರು.
ರಾಜ್ಯದಲ್ಲಿ ಬಿಡುಗಡೆ ಮಾಡಲಾದ ಆರ್ಥಿಕ ಸಾಕ್ಷರತೆಯನ್ನು ಸೇರ್ಪಡೆ ಮಾಡಿದ ಶಾಲಾ ಪಠ್ಯಪುಸ್ತಕಗಳ ಮೌಲ್ಯಮಾಪನ ಮಾಡುವಂತೆ ಅವರು ರಾಜ್ಯ ಶಿಕ್ಷಣ ಇಲಾಖೆಗೆ ಮನವಿ ಮಾಡಿದರು. ದೇಶದಲ್ಲಿ ಹಣಕಾಸು ಸೇರ್ಪಡೆಯಾಗದ 5.7 ಲಕ್ಷ ಗ್ರಾಮಗಳಿವೆ. ಈ ಗ್ರಾಮಗಳಲ್ಲಿ ಬ್ಯಾಂಕುಗಳ ಶಾಖೆಗಳಿಲ್ಲ. ಇಲ್ಲಿ ಶಾಖೆಗಳನ್ನು ತೆರೆದು, ಗ್ರಾಮಸ್ಥರು ಸುಲಭ ಖಾತೆಯನ್ನು ಪ್ರಾರಂಭಿಸುವ ಮೂಲಕ ಅವರ ಆರ್ಥಿಕ ಅಭಿವೃದ್ಧಿಗೆ ನೆರವಾಗುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳು ಹಾಗೂ ಉದ್ಯೋಗ ಖಾತರಿ ಯೋಜನೆಗಳ ಹಣವನ್ನು ನೇರವಾಗಿ ಅವರ ಖಾತೆಗಳಿಗೇ ಜಮಾ ಮಾಡುವ ಮೂಲಕ ಅವರಿಗೆ ಅನುಕೂಲ ಕಲ್ಪಿಸಿಕೊಡಬಹುದು. ಕರ್ನಾಟಕ ರಾಜ್ಯದ 6 ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಯಲ್ಲಿದೆ. ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ದೇಶದಾದ್ಯಂತ ವಿಸ್ತರಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.
ರಿಸರ್ವ್ ಬ್ಯಾಂಕಿನ ಡೆಪ್ಯುಟಿ ಗವರ್ನರ್ಗಳಾದ ಶ್ಯಾಮಲಾ ಗೋಪಿನಾಥ್ ಹಾಗೂ ಉಷಾ ಥೋರಟ್, ರಾಜ್ಯದ ಅಭಿವೃದ್ಧಿ ಆಯುಕ್ತ ಸುಬೀರ್ ಹರಿಸಿಂಗ್, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಆರ್.ಜಿ. ನಡದೂರ ಮತ್ತಿತರರು ಉಪಸ್ಥಿತರಿದ್ದರು.