ಅಜ್ಞಾತ ಸ್ಥಳದಲ್ಲಿ ನಿತ್ಯಾನಂದನ ಸಂದರ್ಶನ
ಅಮೆರಿಕದ ನಿವಾಸಿ ಎನ್ನಲಾಗಿರುವ ರಾಜೀವ್ ಮಲ್ಹೋತ್ರಾ ಎಂಬುವವರೊಂದಿಗೆ ಅಜ್ಞಾತ ಸ್ಥಳದಲ್ಲಿ ನಿತ್ಯಾನಂದ ಸ್ವಾಮಿ ನಡೆಸಿದ ಸಂದರ್ಶನದ ವೀಡಿಯೋ, ನಿತ್ಯಾನಂದ ಧ್ಯಾನಪೀಠದ ವೆಬ್ ಸೈಟಿನಲ್ಲಿ ಲಭ್ಯವಾಗಿದೆ. ಸಂದರ್ಶನದಲ್ಲಿ ಜಮೀನು ಅಕ್ರಮ, ಶ್ರೀಗಂಧ ಪತ್ತೆ, ಅತ್ಯಾಚಾರ ಆರೋಪ, ನಿಗೂಢ ಸಾವಿನ ಆರೋಪ ಮುಂತಾದ ಪ್ರಶ್ನೆಗಳನ್ನು ಕೇಳಲಾಗಿದ್ದರೂ, ಜನರಲ್ಲಿ ಕುತೂಹಲಕ್ಕೆ ಕಾರಣವಾಗಿರುವ ರಂಜಿತಾ ಜತೆಗಿನ ಕಾಮದಾಟದ ಬಗ್ಗೆ ಪ್ರಸ್ತಾಪವೇ ಇರಲಿಲ್ಲ ಎಂಬುದು ವಿಶೇಷವಾಗಿತ್ತು.
ಜಮೀನಿಗೆ ಸಂಬಂಧಿಸಿದಂತೆ ಎದ್ದಿರುವ ಅನೇಕ ಆರೋಪಗಳಿಗೆ ಉತ್ತರಿಸಿರುವ ನಿತ್ಯಾನಂದ, ಬಿಡದಿ ಆಶ್ರಮದ ಜಮೀನನ್ನು ಸಜ್ಜನ್ ರಾವ್ ಎಂಬ ದಾನಿಯೊಬ್ಬರ ಕುಟುಂಬದವರು ನೀಡಿದ್ದು, ಇದಕ್ಕೆ ಸಂಬಂಧಿಸಿದ ಎಲ್ಲ ದಾಖಲೆ ಪತ್ರಗಳೂ ಲಭ್ಯವಿದೆ. ಇದನ್ನು ವೆಬ್ ಸೈಟಿನಲ್ಲಿಯೂ ಪ್ರಕಟಿಸಲಾಗುತ್ತದೆ. ವಿನಾಯಕ ರಾವ್, ಪ್ರತಾಪ ರಾವ್, ಜೀವನರಾವ್ ಸಹೋದರರು ಆಧ್ಯಾತ್ಮಿಕತೆಯ ಮೇಲಿನ ಪ್ರೀತಿಯಿಂದ, ಭಕ್ತಿಯಿಂದ 2003ರಲ್ಲಿ ಜಮೀನು ನೀಡಿದ್ದಾರೆ. ಇಲ್ಲೇ ಒಂದು ಅಶ್ವತ್ಥ ವೃಕ್ಷ ಮತ್ತು ಶಿವ ದೇವಾಲಯವಿದ್ದು, ದೀರ್ಘಕಾಲದಿಂದ ಅದಕ್ಕೆ ಪೂಜೆ ನಡೆಯುತ್ತಿತ್ತು. ಈ ಜಮೀನನ್ನು ಕಾನೂನುಬದ್ಧವಾಗಿಯೇ ಪಡೆದುಕೊಂಡಿರುವುದಾಗಿ ಹೇಳಿದ್ದಾನೆ.
ಮಠದಲ್ಲಿ ಅಕ್ರಮ ಶ್ರೀಗಂಧದ ತುಂಡುಗಳು ಲಭಿಸಿರುವ ಆರೋಪಗಳಿಗೆ ಬಗ್ಗೆ ಮಾತನಾಡಿರುವ ನಿತ್ಯಾನಂದ, ಮಠದ ವ್ಯಾಪ್ತಿಯಲ್ಲಿ ಸಾಕಷ್ಟು ಗಂಧದ ಮರಗಳಿವೆ. ಅವುಗಳನ್ನು ಯಾರೋ ಕಳ್ಳರು ತುಂಡು ಮಾಡಿ ಒಯ್ದಿದ್ದಾರೆ. ಹೋಗುವಾಗ ಕೆಲವೊಂದು ಸಣ್ಣಪುಟ್ಟ ತುಂಡುಗಳನ್ನು ಬಿಟ್ಟು ಹೋಗಿದ್ದಾರೆ. ಈ ಬಗ್ಗೆ ನಾವು ಅರಣ್ಯ ಇಲಾಖೆಗೆ ತಿಳಿಸಿದಾಗ, ಅವರು ಇದೆಲ್ಲಾ ಸಾಮಾನ್ಯ ಎಂಬಂತೆ ನಿರ್ಲಕ್ಷಿಸಿದರು. ನೀವೇ ಬಳಸಿ ಎಂದೂ ಹೇಳಿದರು. ಈಗ ಅಕ್ರಮವಾಗಿ ಶ್ರೀಗಂಧ ಸಂಗ್ರಹಿಸಿಟ್ಟಿದ್ದಾರೆ ಎಂದು ದೂರು ನೀಡುತ್ತಿದ್ದಾರೆ. ಇದೆಲ್ಲಾ ಯಾಕೆಂಬುದೇ ಅರ್ಥವಾಗುತ್ತಿಲ್ಲ ಎಂದರು.
ಮಠದಲ್ಲಿ ಯಾವುದೇ ಹಣಕಾಸು ಅವ್ಯವಹಾರ ನಡೆಯುತ್ತಿಲ್ಲ. ನೋಂದಾವಣೆಗೊಂಡಿರುವ ಟ್ರಸ್ಟ್ ಇದೆ. ಮನೋಹರ ಚೌಧುರಿ ಎಂಬ ಖ್ಯಾತ ಆಡಿಟರ್ ಮೂಲಕ ಲೆಕ್ಕ ಪತ್ರ ಇರಿಸಲಾಗುತ್ತಿದೆ. ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳೂ ಪಕ್ಕಾ ಇವೆ. ಇದರಲ್ಲಿ ಮುಚ್ಚಿಡುವಂಥದ್ದು ಏನೂ ಇಲ್ಲ ಎಂದು ನಿತ್ಯಾನಂದ ವಿವರಿಸಿದ್ದಾನೆ.