ಹುಬ್ಬಳ್ಳಿ ಪರಿಸ್ಥಿತಿ ಶಾಂತ, 40 ಜನರ ಬಂಧನ
ಮುಸ್ಲಿಮರ ಸ್ಮಶಾನದ ಗೋರಿಯೊಂದರ ಮೇಲೆ ಮುಸಲ್ಮಾನರ ಭಾವನೆಗೆ ಧಕ್ಕೆ ತರುವಂತಹ ವಾಕ್ಯಗಳನ್ನು ಕಂಡು ಮುಸ್ಲಿಂ ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿದ್ದವು.
ಗಲಭೆ ಸಂಬಂಧ 4 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು, ಸುಮಾರು 40 ಜನರನ್ನು ಬಂಧಿಸಲಾಗಿದೆ. ಗಲಭೆಯಲ್ಲಿ 10 ಜನರಿಗೆ ಗಾಯಗಳಾಗಿವೆ ಗಾಯಾಳುಗಳಲ್ಲಿ ಪೊಲೀಸರು ಇದ್ದಾರೆ.ಹುಬ್ಬಳ್ಳಿಯಲ್ಲಿ ಶುಕ್ರವಾರ ರಾತ್ರಿಯಿಂದ ಶನಿವಾರದವರೆಗೆ ಕರ್ಫ್ಯೂ ಜಾರಿಗೊಳಿಸಲಾಗಿದೆ. ಎಂದು ಎಡಿಜಿಪಿ ಎ ಆರ್ ಇನ್ ಫೆಂಟ್ ಹೇಳಿದರು.
ಘಟನೆ ಹಿನ್ನೆಲೆ: ರಾಜ್ಯ ಮಟ್ಟದ ಪತ್ರಿಕೆಯೊಂದರಲ್ಲಿ ಪ್ರಕಟವಾದ ಪೈಗಂಬರ ವಿರುದ್ಧ ಲೇಖನದ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ಅಂಜುಮನ್ ಎ ಇಸ್ಲಾಂ ಪದಾಧಿಕಾರಿಗಳು ಪ್ರತಿಭಟನಾ ಮೆರವಣಿಗೆ ನಂತರ ಮನವಿ ಸಲ್ಲಿಸಲು ನಿರ್ಧರಿಸಿದ್ದರು.ಆದರೆ, ಶಾಂತಿ ಕಾಪಾಡುವ ಹಿನ್ನೆಲೆಯಲ್ಲಿ ಮೆರವಣಿಗೆಗೆ ಆಸ್ಪದಕೊಡದ ಜಿಲ್ಲಾಧಿಕಾರಿ ದರ್ಪಣ ಜೈನ್ ಹಳೇ ಹುಬ್ಬಳ್ಳಿ ಈದ್ಗಾ ಮೈದಾನಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ್ದರು. ನಂತರ ಗುರುವಾರ ರಾತ್ರಿ ಕಮರಿಪೇಟೆ ಬಳಿಯ ಸ್ಮಶಾನದ ಗೋಡೆಯ ಮೇಲೆ ಮುಸಲ್ಮಾನರ ಭಾವನೆಗೆ ಧಕ್ಕೆ ತರುವಂತಹ ವಾಕ್ಯಗಳನ್ನು ಕಂಡ ಒಂದು ಗುಂಪು ಪ್ರತಿಭಟನೆ ಆರಂಭಿಸಿತು. ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಕರ್ಫ್ಯೂ ಜಾರಿಗೊಳಿಸಲಾಯಿತು.