ಲಂಚ ಪ್ರಕರಣ : ಸಂಪಂಗಿಗೆ ಕ್ಲೀನ್ ಚಿಟ್
ಕೆಜಿಎಫ್ ನಲ್ಲಿ ಕಟ್ಟಡ ನಿರ್ಮಾಣ ವಿಷಯದಲ್ಲಿ ಅಯೂಬ್ ಹಾಗೂ ಫರೂಕ್ ಅವರಿಗೆ ವ್ಯಾಜ್ಯ ನಡೆದಿತ್ತು. ಒತ್ತಡಕ್ಕೆ ಒಳಗಾಗಿ ಅಯೂಬ್ ಅವರು ವಿಷ ಸೇವಿಸಿ ಆಸ್ಪತ್ರೆ ಸೇರಿಸಿದ್ದರು. ಇದರಿಂದ ಫರೂಕ್ ಅವರ ಕ್ರಿಮಿನಲ್ ಕೇಸ್ ದಾಖಲಾಗಿತ್ತು. ಕೇಸ್ ನಿಂದ ಬಚಾವಾಗಲು ಶಾಸಕರ ಸಹಾಯ ಬಯಸಿ, 5 ಲಕ್ಷ ನೀಡಲು ಮುಂದಾಗಿದ್ದರು. ಇಂದು 50 ಸಾವಿರ ರು ನಗದು ಹಾಗೂ 4.5 ಲಕ್ಷ ರು ಮೊತ್ತದ ಚೆಕ್ ಹಿಡಿದು ಕೊಂಡು ಶಾಸಕರ ಕಚೇರಿ ಹೊಕ್ಕ ಫರೂಕ್, ಶಾಸಕ ಸಂಪಂಗಿ ಅವರಿಗೆ ಲಂಚ ನೀಡುತ್ತಿದ್ದಾಗ ಲೋಕಾಯುಕ್ತರು ಶಾಸಕರನ್ನು ಬಲೆಯಲ್ಲಿ ಕೆಡವಿಕೊಂಡಿದ್ದರು.
ಶಾಸಕರ ಭವನದಲ್ಲೇ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತರ ಕೈಯಲ್ಲಿ ಶಾಸಕ ಸಂಪಂಗಿ ಸಿಕ್ಕಿಬಿದ್ದಿದ್ದರು. ಸಾರ್ವಜನಿಕವಾಗಿ ಸಂಪಂಗಿ ಲಂಚ ಪ್ರಕರಣ ವ್ಯಾಪಕ ಖಂಡನೆಗೆ ಗುರಿಯಾಗಿತ್ತು. ಪ್ರಕರಣದ ಸಮಗ್ರ ತನಿಖೆಗೆ ಕೆಜಿ ಭೂಪಯ್ಯ ನೇತೃತ್ವದ ಸದನ ಸಮಿತಿ ರಚಿಸಲಾಗಿತ್ತು. ಇಂದು ಸಮಿತಿಯು ಸರಕಾರಕ್ಕೆ ವರದಿ ಸಲ್ಲಿಸಿದ್ದು, ಸಂಪಂಗಿ ಅವರಿಗೆ ಕ್ಲಿನ್ ಚಿಟ್ ನೀಡಿ, ಫರೂಕ್ ಅವರನ್ನು ತಪ್ಪಿತಸ್ಥರನ್ನಾಗಿ ಮಾಡಿದೆ.
ಬಿಜೆಪಿ ಶಾಸಕರ ಲಂಚ ಪ್ರಕರಣವನ್ನು ಜೆಡಿಎಸ್, ಕಾಂಗ್ರೆಸ್ ಅಂದು ಬಲವಾಗಿ ಖಂಡಿಸಿದ್ದವು. ಆದರೆ, ಇಂದು ಸದನದಲ್ಲಿ ಈ ಬಗ್ಗೆಚರ್ಚೆ ನಡೆಯುವ ಸಾಧ್ಯತೆಯಿದ್ದು, ಪ್ರತಿಪಕ್ಷಗಳು ಯಾವ ನಿಲುವು ತೆಗೆದುಕೊಳ್ಳಲಿವೆ ಎನ್ನುವುದು ವಿಶೇಷವಾಗಿದೆ. ಪ್ರಕರಣದ ನಂತರ ಫರೂಕ್ ಗೆ ಜೀವ ಬೆದರಿಕೆಗಳು ಬಂದಿದ್ದವು. ಇದರಿಂದ ಅವರು ತಲೆಮರೆಸಿಕೊಂಡಿದ್ದು, ಸದ್ಯ ವಿದೇಶದಲ್ಲಿದ್ದಾರೆ ಎಂದು ತಿಳಿದು ಬಂದಿದೆ.