ಮದ್ಯವ್ಯಸನ ತೊಲಗಿಸಲು ಹೃದಯ ಪರಿವರ್ತನೆ
ಮದ್ಯಪಾನ ಸಂಯಮ ಮಂಡಳಿಯ ಕಚೇರಿಯಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಮಾತನಾಡಿದ ಅವರು, ಮಹಾತ್ಮ ಗಾಂಧೀಜಿಯವರ ಆದರ್ಶದಲ್ಲಿ ನಂಬಿಕೆ ಇಟ್ಟಿರುವ ತಾವು ಮದ್ಯವ್ಯಸನಿಗಳಿಂದ ಮದ್ಯಪಾನ ಚಟ ವಿಮುಕ್ತಿಗೆ ಕಾನೂನು ಜಾರಿಗಿಂತಲೂ ಹೃದಯ ಪರಿವರ್ತನೆ ಆಂದೋಲನವನ್ನು ಸಾಮಾಜಿಕ ಕಳಕಳಿಯುಳ್ಳ ಧರ್ಮಾಧಿಕಾರಿಗಳ ಸಹಕಾರದಲ್ಲಿ ಹಮ್ಮಿಕೊಳ್ಳುವ ಮೂಲಕ ಮದ್ಯಪಾನ ಮುಕ್ತ ಸಮಾಜ ಸ್ಥಾಪಿಸಲು ಪ್ರಯತ್ನಿಸುವುದಾಗಿ ಅವರು ಆಶ್ವಾಸನೆ ನೀಡಿದರು.
ಮದ್ಯಪಾನಕ್ಕೆ ಸಮಾಜ ಅಧಿಕೃತ ಮಾನ್ಯತೆ ನೀಡಿರುವ ಜೊತೆಗೆ ನಾಗರಿಕರು ಮದ್ಯಪಾನ ಮಾಡುವುದು ಘನತೆಯ ವಿಷಯವೆಂದು ಭಾವಿಸಿರುವುದರಿಂದ ಈ ಮಂಡಳಿಯ ಕೆಲಸವು ಪ್ರವಾಹಕ್ಕೆ ವಿರುದ್ಧವಾಗಿ ಈಜುವಂತಹ ಸಾಹಸವಾಗಿದೆ. ಆದ್ದರಿಂದ ಜನರಿಗೆ ಮದ್ಯಪಾನದಿಂದ ಆಗುವ ದುಷ್ಪರಿಣಾಮಗಳ ಬಗೆ ಮಾಹಿತಿಯನ್ನು ನೀಡುವ ಸಲುವಾಗಿ ವಿವಿಧ ಇಲಾಖೆಗಳೊಡನೆ ಮುಖ್ಯವಾಗಿ ಶಿಕ್ಷಣ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾವುದೆಂದರು.
ಪತ್ರಕರ್ತರು ಸಮಾಜಕ್ಕೆ ಸಲಹೆ ನೀಡುವವರಾಗಿರುವುದರಿಂದ ಅವರ ಸಲಹೆ ಸೂಚನೆಗಳನ್ನು ಪಡೆದುಕೊಳ್ಳುವ ಮೂಲಕ ಪ್ರಚಾರಕ್ಕೆ ಆದ್ಯತೆ ನೀಡದೆ ಮದ್ಯಪಾನ ನಿರ್ಮೂಲನಕ್ಕಾಗಿ ಆಂದೋಲನವನ್ನು ನಡೆಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷರಾದ ಆನಂತ ಹೆಗಡೆ ಆಶೀಸರ, ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಬಿ.ಪಿ. ಪರಮೇಶ್, ಮಂಡಳಿ ಕಾರ್ಯದರ್ಶಿಗಳಾದ ಹೆಚ್.ಬಿ. ದಿನೇಶ್, ಹಿರಿಯ ಪತ್ರಕರ್ತರುಗಳಾದ ಹರಿಶ್ಚಂದ್ರ ಭಟ್, ರಾಮಯ್ಯ ಜಯಶೀಲರಾವ್, ಗರುಡನಗಿರಿ ನಾಗರಾಜ್, ವಿಶ್ವೇಶ್ವರ ಭಟ್, ವಾರ್ತಾ ಇಲಾಖೆಯ ಜಂಟಿ ನಿರ್ದೇಶಕರುಗಳಾದ ಎಂ. ಜಿ. ಕೆಳಗಡೆ ಹಾಗೂ ಕೆ.ಎಸ್. ಬೇವಿನಮರದ ಅವರು ಸೇರಿದಂತೆ ಹಲವು ಗಣ್ಯವಕ್ತಿಗಳು ಉಪಸ್ಥಿತರಿದ್ದರು.