ಸಂಪಂಗಿ ಜಾಮೀನು ರದ್ದಿಗೆ ಲೋಕಾಯುಕ್ತ ಅರ್ಜಿ
ಫರೂಕ್ ಎಂಬುವರು ತಮಗೆ ಸಂಪಂಗಿ ಕೇಸ್ ವಾಪಸ್ ಪಡೆಯಬೇಕೆಂದು ನಿರಂತರವಾಗಿ ಒತ್ತಡ ತರುತ್ತಿದ್ದಾರೆ ಮತ್ತು ಪ್ರಾಣ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಆರೋಪಿಸಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಈ ಕ್ರಮ ಕೈಗೊಂಡಿದ್ದಾರೆ.
ಕಳೆದ ವರ್ಷ ಫರೂಕ್ ಸಹಾಯದಿಂದ ಶಾಸಕರ ಭವನದಲ್ಲೇ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಸಂಪಂಗಿ ಬಂಧನದ ನಂತರ ಎದೆನೋವಿನ ನೆಪವೊಡ್ಡಿ ಜಯದೇವ ಹೃದ್ರೋಗ ಚಿಕಿತ್ಸಾ ಆಸ್ಪತ್ರೆ ಸೇರಿದ್ದ. ಆತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಜಾಮೀನು ಪಡೆದ ನಂತರ ಸಂಪಂಗಿಯಿಂದ ಕೊಲೆ ಬೆದರಿಕೆ ಜಾಸ್ತಿಯಾಗುತ್ತಿದೆ ಎಂದು ಫರೂಕ್ ಆರೋಪಿಸಿದ್ದಾರೆ.
ಹಿನ್ನೆಲೆ : ಫರೂಕ್ ಮತ್ತು ನಯಾಜ್ ಎಂಬಿಬ್ಬರು ಸಹೋದರರು ಸೈಟಿಗಾಗಿ ಬಡಿದಾಡಿದ್ದರು. ನ್ಯಾಯಾಲಯ ಫರೂಕ್ ಪರ ಆದೇಶ ನೀಡಿತ್ತು. ಫರೂಕ್ ಕೊಲೆ ಬೆದರಿಕೆ ಒಡ್ಡಿದ್ದ ಎಂದು ನಯಾಜ್, ನಯಾಜ್ ವಂಚಿಸಿದ್ದಾನೆ ಎಂದು ಫರೂಕ್ ದೂರು ಸಲ್ಲಿಸಿದ್ದರು. ಸಂಪಂಗಿ ನಯಾಜ್ ಪರವಹಿಸಿದ್ದ. ಈ ಸಂದರ್ಭದಲ್ಲಿ ನಯಾಜ್ ಹೆಂಡತಿ ಮತ್ತು ಮಕ್ಕಳು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸುತ್ತಾರೆ. ಅವರ ಆತ್ಮಹತ್ಯೆ ಯತ್ನಕ್ಕೆ ಫರೂಕ್ ಪ್ರಚೋದನೆ ನೀಡಿದ ಅಂತ ಸಂಪಂಗಿ ದೂರು ದಾಖಲಾಗುವಂತೆ ನೋಡಿಕೊಳ್ಳುತ್ತಾನೆ. ಈ ಪ್ರಕರಣದಿಂದ ಪಾರು ಮಾಡಬೇಕೆಂದು ಫರೂಕ್ ದುಂಬಾಲು ಬಿದ್ದಾಗಲೇ ಸಂಪಂಗಿ 5 ಲಕ್ಷ ರು. ಲಂಚ ಕೇಳಿದ್ದು. ಆಗ, ಫರೂಕ್ ಲೋಕಾಯುಕ್ತರ ಸಹಾಯದಿಂದ ಸಂಪಂಗಿಯನ್ನು ಬಲೆಗೆ ಬೀಳಿಸಿದ್ದ.