ಕೃಷಿ ಭೂಸ್ವಾಧೀನಕ್ಕೆ ವಿರೋಧಿಸಿ ಹೋರಾಟ
ನಗರದದಲ್ಲಿ ಬುಧವಾರ ಜೆಡಿಎಸ್ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿದ ದೇವೇಗೌಡ, ಕೈಗಾರಿಕೆಗಳ ಸ್ಥಾಪನೆ ಮತ್ತು ಅಭಿವೃದ್ಧಿ ಹೆಸರಿನಲ್ಲಿ ಸರಕಾರ ರೈತರ ಅಮೂಲ್ಯ ಜಮೀನನ್ನು ವಶಪಡಿಸಿಕೊಳ್ಳುತ್ತಿದೆ. ಸರಕಾರ ಈ ರೈತ ವಿರೋಧಿ ಕ್ರಮ ವಿರೋಧಿಸಿ ಒಂದು ವಾರಗಳ ಕಾಲ ರಾಜ್ಯಾಧ್ಯಂತ ಪ್ರವಾಸ ಮಾಡುವುದಾಗಿ ಹೇಳಿದರು. ಪಶ್ಚಿಮ ಬಂಗಾಲದ ಸಿಂಗೂರಿನಲ್ಲಿ ಟಾಟಾ ಕಂಪನಿ ವಿರುದ್ಧ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ನಡೆಸಿದ ಹೋರಾಟದ ಮಾದರಿಯಲ್ಲೇ ಭೂಸ್ವಾಧೀನ ಪ್ರಕ್ರಿಯೆನ್ನು ವಿರೋಧಿಸಲಾಗುವುದು ಎಂದು ಗೌಡರು ಎಚ್ಚರಿಕೆ ನೀಡಿದ್ದಾರೆ.
ರಾಮನಗರ, ತುಮಕೂರು, ಧಾರವಾಡ ಮತ್ತು ಮೈಸೂರು ನಗರದಲ್ಲಿ ಸುಮಾರು 1.71 ಲಕ್ಷ ಎಕರೆ ಭೂಮಿಯನ್ನು ಸರಕಾರ ವಶಪಡಿಸಿಕೊಳ್ಳಲು ಸರಕಾರ ಈಗಾಗಲೇ ಅಧಿಸೂಚನೆ ಹೊರಡಿಸಿದೆ. ಸರಕಾರ ಗುರುತಿಸಿರುವ ಭೂಮಿ ರೈತರ ಜೀವನಾಡಿಯಾಗಿರುವ ಭೂಮಿಯಾಗಿದೆ. ರೈತರ ಭೂಮಿಯನ್ನು ವಶಪಡಿಸಿಕೊಳ್ಳಲು ಯಾವ ಕಾರಣಕ್ಕೂ ಅವಕಾಶ ಮಾಡಿಕೊಡುವುದಿಲ್ಲ. ಜೆಡಿಎಸ್ ಅಭಿವೃದ್ಧಿ ವಿರೋಧಿಯಲ್ಲ. ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯ ಭೂಮಿಯನ್ನು ಮಾತ್ರ ವಶಪಡಿಸಿಕೊಳ್ಳಬೇಕು. ಸರಕಾರದ ಭೂಸ್ವಾಧೀನ ವಿರೋಧಿಸಿ ಫೆ.16 ರಿಂದ ಒಂದು ವಾರ ಕಾಲ ರಾಜ್ಯಾದ್ಯಂತ ಪ್ರವಾಸ ಮಾಡಿ ರೈತರನ್ನು ಎಚ್ಚರಿಸಲಾಗುವುದು ಎಂದು ದೇವೇಗೌಡ ವಿವರಿಸಿದರು.