ಹೊನ್ನಾಳಿಯಲ್ಲೇ ಸೋಮವಾರ ನರ್ಸ್ ಜಯಲಕ್ಷ್ಮಿ ಧರಣಿ
ಪ್ರತಿಭಟನಾಕಾರರು ಮತ್ತು ರೇಣುಕಾಚಾರ್ಯ ಅವರ ಬೆಂಬಲಿಗರ ನಡುವೆ ಜಟಾಪಟಿ ನಡೆಯುವ ಮುನ್ಸೂಚನೆ ದೊರೆತ ಕಾರಣ ಮುನ್ನೆಚ್ಚರಿಕೆಯಾಗಿ ಹೊನ್ನಾಳಿಯಲ್ಲಿ 400 ಪೊಲೀಸರನ್ನು ನಿಯೋಜಿಸಲಾಗಿದ್ದು, ಯಾವುದೇ ಅವಘಡ ಸಂಭವಿಸದಂತೆ ಭಾರೀ ಬಂದೋಬಸ್ತ್ ಮಾಡಲಾಗಿದೆ. ಅಬಕಾರಿ ಸಚಿವ ರೇಣುಕಾಚಾರ್ಯ ಬೆಂಬಲಿಗರು ಕೂಡ ರೇಣುಕಾ ಪರ ರ್ಯಾಲಿ ನಡೆಸುವುದಾಗಿ ಹೇಳಿದ್ದಾರೆ.
ಲೈಂಗಿಕ ಹಗರಣದಲ್ಲಿ ಭಾಗಿಯಾಗಿರುವ ರೇಣುಕಾಚಾರ್ಯ ಅವರ ವಿರುದ್ಧ ಜಯಲಕ್ಷ್ಮಿ ಅವರಿಗೆ ಹೊನ್ನಾಳಿಯಲ್ಲಿಯೂ ಭಾರೀ ಬೆಂಬಲ ವ್ಯಕ್ತವಾಗಿದೆ. ಭ್ರಷ್ಟಾಚಾರ ನಿರ್ಮೂಲನಾ ವೇದಿಕೆ ಮತ್ತು ಕೆಲ ಮಹಿಳಾ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸುತ್ತಿವೆ. ಮಧ್ಯಾಹ್ನ 12ರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಬಿಜೆಪಿ ಕಾರ್ಯಕರ್ತರು ಬೆದರಿಕೆ ವೊಡ್ಡುತ್ತಿದ್ದಾರೆ ಎಂದು ನರ್ಸ್ ಜಯಲಕ್ಷ್ಮಿ ಆರೋಪಿಸಿದ್ದಾರೆ. ಈ ಯಾವ ಗೊಡ್ಡು ಬೆದರಿಕೆಗಳಿಗೆ ಬೆದರುವುದಿಲ್ಲ ಸೋಮವಾರ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿಯೇ ತೀರುತ್ತೇನೆ. ಕಳಂಕಿತ ರೇಣುಕಾಚಾರ್ಯನನ್ನು ಸಂಪುಟದಿಂದಕೆಳಗಿಳಿಸುವವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಜಯಲಕ್ಷ್ಮಿ ಬೆದರಿಕೆಗೆ ಮಾರುತ್ತರ ನೀಡಿದ್ದಾರೆ. ಕಳೆದ ವರ್ಷ ಡಿಸೆಂಬರ್ 31ರಂದು ಟೌನ್ ಹಾಲ್ ಎದುರಿಗೂ ಜಯಲಕ್ಷ್ಮಿ ಧರಣಿ ನಡೆಸಿದ್ದರು.