ಯಾರಿಗೆ ಬೇಕು ಕುಮ್ಮಿಯ 51ನೇ ಹುಟ್ಟುಹಬ್ಬ?
ಆದರೆ, ಯಾವ ಪಾರ್ಟಿಗೂ ಸೇರದ ಪ್ರಜೆಗಳಿಗೆ ಮಾತ್ರ ವಿಚಿತ್ರ ಶಿಕ್ಷೆ. ಊರಿನ ಗೋಡೆಗಳು, ಲೈಟುಕಂಬ, ಮರ, ಫ್ಲೈ ಓವರ್, ಎಲ್ಲೆಲ್ಲಿ ಬಿಟ್ಟಿ ಜಾಗ ಕಾಣಿಸತ್ತೋ ಅಲ್ಲೆಲ್ಲ ಕುಮಾರಸ್ವಾಮಿ 51ನೇ ಹುಟ್ಟುಹಬ್ಬ ಎಂದು ಸಾರುವ ಭಿತ್ತಿಪತ್ರಗಳ ಭರಾಟೆ. ಇದು ದೃಶ್ಯಮಾಲಿನ್ಯವಲ್ಲದೆ ಇನ್ನೇನು?
ಗಾಂಧೀಜಿ, ನೆಹರೂ, ಲಾಲ್ ಬಹದ್ದೂರ್ ಶಾಸ್ತೀ, ರಾಧಾಕೃಷ್ಣನ್ ಅಂತಹವರ ಜನ್ಮದಿನವನ್ನು ಆಚರಿಸಲು ವ್ಯವಧಾನವಿಲ್ಲದ ಪ್ರಜೆಗಳಿಗೆ ಕುಮಾರಸ್ವಾಮಿ ಅವರ ಹುಟ್ಟುಹಬ್ಬದ ಶುಭಾಶಯ ಫಲಕಗಳನ್ನು ನೋಡುವುದು ಅಸಹ್ಯ. ನಮ್ಮಲ್ಲಿ ಪ್ರಜಾಪ್ರಭುತ್ವ ಅತಿಯಾಯಿತು. ಎಲ್ಲ ರಾಜಕೀಯ ಪಕ್ಷಗಳ ನೇತಾರರನ್ನು ಲೆಕ್ಕ ಹಾಕಿದರೆ ಇಲ್ಲಿ ಸಾವಿರ ತಲೆಗಳು ಸಿಗುತ್ತವೆ. ಅವರ ಹುಟ್ಟುಹಬ್ಬಗಳನ್ನು ಆಚರಿಸುವ ಗ್ರಹಚಾರ ಅಮಾಯಕ ಪ್ರಜೆಗಳಿಗೆ ಏಕೆ? ಎಂದು ನಿವೃತ್ತ ಸರಕಾರಿ ಅಧಿಕಾರಿ ಆರ್ ಸೀತಾರಾಮಯ್ಯ ಇಂದಿನ ಬೆಳಗಿನ ವಾಕಿಂಗ್ ಸಯಮದಲ್ಲಿ ರೇಗುತ್ತಿದ್ದರು.
ಹೌದು. ಅದೇನೋ ನಿಜ. ಬೆಂಗಳೂರಿನಲ್ಲಿ ನಾನಾ ಕಡೆ ಕುಮ್ಮಿಯ ಹುಟ್ಟುಹಬ್ಬ ಆಚರಣೆಯ ಫಲಕಗಳು ರಾರಾಜಿಸುತ್ತಿವೆ. ಅವರೇನೂ ಲಾಲಾ ಲಜಪತ್ ರಾಯ್ ಅಲ್ಲ. ಕನಿಷ್ಠ ದೇವೇಗೌಡರೂ ಅಲ್ಲ. ಅವರಿಗೆ ಬೇಕಾದಷ್ಟು ಮನೆಗಳಿವೆ. ತೋಟದ ಬಂಗಲೆಗಳಿವೆ. ಖಾಸಗಿ ಸಮಾರಂಭವನ್ನು ಅವರ ಮನೆಯಲ್ಲಿ ಆಚರಿಸಿಕೊಳ್ಳುವುದು ಬಿಟ್ಟು ಊರೆಲ್ಲ ಗಲೀಜು ಮಾಡುವ ಅಧಿಕಾರವನ್ನು ಅವರ ಪಾರ್ಟಿಯ ಕಾರ್ಯಕರ್ತರಿಗೆ ಕೊಟ್ಟವರು ಯಾರು? ಇಷ್ಟಾಗಿಯೂ ನಮ್ಮ ಮುನಿಸಿಪಾಲಿಟಿಗಳು, ಕಾರ್ಪೋರೇಶನ್ನುಗಳು ಕೈಕಟ್ಟಿ ಕುಳಿತುಕೊಳ್ಳುವುದು ಅಕ್ಷಮ್ಯ. ಕೂಲಿಕಾರರನ್ನು ಕರೆಸಿ ಫಲಕಗಳನ್ನು ಕೀಳಿಸಿ, ಭಿತ್ತಿಪತ್ರಗಳನ್ನು ಅಂಟಿಸಿದವರಿಗೆ ನೋಟೀಸು ಜಾರು ಮಾಡಲಿ.
ಚಲನಚಿತ್ರಗಳ ಭಿತ್ತಿಚಿತ್ರಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಕೂಡದು ಎಂಬ ನಿಯಮವಿದೆ. ಇದೇ ನಿಯಮ ರಾಜಕೀಯ ಪಕ್ಷಗಳಿಗೆ ಏಕಿಲ್ಲ? ಕುಮ್ಮಿ ಒಬ್ಬರೇ ಅಲ್ಲ. ಹುಟ್ಟಿದಹಬ್ಬ ಆಚರಿಸಿಕೊಳ್ಳಲು ಸಾರ್ವಜನಿಕ ಸ್ಥಳಗಳನ್ನು ಅತಿಕ್ರಮಣ ಮಾಡುವುದು ಮತ್ತು ತಮ್ಮ ಕೆಟ್ಟ ಮುಖಗಳನ್ನು ಕೂಡುವ ರಸ್ತೆಗಳ ಜಾಗದಲ್ಲಿ ಎಲ್ಲರಿಗೆ ಕಾಣುವ ಹಾಗೆ ನೇತುಹಾಕುವ ಚಾಳಿ ಅನೇಕ ರಾಜಕಾರಣಿಗಳಿಗೆ ಇದೆ.
ಇತ್ತೀಚೆಗೆ ಇಂಥ ಭಿತ್ತಿಪತ್ರಗಳು ಜಯಚಾಮರಾಜೇಂದ್ರ ರಸ್ತೆಯಲ್ಲೂ ಕಂಡುಬಂದಿದ್ದವು. ಅದು ಇನ್ನೊಬ್ಬ ಧೀಮಂತ ನಾಯಕ ಆರ್ ವಿ ದೇವರಾಜ್ ಅವರ ಹುಟ್ಟುಹಬ್ಬದ ಸ್ಮರಣೆಯನ್ನು ಜಗಜ್ಜಾಹೀರು ಮಾಡುವ ಸಂಕಲ್ಪವಾಗಿತ್ತು. ಇದೇ ರೀತಿ ಅನಿಲ್ ಲಾಡ್ ಕೂಡ ಹುಟ್ಟುಹಬ್ಬ ಆಚರಿಸಿದರು. ಅವರ 32ನೇ ಹುಟ್ಟುಹಬ್ಬದ ಚಿತ್ರಗಳನ್ನು ಚಾಲುಕ್ಯ ಹೋಟೆಲಿನ ಸರ್ಕಲ್ಲಿನಲ್ಲಿ ನೇತುಹಾಕಲಾಗಿತ್ತು. ಸಾರ್ವಜನಿಕರು ಕೂಡ ಬಸ್ಸಿನಲ್ಲಿ, ಕಾರಿನಲ್ಲಿ, ನಡೆದುಕೊಂಡು ಹೋಗುವಾಗ ಇಂಥ ಫಲಕಗಳು ಕಣ್ಣಿಗೆ ಬಿದ್ದಾಗ ಪ್ರತಿಭಟಿಸಬೇಕು. ಯಾರಿಗೆ ಬೇಕಾಗಿದೆ ಇವರ ಜನ್ಮದಿನದ ಶುಭಾಶಯಗಳು?
(ದಟ್ಸ್ ಕನ್ನಡ ವಾರ್ತೆ)