ನ್ಯಾ. ದಿನಕರನ್ ಭವಿಷ್ಯ ನಿರ್ಧಾರಕ್ಕೆ ಕ್ಷಣಗಣನೆ
ನವದೆಹಲಿ, ಡಿ. 7 : ಕರ್ನಾಟಕ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಪಿ ಡಿ ದಿನಕರನ್ ಅವರನ್ನು ಸುಪ್ರಿಂಕೋರ್ಟ್ ನ್ಯಾಯಮೂರ್ತಿಗಳ ಪಟ್ಟಿಯಿಂದ ಕೇಂದ್ರ ಸರಕಾರ ಕೈಬಿಟ್ಟಿರುವ ಹಿನ್ನೆಲೆಯಲ್ಲಿ ಮುಂದಿನ ಕ್ರಮಗಳ ಬಗ್ಗೆ ಸುಪ್ರಿಂಕೋರ್ಟ್ ನ್ಯಾಯಮೂರ್ತಿಗಳ ಸಮಿತಿ ಸೋಮವಾರ ಅಥವಾ ಮಂಗಳವಾರ ನಡೆಯುವ ಸಭೆಯಲ್ಲಿ ಚರ್ಚಿಸಲಿದೆ.
ದಿನಕರನ್ ಬಡ್ತಿ ನೀಡಲು ವರಿಷ್ಠ ನ್ಯಾಯಮೂರ್ತಿಗಳ ಸಮಿತಿ ಮಾಡಿದ್ದ ಶಿಫಾರಸ್ಸನ್ನು ಕೇಂದ್ರ ಈಗಾಗಲೇ ತಿರಸ್ಕರಿಸಿದೆ. ಈ ನಡುವೆ ವರಿಷ್ಠ ಸಮಿತಿಯ ಸದಸ್ಯರಾದ ಕೆಲವು ನ್ಯಾಯಮೂರ್ತಿಗಳನ್ನು ಸಮಿತಿಯ ಸದಸ್ಯರನ್ನು ಶುಕ್ರವಾರ ರಾತ್ರಿ ನವದೆಹಲಿಯಲ್ಲಿ ಭೇಟಿ ಮಾಡಿದ ದಿನಕರನ್ , ಭೂ ಅತಿಕ್ರಮಕ್ಕೆ ಸಂಬಂಧಿಸಿದಂತೆ ತಿರುವಳ್ಳೂರ್ ಜಿಲ್ಲಾಧಿಕಾರಿ ತಮ್ಮ ವಿರುದ್ಧ ನೀಡಿರುವ ವರದಿ ಸತ್ಯಾಂಶದಿಂದ ಕೂಡಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ದಿನಕರನ್ ಬಡ್ತಿ ನೀಡುವಂತೆ ಶಿಪಾರಸ್ಸು ಮಾಡಿದ್ದ ಕಡತವನ್ನು ಮರುಪರಿಶೀಲಿಸುವ ಕೋರಿಕೆಯೊಂದಿಗೆ ಸುಪ್ರಿಂಕೋರ್ಟ್ ಮುಖ್ಯನ್ಯಾಯಮೂರ್ತಿಗೆ ಮರಳಿ ಕಳುಹಿಸಲಾಗಿದೆ ಎಂದು ಕಾನೂನು ಸಚಿವಾಲಯದ ಮೂಲಗಳು ತಿಳಿಸಿವೆ. ಬಡ್ತಿ ಪಟ್ಟಿಯಿಂದ ದಿನಕರನ್ ಹೆಸರನ್ನು ಕೈಬಿಡುವಂತೆ ಕೋರಿ ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಕೆ ಜಿ ಬಾಲಕೃಷ್ಣನ್ ಕಾನೂನು ಸಚಿವಾಲಯಕ್ಕೆ ಪತ್ರ ಬರೆದಿದ್ದರು.
(ಏಜನ್ಸೀಸ್)