ಎಜಿ ಗಲ್ಲಿಗೇರಿಸಿ ಹೇಳಿಕೆಗೆ ಬದ್ಧ, ಎಚ್ಡಿಕೆ

ಜೆಡಿಎಸ್ ಕಚೇರಿಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಎಂಐಸಿ ಯೋಜನೆ ಕುರಿತು ಸರಕಾರದ ಪರವಾಗಿ ಸುಪ್ರೀಂಕೋರ್ಟ್ಗೆ ಸುಳ್ಳು ಪ್ರಮಾಣಪತ್ರವನ್ನು ಹಾರನಹಳ್ಳಿ ನೀಡಿದ್ದಾರೆ. ಎಜಿ ಕಾನೂನನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕೇ ಹೊರತು, ಕಾನೂನುಬಾಹಿರ ಕೆಲಸಕ್ಕೆ ಪ್ರೋತ್ಸಾಹ ನೀಡಬಾರದು. ಮಾತ್ರವಲ್ಲ, ಇದನ್ನು ಪ್ರಶ್ನಿಸುವ. ಟೀಕಿಸುವ ಹಕ್ಕು ನಾಡಿನ ಜನತೆಗೆ ಇದೆ ಎಂದರು. ಎಜಿ ಕುರಿತು ನೀಡಿರುವ ಹೇಳಿಕೆ ಜವಾಬ್ದಾರಿಯುತವಾಗಿಯೇ ಇದೆ ಎಂದು ಸ್ಪಷ್ಟಪಡಿಸಿದರು.
ಎಚ್ಚರಿಸುವ ಕೆಲಸ : ಕಾನೂನು ಕುರಿತಂತೆ ಸರಕಾರ ತಪ್ಪು ಹೆಜ್ಜೆ ಇರಿಸಿದಾಗ ಎಜಿ ಎಚ್ಚರಿಸುವ ಕೆಲಸ ಮಾಡಬೇಕು. ಆದರೆ, ಬಿಎಂಐಸಿ ವಿಚಾರದಲ್ಲಿ ಹಾರನಹಳ್ಳಿ ಒತ್ತಡಕ್ಕೆ ಮಣಿದು, ಸುಪ್ರೀಂ ಕೋರ್ಟ್ಗೆ ಭೂ ಕಬಳಿಕೆಗೆ ಒತ್ತಾಸೆ ನೀಡುವಂತ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ಇದಕ್ಕಾಗಿ ಕ್ಷಮೆಯಾಚಿಸಬೇಕು ಎಂದು ವಕೀಲರ ಪರಿಷತ್ ಹೇಳಿದರೆ ಹೇಗೆ ಎಂದು ಪ್ರಶ್ನಿಸಿದರು.
ವ್ಯವಹಾರ : ನೈಸ್ ಆರಂಭಗೊಂಡು 14 ವರ್ಷ ಕಳೆದಿದೆ. ಆದರೆ, ಈವರೆಗೆ ಸಂಸ್ಥೆ ಎಷ್ಟು ಕಿಮೀ ರಸ್ತೆ ನಿರ್ಮಿಸಿದೆ ? ಎಲ್ಲೆಲ್ಲಿ ಈ ರಸ್ತೆ ಹಾದುಹೋಗಲಿದೆ? ಇದಕ್ಕೆ ಎಷ್ಟು ಭೂಮಿ ಬೇಕು? ಎಂಬ ವಿವರವನ್ನು ಬಿಎಂಐಸಿ ಈವರೆಗೆ ಸರಕಾರಕ್ಕೆ ನೀಡಿಲ್ಲ. 110 ಕಿಮೀ ಉದ್ದದ ರಸ್ತೆಗೆ 1.7 ಲಕ್ಷ ಎಕರೆ ಭೂ ಸ್ವಾಧೀನ ಮಾಡಿಕೊಳ್ಳುವ ಅಗತ್ಯವೇನಿದೆ? ಬಿಎಂಐಸಿ ಹೆಸರಿನಲ್ಲಿ 50 ಸಾವಿರ ಕೋಟಿ ಅವ್ಯವಹಾರ ನಡೆದಿದೆ. ಇದಕ್ಕೆ ಕುಮ್ಮಕ್ಕು ನೀಡುವ ಮುಖ್ಯಮಂತ್ರಿ ಯಡಿಯೂರಪ್ಪ, ಬಿಎಂಐಸಿ ಎಲ್ಲಿ, ಎಷ್ಟೇ ಜಾಗ ಕೇಳಿದರೂ ಒದಗಿಸುವಂತೆ ಎಲ್ಲ ಇಲಾಖೆಗೆ ನಿರ್ದೇಶನ ನೀಡಿದ್ದಾರೆ ಎಂದು ಆರೋಪಿಸಿದರು.
ವಕೀಲರು ಇತ್ತ ಗಮನ ನೀಡಲಿ : ಬಿಎಂಐಸಿಯಿಂದ ಸಾವಿರಾರು ರೈತರು ಮತ್ತು ಜನರ ಜಮೀನು, ಮನೆ ಕೈಬಿಟ್ಟು ಹೋಗಿದೆ. ಇವರೆಲ್ಲ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ತಲುಪಿದ್ದಾರೆ. ತಮ್ಮ ಸಂಕಷ್ಟ ಹಂಚಿಕೊಳ್ಳಲು ಮತ್ತು ಬಿಎಂಐಸಿಯ ಅವ್ಯವಹಾರದ ಬಗ್ಗೆ ಪ್ರತಿಭಟಿಸಲು, ಡಿ.6ರಂದು ರೇಸ್ಕೋರ್ಸ್ ರಸ್ತೆಯ ಗಾಂಧಿ ಪ್ರತಿಮೆ ಎದುರು ರೈತರು ಸಭೆ ನಡೆಸಲಿದ್ದಾರೆ. ವಕೀಲರ ಪರಿಷತ್ತಿನ ಪದಾಧಿಕಾರಿಗಳಿಗೆ ನಾಡಿನ ಬಗ್ಗೆ ನಿಜವಾದ ಕಾಳಜಿ ಇದ್ದರೆ, ನನ್ನನ್ನು ಕ್ಷಮೆ ಕೋರುವಂತೆ ಆಗ್ರಹಿಸುವ ಬದಲು ಸಭೆಯಲ್ಲಿ ಪಾಲ್ಗೊಂಡು ರೈತರ ನೋವನ್ನು ತಿಳಿಯುವ ಕೆಲಸ ಮಾಡಲಿ ಎಂದು ಸಲಹೆ ನೀಡಿದರು.
(ಸ್ನೇಹಸೇತು: ವಿಜಯಕರ್ನಾಟಕ)











Click it and Unblock the Notifications