ಹೆಬ್ಬಾಳ ಕ್ಷೇತ್ರಕ್ಕೆ 300 ಕೋಟಿ ರುಪಾಯಿ, ಕಟ್ಟಾ
ಸಂಜಯ್ ನಗರದ ಆರ್ಎಂವಿ ಪಾರ್ಕ್ನಲ್ಲಿ ಗ್ರಂಥಾಲಯ ಉದ್ಘಾಟನೆ ಹಾಗೂ ಕ್ಷೇತ್ರದ ಒಳಚರಂಡಿ ಕಾಮಗಾರಿಗಳ ಪ್ರಾರಂಭೋತ್ಸವವನ್ನು ನೆರವೇರಿಸಿ ಮಾತನಾಡಿದ ಅವರು, ಈಗಾಗಲೇ ಹೆಬ್ಬಾಳ ಕ್ಷೇತ್ರದಲ್ಲಿ ಕೈಗೆತ್ತಿಕೊಂಡಿರುವ ಕುಡಿಯುವ ನೀರು ಹಾಗೂ ಸ್ಯಾನಿಟರಿ ಪೈಪುಗಳ ಬದಲಾವಣೆ, ರಸ್ತೆಗಳ ಅಗಲೀಕರಣ, ಡಾಂಬರೀಕರಣ, ಉದ್ಯಾನವನ ನಿರ್ಮಾಣ, ಮಳೆ ನೀರು ಚರಂಡಿಗಳ ನಿರ್ಮಾಣ ಮುಂತಾದ ಕಾಮಗಾರಿಗಳಲ್ಲಿ ಇಲ್ಲಿಯವರೆಗೆ, ಶೇ 75 ರಷ್ಟು ಕಾಮಗಾರಿಗಳು ಪೂರ್ಣಗೊಂಡಿವೆ ಎಂದರು.
ಇದಲ್ಲದೆ ಕುಡಿಯುವ ನೀರಿಗಾಗಿ 30 ಕೋಟಿ ರುಪಾಯಿ ಮಳೆನೀರು ಕಾಲುವೆಗಳನ್ನು ಕೊಳಚೆ ನೀರಿನಿಂದ ಮುಕ್ತಗೊಳಿಸಲು 40 ಕೋಟಿ ರುಪಾಯಿ ಯೋಜನೆ ರೂಪಿಸಿದ್ದು, ಬರುವ ವರ್ಷದ ಅಂತ್ಯದೊಳಗೆ ಎಲ್ಲ ಕಾಮಗಾರಿಗಳು ಪೂರ್ಣಗೊಳ್ಳಲಿವೆ. ಗುತ್ತಿಗೆದಾರರ ಅಲಭ್ಯತೆಯಿಂದಾಗಿ ಕೆಲವು ಕಾಮಗಾರಿಗಳು ಕುಂಠಿತಗೊಂಡಿವೆ ಎಂದರು.
ವಾರ್ಡ್ಗಳ ಸರ್ವತೋಮುಖ ಅಭಿವೃದ್ಧಿ
ನಗರದ ಎಲ್ಲಾ 199 ವಾರ್ಡ್ಗಳಲ್ಲಿ ಸಹಾಯವಾಣಿ ಕೇಂದ್ರ, ಸ್ತ್ರೀ ಶಕ್ತಿ ಭವನ, 2 ಉದ್ಯಾನವನ, ಕಸ ಹಾಕಲು ಜಾಗ, ನೀರು ಶೇಖರಣ ಸ್ಥಳ ಮತ್ತು ಶೌಚಾಲಯಗಳ ನಿರ್ಮಾಣ ಸರ್ಕಾರದ ಗುರಿಯಾಗಿದೆ. ಸಹಾಯವಾಣಿ ಕೇಂದ್ರಗಳೊಂದಿಗೆ ಮಹಾನಗರ ಪಾಲಿಕೆಯ ಸಂಪರ್ಕ ಕಲ್ಪಿಸಲಾಗುವುದು ಹಾಗೂ ಕಸ ಹಾಕಲು ಜಾಗವನ್ನು ಸ್ವಾಧೀನಪಡಿಸಿಕೊಳ್ಳಲಾಗುವುದು ಎಂದರು. ಮುಂದಿನ ಮೂರು ವರ್ಷಗಳಲ್ಲಿ ಬೆಂಗಳೂರು ಅಭಿವೃದ್ಧಿಗೆ 22,000 ಕೋಟಿ ರುಪಾಯಿಗಳನ್ನು ತೊಡಗಿಸಲಾಗುವುದು ಎಂದರು.
ನನ್ನ ಹಸ್ತಕ್ಷೇಪವಿಲ್ಲ
ಟೆಂಡರ್ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುವುದಾಗಲೀ ಅಥವಾ ಅಧಿಕಾರಿಗಳನ್ನು ವೈಯುಕ್ತಿಕ ಕೆಲಸಗಳಿಗೆ ಉಪಯೋಗಿಸುವ ಕಾರ್ಯಗಳನ್ನು ನಾನೆಂದೂ ಮಾಡಿಲ್ಲ. ಒಂದು ಪಕ್ಷ ಯಾವುದೇ ವ್ಯಕ್ತಿ ಆಥವಾ ಅಧಿಕಾರಿಗಳಾಗಲಿ ತಪ್ಪೆಸಗಿದ್ದಾರೆಂದು ಅವರ ವಿರುದ್ಧ ದಾಖಲಾತಿಗಳನ್ನು ಒದಗಿಸಿದಲ್ಲಿ ಆ ಬಗ್ಗೆ ಕಠಿಣ ಕ್ರಮಕೈಗೊಳ್ಳಲಾಗುವುದೆಂದು ಸಚಿವರು ತಿಳಿಸಿದರು.
ಸಮಾಜ ಕಟ್ಟುವಲ್ಲಿ ಸುಶಿಕ್ಷಿತರ ಪಾತ್ರ
ಸುಶಿಕ್ಷಿತರು ಆಡಳಿತ, ರಾಜಕೀಯ ಮತ್ತು ಸಾಮಾಜಿಕ ರಂಗಗಳಲ್ಲಿ ಭಾಗವಹಿಸಿದಲ್ಲಿ ಮಾತ್ರ ಉತ್ತಮ ಸಮಾಜವನ್ನು ಕಟ್ಟಲು ಸಾಧ್ಯ. ಚುನಾವಣೆಯಲ್ಲಿ ಕೇವಲ ಶೇ.35 ರಿಂದ 40 ರಷ್ಟು ಮತದಾನವಾಗುತ್ತಿದೆ. ಈ ಪ್ರಮಾಣವು ಹೆಚ್ಚಾಗಬೇಕು. ಕೊಳಚೆ ಪ್ರದೇಶದ ಜನರ ಸರ್ವಾಂಗೀಣ ಆಭಿವೃದ್ಧಿಗೆ ತಮ್ಮ ಕೊಡುಗೆಯನ್ನು ನೀಡಬೇಕೆಂದು ಹಿರಿಯ ನಾಗರಿಕರಲ್ಲಿ ಸಚಿವರು ಮನವಿ ಮಾಡಿದರು.
(ದಟ್ಸ್ ಕನ್ನಡ ವಾರ್ತೆ)