ಮನೆ ಬಿಟ್ಟುಹೋದವಳ ಗರ್ವಭಂಗ

ಭಾರತೀಯ ಕುಟುಂಬ ವ್ಯವಸ್ಥೆಯ ಮೇಲೆ ದೂರಗಾಮಿ ಪರಿಣಾಮ ಬೀರುವಂತಹ ಒಂದು ಐತಿಹಾಸಿಕ ತೀರ್ಪನ್ನು ಭಾರತ ಸರ್ವೋಚ್ಚ ನ್ಯಾಯಾಲಯ ಬುಧವಾರ ಹೊರಹಾಕಿದೆ. ಅದರಂತೆ, ಮನೆಗೆ ವಾಪಸ್ಸು ಬಾರಮ್ಮ ಬಾರಮ್ಮ ಎಂದು ಪರಿಪರಿ ಬೇಡಿಕೊಂಡರೂ ಮೂತಿ ತಿರುವಿಕೊಂಡು ಇನ್ನೊಂದು ತಿರುವಿನಲ್ಲಿ ಹಾದುಹೋಗುವ ಮಹಿಳೆಗೆ ಅವಳ ಗಂಡ ಕ್ಯಾರೇ ಅನ್ನಬಾರದು. ಅವಳ ಜೀವನ ನಿರ್ವಹಣೆಗೆ ಮೂರು ಕಾಸು ಕೊಡಬಾರದು.
ಪೂನಂ ಮತ್ತು ಮಹೇಂದ್ರಕುಮಾರ್ ಎಂಬ ದಂಪತಿಗಳ ಕುಟುಂಬ ವ್ಯಾಜ್ಯದ ಬಗೆಗೆ ನ್ಯಾಯ ನಿರ್ಣಯ ಮಾಡಿದ ಪಂಜಾಬ್ ಉಚ್ಚ ನ್ಯಾಯಾಲಯ ಅವಳಾಗೇ ಬಿಟ್ಟು ಹೋಗಿರುವುದರಿಂದ ಅವಳಿಗೆ ಪರಿಹಾರ ಕೊಡಕೂಡದು ಎಂದು ತೀರ್ಪು ನೀಡಿತ್ತು. ಆ ತೀರ್ಪನ್ನು ಸರ್ವೂಚ್ಚ ನ್ಯಾಯಾಲಯ (ನ್ಯಾಯಮೂರ್ತಿ ವಿ ಎಸ್ ಸಿರ್ ಪುರ್ ಕರ್)ಎತ್ತಿ ಹಿಡಿದು ಬುಧವಾರ ತನ್ನ ತೀರ್ಮಾನವನ್ನು ಪ್ರಕಟಿಸಿತು.
ಹೇಳಲೇಬೇಕಾದ ಮತ್ತು ಹೇಳಲೇಬಾರದ ಕಾರಣಗಳಿಂದಾಗಿ ಮಹಿಳೆಯರು ಗಂಡನ ಮನೆ ಬಿಟ್ಟು ಎಲ್ಲಿಗೋ ಹೋಗುವುದುಂಟು. ಹೋದ ಮೇಲೆ, ವರದಕ್ಷಿಣೆ ಕಿರುಕುಳ ಕೊಡುತ್ತಾರೆ, ಸೀಮೆ ಎಣ್ಣೆ ಹಾಕಿ ಸುಡಲು ಬಂದರು, ಅವನು ಗಂಡಸೇ ಅಲ್ಲ ಎಂಬಿತ್ಯಾದಿ ಆರೋಪಗಳನ್ನು ಗಂಡ ಮತ್ತು ಅವನ ಮನೆಯವರ ಮೇಲೆ ಮಹಿಳೆಯರು ಮಾಡುವುದುಂಟು. ಇಂಥ ಕೇಸುಗಳು ದೇಶದಲ್ಲಿ, ನಮ್ಮದೇ ಕರ್ನಾಟಕದಲ್ಲಿ ಖಂಡಾಪಟ್ಟೆ ಇವೆ.
ನಿನ್ನೆ ನ್ಯಾಯಾಲಯ ನೀಡಿರುವ ಈ ತೀರ್ಪಿನ ಬೆಳಕಲ್ಲಿ ನಮ್ಮ ವಕೀಲರು ಮತ್ತು ಹಿರಿಯ ಹಾಗೂ ಕಿರಿಯ ನ್ಯಾಯಾಲಯದ ಸನ್ಮಾನ್ಯ ನ್ಯಾಯಮೂರ್ತಿಗಳು ಕುಟುಂಬ ವ್ಯಾಜ್ಯಗಳನ್ನು ಸೂಕ್ತವಾಗಿ ಪರಿಹರಿಸುತ್ತಾರೆ ಎಂಬ ಆಶಾವಾದವನ್ನು ಕನ್ನಡನಾಡಿಗರು ಇಟ್ಟುಕೊಳ್ಳಬಹುದು. ಅಂದಹಾಗೆ, ಇವತ್ತು ವಿಶ್ವ ಪುರುಷರ ದಿನ. ಬಡಪಾಯಿ ಗಂಡನಿಗೆ ಕೋರ್ಟು ನೀಡಿದ ತೀರ್ಪು ಉಡುಗೊರೆ ಎಂದೇ ಭಾವಿಸುವುದಕ್ಕೆ ಯಾರ ಅಪ್ಪಣೆಯೂ ಬೇಕಿಲ್ಲ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications