ಗೂಡಿನಿಂದ ಹೋದ ಹಕ್ಕಿಗಳು ಮತ್ತೆ ಬರಲಿವೆ
ಸೋಮವಾರ ಬೆಳಿಗ್ಗೆ ಇಲ್ಲಿನ ನೆಹರೂ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 32ನೇ ರಾಷ್ಟ್ರಮಟ್ಟದ ಕಿರಿಯ ಬಾಲಕ-ಬಾಲಕಿಯರ ಕ್ರೀಡಾಕೂಟವನ್ನು ಉದ್ಘಾಟಿಸಿ, ಶಾಂತಿಯ ಸಂಕೇತವಾದ ಪಾರಿವಾಳಗಳನ್ನು ಹಾರಿ ಬಿಟ್ಟ ಮುಖ್ಯಮಂತ್ರಿಗಳ ಬಳಿಯೇ ಮತ್ತೆ ಹಾರಿದ ಪಾರಿವಾಳಗಳು ಬಂದು ಕುಳಿತಾಗ ಅವರು ಸೂಚ್ಯವಾಗಿ ಹೀಗೆ ಮಾತನಾಡಿದರು.
ಕ್ರೀಡೆಗಳಿಗೆ ಸಹಕಾರ : ರಾಜ್ಯ ಸರ್ಕಾರ ಕ್ರೀಡೆಗಳಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತಿದೆ. ಈ ನಿಟ್ಟಿನಲ್ಲಿ 75 ಕೋಟಿ ರೂ.ಗಳಷ್ಟು ಹಣವನ್ನು ಮೀಸಲಿಟ್ಟಿರುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು. ರಾಷ್ಟ್ರಮಟ್ಟದ ಕ್ರೀಡಾಕೂಟ ಜಿಲ್ಲೆಯಲ್ಲಿ ನಡೆಯತ್ತಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ. ಜೊತೆಗೆ ಜಿಲ್ಲೆಯೂ ಒಳ್ಳೆಯ ಆತಿಥ್ಯ ನೀಡಲು ಹೆಸರುವಾಸಿಯಾಗಿದ್ದು, ಆಟಗಾರರಿಗೆ ಹಾಗೂ ಅಧಿಕಾರಿಗಳಿಗೆ ಈ ಬಾರಿಯೂ ಒಳ್ಳೆಯ ಆತಿಥ್ಯ ನೀಡಬೇಕು ಎಂದರು.
ವಾಲಿಬಾಲ್ ಕ್ರೀಡೆ ಇಂದು ದಿನೇದಿನೇ ಪ್ರಚಾರ ಪಡೆಯುತ್ತಿರುವ ಕ್ರೀಡೆಯಾಗಿದ್ದು, ಇಲ್ಲಿ ಆಯೋಜಿಸಲಾಗಿರುವ ಕ್ರೀಡಾಕೂಟವು ಪ್ರೇಕ್ಷರಿಗೆ ಒಳ್ಳೆಯ ರಸದೌತಣ ಕಲ್ಪಿಸಲಿ ಎಂದರು. ಸರ್ಕಾರ ಕ್ರೀಡಾಕ್ಷೇತ್ರದಲ್ಲಿರುವವರಿಗೆ ಎಲ್ಲಾ ರೀತಿಯ ಅಗತ್ಯ ನೆರವು ನೀಡುತ್ತಿದ್ದು, ರಾಷ್ಟ್ರಮಟ್ಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿ ವಿಜೇತರಾಗಿ ಪ್ರಥಮ ಸ್ಥಾನ ಪಡೆದವರಿಗೆ 1 ಲಕ್ಷ, ದ್ವಿತೀಯ ಸ್ಥಾನ ಪಡೆದವರಿಗೆ 50 ಸಾವಿರ ಹಾಗೂ ತೃತೀಯ ಸ್ಥಾನ ಪಡೆದವರಿಗೆ 25 ಸಾವಿರ ರುಪಾಯಿ ಸರ್ಕಾರದ ವತಿಯಿಂದ ನೀಡುವುದಾಗಿ ಹೇಳಿದರು.
ಪ್ರಸಕ್ತ 10 ಕೋಟಿ ರೂ.ಗಳನ್ನು ಕ್ರೀಡಾಂಗಣ ನವೀಕರಣಕ್ಕೆ ಹಾಗೂ ಹೊಸ ಟ್ರ್ಯಾಕ್ ನಿರ್ಮಿಸಲು ಬಿಡುಗಡೆ ಮಾಡಲಾಗಿದೆ. ಈಗಾಗಲೇ ಹುಬ್ಬಳ್ಳಿ, ದಾರವಾಡ, ಗುಲ್ಬರ್ಗಾ ಹಾಗೂ ಮೈಸೂರಿನಲ್ಲಿ ಕ್ರೀಡಾಂಗಣದ ನವೀಕರಣ ಕಾರ್ಯ ನಡೆಯುತ್ತಿದೆ. ಜೊತೆಗೆ ಶಿವಮೊಗ್ಗದಲ್ಲಿಯೂ ಕ್ರೀಡಾಂಗಣವನ್ನು ಆಧುನೀಕರಣಗೊಳಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶಾಖಾಮಠದ ಪ್ರಸನ್ನನಾಥ ಸ್ವಾಮೀಜಿ, ಸಂಸದ ಬಿ.ವೈ. ರಾಘವೇಂದ್ರ, ಸೂರ್ಯ ರೋಷನಿ ಕಂಪೆನಿಯ ಮುಖ್ಯಸ್ಥ ಜಯಪ್ರಕಾಶ್ ಅಗರ್ವಾಲ್, ಕಾರ್ಮಿಕ ಮಂತ್ರಿ ಬಚ್ಚೇಗೌಡ, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷೆ ಡಿ.ಎಚ್. ಶಂಕರಮೂರ್ತಿ, ಶಾಸಕ ಕೆ.ಜಿ. ಕುಮಾರಸ್ವಾಮಿ, ಆಯನೂರು ಮಂಜುನಾಥ್, ಆರಗಜ್ಞಾನೇಂದ್ರ, ಜಿ.ಪಂ. ಅಧ್ಯಕ್ಷ ಎಚ್.ಸಿ. ಬಸವರಾಜಪ್ಪ, ನಗರಸಭೆ ಅಧ್ಯಕ್ಷ ಎನ್.ಜೆ. ರಾಜಶೇಖರ್, ಸೂಡಾ ಅಧ್ಯಕ್ಷ ಜ್ಞಾನೇಶ್ವರ್, ಜಿಲ್ಲಾಧಿಕಾರಿ ಪಂಕಜ್ಕುಮಾರ್ ಪಾಂಡೆ ಸೇರಿದಂತೆ ಹಲವರು ಉಪಸ್ಥಿರಿದ್ದರು.