ಬೆಂಗಳೂರು : ಫುಟ್ ಬಾಲ್ ಅಕಾಡಮಿಗೆ ಚಾಲನೆ

ಅಶೋಕನಗರದ ಬೆಂಗಳೂರು ಜಿಲ್ಲಾ ಫುಟ್ಬಾಲ್ ಮೈದಾನದಲ್ಲಿ ಬುಧವಾರ ನಡೆದ ಫುಟ್ಬಾಲ್ ಅಕಾಡೆಮಿ ಶಂಕುಸ್ಥಾಪನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ? ಪಿಫಾದ ಗೋಲ್-2 ಪ್ರಾಜೆಕ್ಟ್ ಅನ್ವಯ ಸುಮಾರು 3.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಫುಟ್ಬಾಲ್ ಅಕಾಡೆಮಿಯನ್ನು ಒಂದು ವರ್ಷದೊಳಗೆ ಪ್ರಾರಂಭಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಸಿಕ್ಕಿಂ, ಅಂಡಮಾನ್ ಮತ್ತು ಬೆಂಗಳೂರಿನಲ್ಲಿ ಅಕಾಡೆಮಿ ಸ್ಥಾಪಿಸಲಾಗುತ್ತಿದೆ. ಆದರೆ ಬೆಂಗಳೂರಿನಲ್ಲಿ ಕೃತಕ ಟರ್ಫ್ ಕೂಡ ಲಭ್ಯವಾಗುತ್ತಿರುವುದರಿಂದ ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚಿನ ನೆರವು ದೊರೆಯಲಿದೆ ಎಂದು ಪಟೇಲ್ ವಿವರಿಸಿದರು. ಅಕಾಡೆಮಿಯಲ್ಲಿ ಆರಂಭದಲ್ಲಿ 60 ಮಂದಿಗೆ 2 ವರ್ಷಗಳ ತರಬೇತಿ ನೀಡಲಾಗುವುದು. ನಂತರ ಹಂತ ಹಂತವಾಗಿ ಈ ಸಂಖ್ಯೆ ಹೆಚ್ಚು ಮಾಡಲಾಗುವುದು. ಅಕಾಡೆಮಿಯಲ್ಲಿ ಜಿಮ್ನಾಶಿಯಂ, ವಸತಿ, ಭೋಜನ ಸೇರಿದಂತೆ ವಿವಿಧ ಸೌಲಭ್ಯ ಒಳಗೊಂಡಿರುತ್ತದೆ ಎಂದ ಪ್ರಫುಲ್ ಪಟೇಲ್, ಮೈಸೂರು ಹಾಗೂ ಮಂಗಳೂರಿನಲ್ಲೂ ಸೂಕ್ತ ಮೈದಾನ ನಿರ್ಮಿಸಿ ರಾಜ್ಯದ ವಿವಿಧೆಡೆ ಫುಟ್ಬಾಲ್ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಕ್ರಿಕೆಟ್ ಜನಪ್ರಿಯತೆಯಿಂದ ಸರಕಾರ ಹಾಗೂ ಉದ್ಯಮಗಳು ಫುಟ್ಬಾಲ್ ನೆರವಿಗೆ ಮುಂದಾಗುತ್ತಿರಲಿಲ್ಲ. ಇದೀಗ ಪರಿಸ್ಥಿತಿ ಬದಲಾಗುತಿದ್ದು ಪ್ರಾಯೋಜಕರು ಮುಂದೆ ಬರುತ್ತಿದ್ದಾರೆ ಎಂದು ಅವರು ತಿಳಿಸಿದರು. ಬಿಸಿಸಿಐ ನೀಡುತ್ತಿರುವ 25 ಕೋಟಿ ರೂ. ನೆರವನ್ನು ಫುಟ್ಬಾಲ್ ಅಭಿವೃದ್ಧಿಗೆ ಬಳಸಲಾಗುತ್ತಿದೆ. ಭಾರತದಲ್ಲಿ ಮೂಲ ಸೌಲಭ್ಯಗಳ ಕೊರತೆ ಇರುವುದರಿಂದ ಭಾರತೀಯ ಆಟಗಾರರಿಗೆ ದುಬೈ, ಬಾರ್ಸಿಲೋನಾದಲ್ಲಿ ತರಬೇತಿ ನೀಡಲಾಯಿತು. ಇದರ ಪರಿಣಾಮ ಎಎಎಫ್ಸಿ ಕಪ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ಭಾರತ ತಂಡ ಪ್ರಶಸ್ತಿ ಗೆದ್ದುಕೊಂಡಿತು ಎಂದು ಅವರು ವಿವರಿಸಿದರು.
ಭಾರತ ತಂಡವು ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲು ಸಾಧ್ಯವಾಗದ ಕಾರಣ ಶ್ರೇಯಾಂಕದಲ್ಲಿ ಕುಸಿತ ಕಂಡಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡುವ ಮೂಲಕ ರ್ಯಾಂಕಿಂಗ್ನಲ್ಲಿ ಬಡ್ತಿ ಪಡೆಯಲಿದೆ ಎಂದು ಪ್ರಫುಲ್ ಪಟೇಲ್ ವಿಶ್ವಾಸ ವ್ಯಕ್ತಪಡಿಸಿದರು. ಸಮಾರಂಭದಲ್ಲಿ ಕರ್ನಾಟಕ ಫುಟ್ಬಾಲ್ ಸಂಸ್ಥೆ ಅಧ್ಯಕ್ಷ ಎ.ಆರ್. ಖಲೀಲ್, ಕಾರ್ಯದರ್ಶಿ ಕೃಷ್ಣ ನಾರಾಯಣ, ಎಐಎಫ್ಎಫ್ ಪ್ರಧಾನ ಕಾರ್ಯದರ್ಶಿ ಅಲ್ಬೆರ್ಟೊ ಕೊಲೆಕೊ, ಶಾಸಕ ಎನ್.ಎ.ಹ್ಯಾರಿಸ್ ಮುಂತಾದವರು ಉಪಸ್ಥಿತರಿದ್ದರು.
ಫುಟ್ಬಾಲ್ ಅಭಿವೃದ್ಧಿಗೆ 5 ಕೋಟಿ ನೆರವು ರಾಜ್ಯದಲ್ಲಿ ಫುಟ್ಬಾಲ್ ಅಭಿವೃದ್ಧಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 5 ಕೋಟಿ ರೂ. ನೆರವು ಪ್ರಕಟಿಸಿದ್ದಾರೆ. ಬುಧವಾರ ನಡೆದ ಫುಟ್ಬಾಲ್ ಅಕಾಡೆಮಿ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದ ಯಡಿಯೂರಪ್ಪ, ಜನರ ಕ್ರೀಡೆಯಾದ ಫುಟ್ಬಾಲ್ ಅಭಿವೃದ್ಧಿಗೆ ತತ್ಕ್ಷಣದಲ್ಲೇ 5 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು. ಪ್ರಸಕ್ತ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರೆಡ್ಡಿ ಗುಂಪಿನಲ್ಲಿ ಗುರುತಿಸಿಕೊಂಡಿರುವ ರಾಜ್ಯ ಯುವಜನ ಮತ್ತು ಕ್ರೀಡಾ ಸಚಿವ ಗೂಳಿಹಟ್ಟಿ ಶೇಖರ್ ಸಮಾರಂಭ ದಲ್ಲಿ ಗೈರು ಹಾಜರಾಗಿದ್ದರು.
(ಸ್ನೇಹಸೇತು-ವಿಜಯ ಕರ್ನಾಟಕ)












Click it and Unblock the Notifications