ಮೈಸೂರು : ಮುಂದುವರಿದ ತೆರವು ಕಾರ್ಯಾಚರಣೆ
ನಗರದ 18 ಪ್ರಮುಖ ರಸ್ತೆಗಳಲ್ಲಿ ಪಾದಚಾರಿ ರಸ್ತೆಯನ್ನು ಮಳಿಗೆಗಳ ಮಾಲೀಕರು ಒತ್ತುವರಿ ಮಾಡಿಕೊಂಡಿದ್ದರು. ಆ ಪೈಕಿ ಆರು ರಸ್ತೆಗಳು ನಗರದ ಹೃದಯ ಭಾಗದಲ್ಲೇ ಇದ್ದು, ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ತೀವ್ರ ಸಮಸ್ಯೆ ಉಂಟು ಮಾಡುತ್ತಿದ್ದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಒತ್ತುವರಿ ತೆರವುಗೊಳಿಸಲಾಯಿತು.
ನಗರದ ಜೀವಣ್ಣರಾಯಕಟ್ಟೆ ಮೈದಾನ ಹಾಗೂ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿಯಿಂದ ಆರಂಭವಾದ ಕಾರ್ಯಾಚರಣೆ ಎರಡು ಹಂತಗಳಲ್ಲಿ ನಡೆಯಿತು. ಒಟ್ಟು 27 ತಂಡಗಳು ಬೆಳಿಗ್ಗೆ ಆರು ಗಂಟೆಗೆ ಸರಿಯಾಗಿ ತೆರವು ಕಾರ್ಯಾಚರಣೆ ಆರಂಭಿಸಿದವು. ಜೆಸಿಬಿ ಯಂತ್ರಗಳು ಭರದಲ್ಲಿ ಒತ್ತುವರಿ ತೆರವುಗೊಳಿಸಿದವು. ಈ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ವಿಶೇಷ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ರಾಜ್ಯ ಮೀಸಲು ಪಡೆಯ ಆರು ಪ್ಲಟೂನ್, ನಗರ ಸಶಸ್ತ್ರ ಮೀಸಲು ಪಡೆಯ 8 ಪ್ಲಟೂನ್ ಪೊಲೀಸ್ ಸಿಬ್ಬಂದಿಗಳು, ಮೂವರು ಡಿಸಿಪಿ, 8 ಮಂದಿ ಎಸಿಪಿ,18 ಇನ್ಸ್ಪೆಕ್ಟರ್ಗಳು, 32 ಮಂದಿ ಸಬ್ ಇನ್ಸ್ಪೆಕ್ಟರ್ ಗಳು ಹಾಗೂ 400 ಮಂದಿ ನಾಗರಿಕ ಪೊಲೀಸರನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.
ಏಕಕಾಲಕ್ಕೆ ಕಾರ್ಯಾಚರಣೆ ನಡೆಸುವ ಸಂಬಂಧ ಬೇಸ್ ಒಂದು ಹಾಗೂ ಬೇಸ್ ಎರಡು ಎಂಬ ವಿಭಾಗಗಳನ್ನು ಮಾಡಲಾಗಿತ್ತು. 280 ಮಂದಿ ಗ್ಯಾಂಗ್ ಮನ್, 27 ಮಂದಿ ಗೆಜೆಟೆಡ್ ಅಧಿಕಾರಿಗಳು, 27 ಮಂದಿ ಐಡೆಂಟಿಫೈ ಅಧಿಕಾರಿಗಳು, ಇಬ್ಬರು ಫೇಸ್ ಅಧಿಕಾರಿಗಳು, ಒಂಬತ್ತು ಎಸಿ ಸ್ಕ್ವಾಡ್ ಅನ್ನು ನಿಯೋಜಿಸಲಾಗಿದೆ.
(ದಟ್ಸ್ ಕನ್ನಡ ವಾರ್ತೆ)