ರೆಡ್ಡಿ ಬ್ರದರ್ಸ್ ಜತೆ ಭಿನ್ನಾಭಿಪ್ರಾಯವಿಲ್ಲ: ಸಿಎಂ
ಕೇಂದ್ರ ಸರಕಾರ ಘೋಷಿಸಿರುವ ರು.1000 ಕೋಟಿ ಪರಿಹಾರದ ಹಣ ಇನ್ನೂ ಬಿಡುಗಡೆಯಾಗಿಲ್ಲ. ನೆರೆ ಪರಿಹಾರಕ್ಕೆ ಹೆಚ್ಚಿನ ನೆರವು ನೀಡುವಂತೆ ಕೋರಿ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ ಎಂದು ಈ ಸಂದರ್ಭದಲ್ಲಿ ಯಡಿಯೂರಪ್ಪ ತಿಳಿಸಿದರು.
ಸರಕಾರದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ. ತಮ್ಮ ಖಾತೆಯಲ್ಲಿ ಅನಗತ್ಯ ಹಸ್ತಕ್ಷೇಪ ಮಾಡಲಾಗುತ್ತಿದೆ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದರೆ ತಮ್ಮ ಸಲಹೆ ಕೇಳುತ್ತಿಲ್ಲ. ಬೆಂಬಲಿಗ ಸಚಿವರನ್ನು ನಿಕೃಷ್ಟವಾಗಿ ಕಾಣಲಾಗುತ್ತಿದೆ ಎಂದು ಮುಖ್ಯಮಂತ್ರಿ ವಿರುದ್ಧ ಬಳ್ಳಾರಿ ಸಚಿವರು ತಿರುಗಿ ಬಿದ್ದಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತ್ತು. ಆದರೆ ಇದೆಲ್ಲಾ ಅಪ್ಪಟ ಸುಳ್ಳು ಎಂದು ಯಡಿಯೂರಪ್ಪ ಹೇಳಿದ್ದಾರೆ.
ಗದದ ಜಿಲ್ಲಾಧಿಕಾರಿ ಎನ್ ವಿ ಪ್ರಸಾದ್ ಎತ್ತಂಗಡಿ ಮಾಡುವಾಗ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಅವರನ್ನು ಲೆಕ್ಕಿಸಲಿಲ್ಲ. ಅದಿರು ಸಾಗಣೆ ಲಾರಿಗಳ ಮೇಲೆ ಸಾವಿರ ರು.ತೆರಿಗೆ ವಿಧಿಸಿದಾಗಲೂ ತಮ್ಮ ಸಲಹೆ ತೆಗೆದುಕೊಳ್ಳಲಿಲ್ಲ ಎಂಬ ಆರೋಪಗಳು ಸಿಎಂ ವಿರುದ್ಧ ರೆಡ್ಡಿ ಸಹೋದರರಿಂದ ಕೇಳಿಬಂದಿದ್ದವು.
ನೆರೆಪರಿಹಾರ ಕಾರ್ಯ ಕಂದಾಯ ಸಚಿವ ಖಾತೆ ವ್ಯಾಪ್ತಿಗೆ ಬಂದರೂ ಪುನರ್ವಸತಿ ಕಾರ್ಯದ ಸಂಚಾಲಕರಾಗಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರನ್ನು ನೇಮಿಸುವಾಗ ಕಂದಾಯ ಸಚಿವ ಕರುಣಾಕರ ರೆಡ್ಡಿ ಅವರ ಗಮನಕ್ಕೂ ಬರಲಿಲ್ಲ. ಈ ಎಲ್ಲಾ ಸಂಗತಿಗಳು ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ ಮತ್ತು ಶ್ರೀರಾಲು ಅವರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಈ ಆರೋಪಗಳಲ್ಲಿ ಹುರುಳಿಲ್ಲ ಎಂದು ಮುಖ್ಯಮಂತ್ರಿಗಳು ಇಂದು ಸ್ಪಷ್ಟಪಡಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)