ನೆರೆ: ಐಟಿ ಕಂಪನಿಗಳಿಂದ ಹಫ್ತಾ ವಸೂಲಿ
ಅಕ್ಟೋಬರ್ 21 ರ ಮಂಗಳವಾರ ಈ ಬಗ್ಗೆ ಬೆಂಗಳೂರಿನ ಕಾರ್ಪೋರೇಟ್ ವಲಯಗಳಲ್ಲಿ ಭಾರಿ ಗುಸುಗುಸು ಹಬ್ಬಿತ್ತು. ಸರಕಾರದ ನಾನಾ ಇಲಾಖೆಗಳ ಅಧಿಕಾರಿಗಳು ಐಟಿ ಕಂಪನಿಗಳ ಬೆನ್ನು ಹತ್ತಿ ಹಣ ವಸೂಲಿ ಮಾಡುತ್ತಿದ್ದಾರೆಂಬ ಆಪಾದನೆಗಳು ಕೇಳಿ ಬಂದಿತ್ತು. ಈ ಸುದ್ದಿಗೆ ಪುಷ್ಠಿ ನೀಡುವಂಥ ಒಂದು ವರದಿಯನ್ನು ಟೈಮ್ಸ್ ಆಫ್ ಇಂಡಿಯಾ ಬೆಂಗಳೂರು ಆವೃತ್ತಿ ಬುಧವಾರ ಮುಖಪುಟದಲ್ಲಿ ಪ್ರಕಟಿಸಿದೆ.
ಅಂತೆಯೇ, ಸ್ವಪ್ರೇರಣೆಯಿಂದ ನಿಧಿ ಎಲ್ಲೆಲ್ಲಿಂದ ಬಂದಿಲ್ಲವೋ ಅಲ್ಲೆಲ್ಲ ಕೈಹಾಕುವ ಕೆಲಸಕ್ಕೆ ಸರಕಾರ ಶುರುವಿಟ್ಟುಕೊಂಡಿದೆಯಂತೆ. ಉದಾಹರಣೆಗೆ, ರೇಸ್ ಕ್ಲಬ್. ಮೊನ್ನೆ ಶನಿವಾರ ಮೈಸೂರಿನಲ್ಲಿ ಆನ್ ಕೋರ್ಸ್ ರೇಸುಗಳಿದ್ದವು. ಅಂದು ನಡೆದ ಒಂಭತ್ತು ಕುದುರೆ ಓಟಗಳಲ್ಲಿ 6 ಫೇವರಿಟ್ ಗಳು ನೆಲಕಚ್ಚಿ ಪಂಟರುಗಳು ಕೈಸುಟ್ಟುಕೊಂಡರು. ಬೆಂಕಿಯುಂಡೆಯಂಥ ಕುದುರೆಗಳು ಕತ್ತೆಗಳ ರೀತಿ ಓಡಿ ಬೋರ್ಡ್ ಔಟ್ ಆದುದು ಅನೇಕರ ಹುಬ್ಬನ್ನು ಮೇಲೇರಿಸಿದವು.
ಮೈಸೂರು ರೇಸ್ ಕೋರ್ಸ್ ಆಡಳಿತ ವರ್ಗ ಪ್ರವಾಹ ಪರಿಹಾರ ನಿಧಿಗೆ ಹಣ ಸಂಗ್ರಹಿಸಿಕೊಡುವ ಉದ್ದೇಶದಿಂದ ರೇಸುಗಳನ್ನು ಫಿಕ್ಸ್ ಮಾಡಿದೆ ಎಂದು ಒಬ್ಬ ಆಟಗಾರ ನಮ್ಮ ವರದಿಗಾರರಿಗೆ ತಿಳಿಸಿದರು. ರೇಸುಗಳು ಫಿಕ್ಸ್ ಆದ ಪರಿಣಾಮ ಅಂದು ಬುಕ್ಕಿಗಳು ಹಬ್ಬಮಾಡಿದರಂತೆ. ಬುಕ್ಕಿಗಳಿಂದ ಪಡೆಯುವ ಹಣವನ್ನು ಶೇಖರಿಸಿ ಪರಿಹಾರ ನಿಧಿಗೆ ಸಲ್ಲಿಸುವ ಆಲೋಚನೆಯನ್ನು ಕ್ಲಬ್ ಮಾಡಿಗೆ ಎಂದು ಪಂಟರುಗಳು ಆರೋಪಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)