ಪರಿಹಾರ : ರಾಜ್ಯದ ಮನವಿಗೆ ಕೇಂದ್ರ ಸಹಕಾರ
ನವದೆಹಲಿ, ಅ. 21 : ಅತಿವೃಷ್ಟಿ ಮತ್ತು ಪ್ರವಾಹದಿಂದ ಉತ್ತರ ಕರ್ನಾಟಕದ ಹಾಗೂ ಕರಾವಳಿಯ 15 ಜಿಲ್ಲೆಗಳು ತೀವ್ರ ಹಾನಿಗೊಳಗಾಗಿವೆ. ಭಾರಿ ಮಳೆ ಮತ್ತು ಪ್ರವಾಹದಿಂದ ಒಟ್ಟು 18 ಜಿಲ್ಲೆಗಳ 1.8 ಕೋಟಿ ಮಂದಿ ನೇರವಾಗಿ ಅಥವಾ ಅಪ್ರತ್ಯಕ್ಷವಾಗಿ ತೊಂದರೆಗೊಳಗಾಗಿದ್ದಾರೆ. ಇದು ರಾಜ್ಯದ ಪಾಲಿಗೆ ಈ ಶತಮಾನದ ಭೀಕರ ದುರಂತ. ಅಪಾರ ಸಾವು-ನೋವು ಮತ್ತು ಆಸ್ತಿ-ಪಾಸ್ತಿಗೆ ನಷ್ಟವುಂಟಾಗಿರುವುದನ್ನು ಇಡೀ ದೇಶವೇ ಗಮನಿಸಿದೆ.
ಈ ಸಂಬಂಧ ಪ್ರಧಾನಮಂತ್ರಿಗಳು, ಕೇಂದ್ರ ಗೃಹ ಸಚಿವರು ಮತ್ತು ಹಣಕಾಸು ಸಚಿವರನ್ನು ರಾಜ್ಯದ ನಿಯೋಗದೊಂದಿಗೆ ಭೇಟಿ ಮಾಡಿ ಮನವಿಯನ್ನು ಸಲ್ಲಿಸಿದ್ದೇವೆ. ಪ್ರಧಾನಿಗಳು, ಕೇಂದ್ರ ಗೃಹ ಸಚಿವರು ಮತ್ತು ಹಣಕಾಸು ಸಚಿವರು ಮನವಿಗೆ ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ನಿಯೋಗದಲ್ಲಿ ಮುಖ್ಯಮಂತ್ರಿಗಳ ಜೊತೆ ಜೆಡಿಯು ಸಂಸದೀಯ ಪಕ್ಷದ ನಾಯಕ ಡಾ. ಎಂ.ಪಿ. ನಾಡಗೌಡ, ಸಚಿವರುಗಳಾದ ಡಾ. ವಿ.ಎಸ್. ಆಚಾರ್ಯ, ಕರುಣಾಕರ ರೆಡ್ಡಿ, ಶೋಭಾ ಕರಂದ್ಲಾಜೆ, ದೆಹಲಿಯಲ್ಲಿ ರಾಜ್ಯ ಸರ್ಕಾರದ ವಿಶೇಷ ಪ್ರತಿನಿಧಿ ಧನಂಜಯ್ ಕುಮಾರ್, ಹೆಚ್ಚುವರಿ ವಿಶೇಷ ಪ್ರತಿನಿಧಿ ಬೈಕೆರೆ ನಾಗೇಶ್, ಮುಖ್ಯ ಕಾರ್ಯದರ್ಶಿಗಳಾದ ಎಸ್.ವಿ. ರಂಗನಾಥ್, ಹಣಕಾಸು ಪ್ರಧಾನ ಕಾರ್ಯದರ್ಶಿ ಶ್ರೀನಿವಾಸಮೂರ್ತಿ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಗಳಾದ ವಿ.ಪಿ. ಬಳಿಗಾರ, ಕಂದಾಯ ಕಾರ್ಯದರ್ಶಿ ನಾರಾಯಣಸ್ವಾಮಿ ಇದ್ದರು.
ಅತಿವೃಷ್ಟಿ ಹಾಗೂ ಪ್ರವಾಹದಿಂದ 229 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 7,882 ಜಾನುವಾರುಗಳು ಸತ್ತಿವೆ. 6.55 ಲಕ್ಷ ಮನೆಗಳು ಕುಸಿದುಬಿದ್ದಿವೆ. ಸುಮಾರು 22 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಸುಮಾರು 18,568 ಕೋಟಿ ರುಪಾಯಿ ನಷ್ಟ ಉಂಟಾಗಿದೆ. ಈ ಬಗ್ಗೆ ವಿಷಯವಾರು ಮಾಹಿತಿ ಮತ್ತು ಅಂಕಿ-ಅಂಶಗಳುಳ್ಳ ಮನವಿಯನ್ನು ಪ್ರಧಾನಿಗಳಿಗೆ ಸಲ್ಲಿಸಿ ರಾಷ್ಟ್ರೀಯ ವಿಕೋಪ ಪರಿಹಾರ ನಿಧಿಯಡಿ ನೆರವನ್ನು ಕೋರಿದ್ದೇವೆ ಎಂದು ಯಡಿಯೂರಪ್ಪ ಹೇಳಿದರು.
(ಏಜನ್ಸೀಸ್)