ಆರ್ಎಸ್ಎಸ್ ನಿಂದ 5 ಸಾವಿರ ಮನೆ ನಿರ್ಮಾಣ
ಮಂಗಳವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಮಳೆ ಬರದೆ ರೈತರು ಕಂಗಾಲಾಗಿದ್ದಾರೆ. ಆಗ ಭಗವಂತನ ಮೊರೆ ಹೋಗುವಂತಾಗಿತ್ತು. ಭಗವಂತನ ಅನುಗ್ರಹ ಜಾಸ್ತಿಯಾಗಿ ಈ ರೀತಿ ಅನಾಹುತ ಸೃಷ್ಟಿಯಾಗಿದೆ ಎನ್ನಿಸುತ್ತಿದೆ. ಸಂಕಷ್ಟಕ್ಕೀಡಾದವರಿಗೆ ಸರ್ಕಾರ ಹಾಗೂ ಸಮಾಜ ಉತ್ತಮವಾಗಿ ಸ್ಪಂದಿಸಿದೆ ಎಂದರು.
ಭಾರೀ ಮಳೆಯಿಂದಾಗಿ ಹಲವರು ಸಾವನ್ನಪ್ಪಿದ್ದು, ಲಕ್ಷಾಂತರ ಜನ ವಸತಿಹೀನರಾಗಿದ್ದಾರೆ. ಇಂಥ ದಯನೀಯ ಸ್ಥಿತಿಯಲ್ಲಿರುವ ಸಮಾಜ ಬಂಧುಗಳಿಗೆ ಸಂಘವು ಎಂದಿನಂತೆ ಸಹಾಯ ಹಸ್ತ ಚಾಚಿದೆ. ಅದರಂತೆ, ರಾಯಚೂರು, ಬಾಗಲಕೋಟೆ, ಬೆಳಗಾಂ ಮತ್ತು ಗದಗ ಜಿಲ್ಲೆಗಳಲ್ಲಿ ಸ್ವಯಂ ಸೇವಕರು ಸಂತ್ರಸ್ತರಿಗೆ ಆಹಾರ, ಔಷಧಿ, ವೈದ್ಯಕೀಯ ನೆರವು ಮುಂತಾದವುಗಳನ್ನು ನೀಡುತ್ತಿದೆ. ಜೊತೆಗೆ, ಸಂಘವು ಸಂತ್ರಸ್ತರಿಗೆ ಶಾಶ್ವತ ಪರಿಹಾರ ನೀಡಲು ಯೋಜನೆಯೊಂದನ್ನು ರೂಪಿಸಿರುವುದಾಗಿ ಹೇಳಿದರು.
ಸಮಾಜ ಬಂಧುಗಳ ಸಹಕಾರದಿಂದ ಸಂಘವು 5000 ಮನೆಗಳನ್ನು ನಿರ್ಮಿಸಿಕೊಡಲು ಯೋಚಿಸಿದೆ. ಮೂಲಭೂತ ಸೌಲಭ್ಯವನ್ನು ಹೊಂದಿರುವ ಮನೆಯನ್ನು ನಿರ್ಮಿಸಲು 50 ಕೋಟಿ ರೂ. ಅವಶ್ಯಕತೆ ಇದ್ದು, ಸಮಾಜ ಬಂಧುಗಳಿಂದ ಸಂಗ್ರಹಿಸಲು ಯೋಚಿಸಲಾಗಿದೆ ಎಂದರು. ಈ ಯೋಜನೆಗೆ ಅನೇಕ ಸಂಘ ಸಂಸ್ಥೆಗಳು ಮುಂದೆ ಬಂದಿದ್ದು, 50 ಮನೆಯನ್ನು ಕಟ್ಟಿಸಿಕೊಡಲು ಮುಂದಾದರೆ ಆ ಕಾಲೋನಿಗೆ ಸಂಸ್ಥೆಯ ಅಥವಾ ದಾನಿಗಳ ಹೆಸರನ್ನು ಇಡಲಾಗುವುದು. ಹಾಗೆಯೇ, ವ್ಯಕ್ತಿಯಾಗಿ ಒಂದು ಮನೆಯನ್ನು ಕಟ್ಟಿಕೊಡಲು ಮುಂದಾದರೆ, ಆ ಮನೆಗೆ ಅವರ ಹೆಸರನ್ನೇ ಇಡಲು ತೀರ್ಮಾನಿಸಲಾಗಿದೆ ಎಂದರು.
ಇದರಂತೆ, ನೆರೆ ಸಂತ್ರಸ್ತರಿಗೆ ಜಿಲ್ಲೆಯಿಂದ 100 ಮನೆ ನಿರ್ಮಾಣ ಮಾಡಲು ಯೋಚಿಸಲಾಗುತ್ತಿದೆ. ದೇಣಿಗೆ ನೀಡುವವರು ಆರ್ಎಸ್ಎಸ್ ಸಂಚಾಲಿತ ಸಂತ್ರಸ್ತರ ಪರಿಹಾರ ನಿಧಿ ಈ ಹೆಸರಿನಲ್ಲಿ ನೀಡಬೇಕು. ಇದಕ್ಕೆ ಆದಾಯ ತೆರಿಗೆ ವಿನಾಯಿತಿಯ ಸೌಲಭ್ಯವಿದೆ. ಹಾಗೆಯೇ, ದೇಣಿಗೆ ನೀಡುವವರು ಪಂಚವಟಿ ಕಾಲೋನಿಯ ರಾಷ್ಟ್ರೀಯ ಸ್ವಯಂ ಸೇವಕಾ ಸಂಘ, ಜೈಲ್ ರಸ್ತೆಯಲ್ಲಿರುವ ಬಿ.ಎಸ್.ಟೈಲರ್ಸ್, ಕೋಟೆ ರಸ್ತೆಯ ಎಸ್ಜಿಆರ್ ಬುಕ್ ಬೈಂಡರ್ಸ್, ವಿನೋಬನಗರದ ವಿಕಾಸ ವಿದ್ಯಾಲಯ, ಗಾಂಧೀಬಜಾರ್ನ ರಾಜಾರಾಂ ಬುಕ್ ಹೌಸ್, ನೆಹರೂ ರಸ್ತೆಯ ಸಾಧನಾ ಟ್ರೇಡಿಂಗ್, ಕೆ.ಆರ್.ಪುರಂನ ರಾಯಲ್ ಪ್ರಿಂಟರ್ಸ್ ಹಾಗೂ ತಿಲಕ್ ನಗರದಲ್ಲಿರುವ ವಾಸವ ದತ್ತ ಸಿಮೆಂಟ್ ಇಲ್ಲಿಗೆ ತಮ್ಮ ದೇಣಿಗೆಯನ್ನು ತಲುಪಿಸಬಹುದಾಗಿ ತಿಳಿಸಿದರು. ಗೋಷ್ಠಿಯಲ್ಲಿ ಡಿ.ಎಚ್.ಸುಬ್ಬಣ್ಣ ಉಪಸ್ಥಿತರಿದ್ದರು.